Asianet Suvarna News Asianet Suvarna News

Karnataka electioin 2023: ಅಭ್ಯರ್ಥಿ ಖರ್ಚು ಭರಿಸಿದ್ದ ಕುಷ್ಟಗಿ ಮತದಾರರು

ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ವಿಶಿಷ್ಟವಾಗಿದೆ.ಇಲ್ಲಿಯ ಮತದಾರರು ನೀಡುವ ತೀರ್ಪು ಸಹ ವಿಶೇಷ ಗಮನ ಸೆಳೆಯುತ್ತಾ ಬಂದಿದೆ. 15 ಸಾರ್ವತ್ರಿಕ ಚುನಾವಣೆ ಎದುರಿಸುವ ಕುಷ್ಟಗಿಯಲ್ಲಿ ಇದುವರೆಗೂ ಉಪ ಚುನಾವಣೆ ನಡೆದಿಲ್ಲ ಎಂಬುದು ವಿಶೇಷ.

Karnataka election 2023: amregowda patil vs doddanagowda patil kushtagi assembly constituency rav
Author
First Published Apr 30, 2023, 3:23 PM IST

ಸೋಮರಡ್ಡಿ ಅಳವಂಡಿ

ಕೊಪ್ಪಳ (ಏ.30) : ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ವಿಶಿಷ್ಟವಾಗಿದೆ.ಇಲ್ಲಿಯ ಮತದಾರರು ನೀಡುವ ತೀರ್ಪು ಸಹ ವಿಶೇಷ ಗಮನ ಸೆಳೆಯುತ್ತಾ ಬಂದಿದೆ. 15 ಸಾರ್ವತ್ರಿಕ ಚುನಾವಣೆ ಎದುರಿಸುವ ಕುಷ್ಟಗಿಯಲ್ಲಿ ಇದುವರೆಗೂ ಉಪ ಚುನಾವಣೆ ನಡೆದಿಲ್ಲ ಎಂಬುದು ವಿಶೇಷ.

1952 ರ ಚುನಾವಣೆಯಲ್ಲಿಯೇ ಇಲ್ಲಿಯ ಮತದಾರರು ಗಾಂಧಿವಾದಿ ಅಂದನಾನಪ್ಪ ಚಿನಿವಾಲರ ಅವರನ್ನು ಗೆಲ್ಲಿಸುವ ಮೂಲಕ ದಾಖಲೆ ಬರೆದಿದ್ದರು ಮತ್ತು ಉತ್ತುಂಗದ ಸ್ಥಿತಿಯಲ್ಲಿದ್ದ ಕಾಂಗ್ರೆಸ್‌ ಪಾಠ ಹೇಳಿದ ಕ್ಷೇತ್ರ ಇದು ಎನ್ನುವುದು ಗಮನಾರ್ಹ ಸಂಗತಿ. 1957 ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ವತಂತ್ರ ಯೋಧ ಪುಂಡಲೀಕಪ್ಪ ಜ್ಞಾನಮೂಟೆ ಸ್ಪರ್ಧಿಸಿದರು. ಅವರಿಗೆ ಠೇವಣಿ ಇಡುವುದಕ್ಕೂ ಹಣ ಇರಲಿಲ್ಲ. ಅಷ್ಟುಕಷ್ಟಇತ್ತು. ಆದರೆ, ಇಲ್ಲಿಯ ಮತದಾರರು ಮಾತ್ರ ಅವರ ಚುನಾವಣೆಯ ಖರ್ಚನ್ನು ಸಹ ತಾವೇ ನೀಡುವ ಮೂಲಕ ಅವರ ಬೆನ್ನಿಗೆ ನಿಂತರು ಹಾಗೂ ಗೆಲ್ಲಿಸುವಲ್ಲಿಯೂ ಯಶಸ್ವಿಯಾದರು. ಇವರಿಗೆ ಮತದಾನ ಮಾಡಿದ ಕೆಲವರು ಅದರ ಜತೆಗೆ ಹಣ ಸೇರಿಸಿ ಹಾಕಿದ್ದು ವಿಶೇಷ. ಇದಾದ ಮರು ಚುನಾವಣೆಯಲ್ಲಿಯೇ ಈ ಕ್ಷೇತ್ರದ ಮತದಾರರು ಶಿವಮೂರ್ತಿಸ್ವಾಮಿ ಅಳವಂಡಿ ಅವರು ಇದ್ದ ಲೋಕಸೇವ ಸಂಘ ಪಕ್ಷವನ್ನು ಬೆಂಬಲಿಸಿ ಕಾಂತರಾವ್‌ ದೇಸಾಯಿ ಅವರನ್ನು ಆಯ್ಕೆ ಮಾಡಿದರು.

