ಗ್ರೇಟರ್​ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಜೂನ್​ ಅಂತ್ಯದೊಳಗೆ ಮುಗಿಸುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ.

 ನವದೆಹಲಿ : ಗ್ರೇಟರ್​ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಜೂನ್​ ಅಂತ್ಯದೊಳಗೆ ಮುಗಿಸುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ.

ಜೂನ್​ 30 ರೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಜೂನ್​ 30 ರೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತು.

ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನಸಿಂಘ್ವಿ, ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಮೀಸಲಾತಿ ಪ್ರಕ್ರಿಯೆ ಬಳಿಕ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲ ಕೆ.ಎನ್.ಫಣೀಂದ್ರ, ಮೇ ಕೊನೆಯ ವಾರದವರೆಗೂ ಅವಕಾಶ ನೀಡಬೇಕು. ಮೇ 26ರೊಳಗೆ ಜಿಬಿಎ ಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

6 ವರ್ಷಗಳ ಬಳಿಕ ಚುನಾವಣೆ

ಬಿಬಿಎಂಪಿ, ಈಗ ಜಿಬಿಎ ಸ್ವರೂಪ ಪಡೆದಿದ್ದು, ಕಳೆದ ಆರು ವರ್ಷಗಳಿಂದ ಪಾಲಿಕೆ ಜನಪ್ರತಿನಿಧಿಗಳಿಲ್ಲದೆ ಸೊರಗುತ್ತಿದೆ. ಸುಪ್ರೀಂಕೋರ್ಟ್‌ವೊಂದರಲ್ಲೇ ಈ ಸಂಬಂಧ ಅರ್ಜಿ 21 ಭಾರಿ ವಿಚಾರಣೆಗೆ ಬಂದಿದೆ. ಅಂತಿಮವಾಗಿ 22ನೇ ಬಾರಿಗೆ, ಚುನಾವಣೆಗೆ ಮುಹೂರ್ತ ಕೂಡಿ ಬರುತ್ತಿದೆ.

ಪಾಲಿಕೆಗೆ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಿ ಮಾಜಿ ಕಾರ್ಪೋರೇಟರ್ ಎಮ್ ಶಿವರಾಜ್, ಭಾಸ್ಕರ್ ಹಾಗೂ ಅಂಬೇಡ್ಕರ್ ಸಮಿತಿಗಳು ಕಾನೂನು ಹೋರಾಟ ನಡೆಸಿದ್ದವು.