ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಯ ಚರ್ಚೆ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿದ್ದರೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌(Dr G Parameshwar) ಬುಧವಾರ ಸಂಜೆವರೆಗೆ ಮನೆಯಿಂದ ಹೊರಗೆ ಬರದೆ ಕುತೂಹಲ ಮೂಡಿಸಿದರು.

 ಬೆಂಗಳೂರು (ಮೇ.28) ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಯ ಚರ್ಚೆ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿದ್ದರೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌(Dr G Parameshwar) ಬುಧವಾರ ಸಂಜೆವರೆಗೆ ಮನೆಯಿಂದ ಹೊರಗೆ ಬರದೆ ಕುತೂಹಲ ಮೂಡಿಸಿದರು.

ಸಂಜೆವರೆಗೆ ಮನೆಯಿಂದ ಹೊರಬರದೆ ಮನೆಯಲ್ಲಿದ್ದ ಗೃಹಸಚಿವ

ನಾಯಕತ್ವ ಬದಲಾವಣೆ ಕುರಿತಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಬಹುತೇಕ ಎಲ್ಲ ಶಾಸಕರು, ಸಚಿವರು ದಿನವಿಡೀ ಚಟುವಟಿಕೆಯಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನಿವಾಸ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ(Randeep surjewala) ಭೇಟಿಯಲ್ಲಿ ತೊಡಗಿದ್ದರು. ಆದರೆ, ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಡಾ.ಪರಮೇಶ್ವರ್‌ ಮಾತ್ರ ಸಂಜೆವರೆಗೆ ಮನೆಯಲ್ಲಿಯೇ ಇದ್ದರು.

ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಹೋಮ, ವಿಶೇಷ ಪೂಜೆ

ಬುಧವಾರ ಬೆಳಗ್ಗೆ ತಮ್ಮ ಮನೆಯಲ್ಲಿ ಏರ್ಪಡಿಸಿದ್ದ ಹೋಮ, ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಡಾ.ಪರಮೇಶ್ವರ್‌, ಮಧ್ಯಾಹ್ನದ ನಂತರ ಮನೆಯಲ್ಲಿ ರಿಲ್ಯಾಕ್ಸಾಗಿದ್ದರು. ಸಂಜೆ 6 ಗಂಟೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕಾಗಮಿಸಿ ಅವರೊಂದಿಗೆ ಚರ್ಚೆ ನಡೆಸಿದರು. ನಂತರ ಸಿದ್ದರಾಮಯ್ಯ ನಿವಾಸಕ್ಕಾಗಮಿಸಿದ ಸುರ್ಜೇವಾಲಾ ಅವರೊಂದಿಗೂ ಪ್ರತ್ಯೇಕ ಮಾತುಕತೆ ನಡೆಸಿದರು.