ಚುನಾವಣೆ ಪ್ರಚಾರಕ್ಕೆ ಕೂಲಿ ಕಾರ್ಮಿಕರು; ಕೃಷಿ ಕೆಲಸಕ್ಕೆ ಸಿಗುತ್ತಿಲ್ಲ ಜನರು!

ಹೀಗೆ ಕಾಂಗ್ರೆಸ್‌ ಪಕ್ಷದ ಸವಾರಿ ಇಲ್ಲಿ ಸಾಗುತ್ತಲೇ ಇದ್ದಾಗ 1985 ರಲ್ಲಿ ಜೆಎನ್‌ಪಿ ಪಕ್ಷದ ಎಂ.ಎಸ್‌.ಪಾಟೀಲ್‌ ಅವರು ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ ನಾಗಲೋಟಕ್ಕೆ ಬ್ರೇಕ್‌ಹಾಕಲಾಯಿತು. ಈಗಿನ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್‌ ಅವರ ತಂದೆ ಹನುಮಗೌಡ 1983 ಮತ್ತು 1989ರಲ್ಲಿ ಎರಡು ಬಾರಿ ಶಾಸಕರಾಗಿ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿದ್ದಾರೆ. 1994 ರಲ್ಲಿ ಜನತಾದಳ ಪಕ್ಷದಿಂದ ಕೆ.ಶರಣಪ್ಪ ಆಯ್ಕೆಯಾದರು.

ಕಾಂಗ್ರೆಸ್‌ ಜೆಡಿಎಸ್‌ಗೆ ಬ್ರೇಕ್‌:

ಅಪ್ಪ ಕಾಂಗ್ರೆಸ್‌ ಪಕ್ಷದಲ್ಲಿಯೇ ಶಾಸಕರಾಗಿದ್ದರೂ ದೊಡ್ಡನಗೌಡ ಪಾಟೀಲ್‌ ಬಿಜೆಪಿ ಜಿಪಂ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿ, 2004 ರಲ್ಲಿ ಬಿಜೆಪಿಯಿಂದ ಅಖಾಡಕ್ಕೆ ಇಳಿದು ಗೆಲುವು ಸಾಧಿಸುವ ಮೂಲಕ ಕುಷ್ಟಗಿಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಿಸಿದರು. ಇದಾದ ಮೇಲೆ ದೊಡ್ಡನಗೌಡರು ಬಿಜೆಪಿಯನ್ನೇ ಮೈಗೂಡಿಸಿಕೊಂಡು, ಅದರಲ್ಲಿಯೇ ಮುಂದುವರೆದ್ದಾರೆ.

2008 ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅಮರೇಗೌಡ ಬಯ್ಯಾಪುರ ಸ್ಪರ್ಧೆ ಮಾಡಿ, ದೊಡ್ಡನಗೌಡ ಅವರನ್ನು ಸೋಲಿಸುವ ಮೂಲಕ ಜಯ ದಾಖಲಿಸಿ, ಕುಷ್ಟಗಿ ಕ್ಷೇತ್ರದಲ್ಲಿ ಮತ್ತೆ ಕೈ ಮೇಲೆದ್ದು ನಿಲ್ಲುವಂತೆ ಮಾಡಿದರು.

2013 ರಲ್ಲಿ ದೊಡ್ಡನಗೌಡ ಬಿಜೆಪಿಯಿಂದ ಸ್ಪರ್ಧೆ ಮಾಡಿ, ಜಯ ಸಾಧಿಸಿದರೇ 2018 ರಲ್ಲಿ ಪುನಃ ಅಮರೇಗೌಡ ಬಯ್ಯಾಪುರ ಜಯ ಸಾಧಿಸಿ, ಶಾಸಕರಾಗಿದ್ದಾರೆ. ಈಗ 2023 ರಲ್ಲಿ ಯಾರಿಗೆ ಜಯ ಎನ್ನುವುದೇ ಸದ್ಯದ ಕುತೂಹಲವಾಗಿದೆ.

ಮತ್ತೊಮ್ಮೆ ಗೆದ್ದಿಲ್ಲ:

ಈ ಕ್ಷೇತ್ರದ ಇತಿಹಾಸ ಎಂದರೇ 1952 ರಿಂದ ಇಲ್ಲಿಯವರೆಗೂ ಒಮ್ಮೆ ಗೆದ್ದವರು ಮತ್ತೊಮೆ ಗೆದ್ದ ಇತಿಹಾಸ ಇಲ್ಲ. ನಿರಂತರವಾಗಿ ಎರಡು ಬಾರಿ ಯಾರೂ ಗೆಲ್ಲದೆ ಇರುವುದರಿಂದ ಈ ದಾಖಲೆಯನ್ನು ಯಾರು ಮುರಿಯುತ್ತಾರೆ ಎನ್ನುವುದೇ ಕ್ಷೇತ್ರದಲ್ಲಿರುವ ಕುತೂಹಲ.

ಮೂರು ಬಾರಿಯೂ ಗೆದ್ದಿಲ್ಲ:

1952 ರಿಂದ ಇಲ್ಲಿಯವರೆಗೂ ಯಾರೂ ಸಹ ಮೂರು ಬಾರಿ ಶಾಸಕರಾಗಿರುವ ಉದಾಹರಣೆ ಇಲ್ಲ. ಅಬ್ಬಬ್ಬಾ ಎಂದರೆ ಎರಡು ಬಾರಿ ಶಾಸಕರಾಗಿದ್ದಾರೆ. ಅದು ನಿರಂತರವಾಗಿ ಅಲ್ಲ. ಅಂಥ ಅವಕಾಶ ಈಗ ಹಾಲಿ ಶಾಸಕ ಅಮರೇಗೌಡ ಬಯ್ಯಾಪುರ ಹಾಗೂ ದೊಡ್ಡನಗೌಡ ಪಾಟೀಲ್‌ ಯಾರೇ ಗೆದ್ದರೂ ಮೂರು ಬಾರಿ ಶಾಸಕರಾದ ಮೊದಲ ಶಾಸಕರು ಎನ್ನುವ ಪಟ್ಟದೊರೆಯಲಿದೆ.

ಮೋದಿ ನಾಗರಹಾವು ಆದ್ರೆ, ಸೋನಿಯಾ ಗಾಂಧಿ ವಿಷಕನ್ಯೆನಾ?: ಯತ್ನಾಳ್‌

ಅಮರೇಗೌಡ ಗೆದ್ದರೇ ದಾಖಲೆ :

ಅಮರೇಗೌಡ ಬಯ್ಯಾಪುರ ಈ ಬಾರಿ ಗೆದ್ದಿದ್ದೇ ಆದರೆ ಸತತವಾಗಿ ಎರಡು ಬಾರಿ ಗೆಲ್ಲುವುದಿಲ್ಲ ಎನ್ನುವ ಸಂಪ್ರದಾಯಕ್ಕೆ ಬ್ರೇಕ್‌ ಬೀಳಲಿದೆ ಮತ್ತು ಮೂರು ಬಾರಿ ಶಾಸಕರಾದ ಮೊದಲ ಶಾಸಕ ಎನ್ನುವ ದಾಖಲೆ ನಿರ್ಮಾಣವಾಗಲಿದೆ.

Follow Us:
Download App:
  • android
  • ios