Asianet Suvarna News Asianet Suvarna News

ದೊಡ್ಡಬಳ್ಳಾಪುರ ಜನೋತ್ಸವದಲ್ಲಿ ಜೆ.ಪಿ.ನಡ್ಡಾ ಭಾಗಿ: ವಿಜಯೇಂದ್ರ

ದೊಡ್ಡಬಳ್ಳಾಪುರದಲ್ಲಿ ಸೆ.8ರಂದು ಬಿಜೆಪಿಯಿಂದ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. 

JP Nadda attending in Doddaballapur Janotsav says BY Vijayendra gvd
Author
First Published Sep 7, 2022, 3:57 PM IST

ಶಿವಮೊಗ್ಗ (ಸೆ.07): ದೊಡ್ಡಬಳ್ಳಾಪುರದಲ್ಲಿ ಸೆ.8ರಂದು ಬಿಜೆಪಿಯಿಂದ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷಾಂತರ ಸಂಖ್ಯೆಯಲ್ಲಿ ಜನರು, ಫಲಾನುಭವಿಗಳು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಬಹಳ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನೋತ್ಸವ ಕಾರ್ಯಕ್ರಮದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲಾಗುತ್ತದೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಸಂಘಟನೆಯನ್ನು ಮತ್ತಷ್ಟುಬಲಪಡಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು. ಬೆಂಗಳೂರಿನಲ್ಲಿ ಹಾಗೂ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿತಿ ಇದೆ. ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳೆಲ್ಲರೂ ಕೂಡ ಪ್ರವಾಹ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವ ಕುರಿತು ಗಮನ ಹರಿಸಿದ್ದಾರೆ. 

ಬಿ.ವೈ.ವಿಜಯೇಂದ್ರಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲ್

ಮುಖ್ಯಮಂತ್ರಿ ಅವರು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಜೊತೆಗೆ ಚರ್ಚೆ ಮಾಡಿದ್ದಾರೆ. ಮಳೆ ಸಾಕಷ್ಟುಅನಾಹುತವನ್ನು ತಂದೊಡ್ಡಿದ್ದು, ಮಳೆಯಿಂದಾಗಿ ತೊಂದರೆಗೆ ಸಿಲುಕಿದವರಿಗೆ ಸರ್ಕಾರ ಎಲ್ಲ ರೀತಿಯ ಅಗತ್ಯ ನೆರವು ಕಲ್ಪಿಸಲು ಬದ್ಧವಾಗಿದೆ ಎಂದರು. ಭ್ರಷ್ಟಾಚಾರೋತ್ಸವ ಎಂದು ಕಾಂಗ್ರೆಸ್‌ ನಾಯಕರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಯಾರೋ ಒಬ್ಬರು ಆರೋಪ ಮಾಡುತ್ತಾರೆ. ಕಾಂಗ್ರೆಸ್‌ ನ ಕೆಲ ನಾಯಕರು ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಏಳೆಂಟು ತಿಂಗಳಲ್ಲಿ ಚುನಾವಣೆ ಬರಲಿದೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೆಸ್‌ ಬಯಸುತ್ತಿದೆ. 

ನೀರಿನಿಂದ ಹೊರ ಬಂದ ಮೀನಿನ ಹಾಗೆ ಕಾಂಗ್ರೆಸ್‌ ಪಕ್ಷದವರು ಒದ್ದಾಡುತ್ತಿದ್ದಾರೆ. ಅಧಿಕಾರ ಇಲ್ಲದೇ ವಿರೋಧ ಪಕ್ಷದಲ್ಲಿ ಕೂರುವ ಸಂಯಮ ಅವರಿಗಿಲ್ಲ. ಅಧಿಕಾರದಲ್ಲೇ ಇರಬೇಕು. ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೆಲ್ಲ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದರು. ಸರ್ಕಾರದ ವಿರುದ್ಧ ಕಂಟ್ರಾಕ್ಟರೊಬ್ಬರು ಮಾಡಿದ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಹಿನ್ನೆಲೆ ಇರುವವರು ಆರೋಪ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಆರೋಪ ಕೇಳಿಬರುವುದು ಸಹಜ. ಇದನ್ನು ಬಿಜೆಪಿ ಎದುರಿಸುತ್ತದೆ. ತಕ್ಕ ಉತ್ತರವನ್ನು ಚುನಾವಣಾ ಸಂದರ್ಭದಲ್ಲಿ ನೀಡುತ್ತದೆ ಎಂದರು.

ಮೈಸೂರಿನಲ್ಲಿ ಮೇಯರ್‌ ಹಾಗೂ ಉಪ ಮೇಯರ್‌ ಸ್ಥಾನ ಎರಡು ಬಿಜೆಪಿಗೆ ಸಿಕ್ಕಿರುವುದು ಬಹಳ ಸಂತೋಷವಾಗಿದೆ. ವಿಶೇಷವಾಗಿ ಐತಿಹಾಸಿಕ ನಗರಿ ಮೈಸೂರು ಇವರ ನೇತೃತ್ವದಲ್ಲಿ ಬಹಳಷ್ಟುಅಭಿವೃದ್ಧಿ ಆಗಬೇಕು. ಇದು ಅಲ್ಲಿನ ಜನರ ನಿರೀಕ್ಷೆ ಕೂಡ ಹೌದು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ನಮ್ಮಲ್ಲಿದೆ ಎಂದರು. ಮುದ್ದ ಹನುಮೇಗೌಡ ಬಿಜೆಪಿಗೆ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ ಮುದ್ದಹನುಮೇಗೌಡ ಸೇರ್ಪಡೆ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಅಧ್ಯಕ್ಷರು ದಿನಾಂಕ ನಿಗದಿ ಮಾಡುತ್ತಾರೆ. ಕೇವಲ ಲಕ್ಷ್ಮೀ ನಾರಾಯಣ ಹಾಗೂ ಮುದ್ದಹನುಮೇಗೌಡ ಮಾತ್ರವಲ್ಲ. 

ಮುಂದಿನ ದಿನಗಳಲ್ಲಿ ಹಲವು ನಾಯಕರು ಬಿಜೆಪಿ ಕಾರ್ಯಕ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದರು. ಬಿಜೆಪಿ ವಲಸಿಗರ ಪಕ್ಷ ಎದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಯಾವ ಪಕ್ಷದಿಂದ ಬಂದವರು? ಕಾಂಗ್ರೆಸ್‌ ಪಕ್ಷ ಒಂದು ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷ ಆಗಿತ್ತು. ಈಗ ಸ್ಥಳೀಯ ಪಕ್ಷವಾಗಿ ಉಳಿದುಕೊಂಡಿದೆ. ಕೇವಲ ಕರ್ನಾಟಕದಲ್ಲಿ ವಿರೋಧ ಪಕ್ಷ ಹಾಗೂ ರಾಜಸ್ಥಾನದಲ್ಲಿ ಅಧಿಕಾರದಲ್ಲಿ ಉಳಿದುಕೊಂಡಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಧೂಳಿಪಟ ಆಗಿದೆ. 

ಕಾಂಗ್ರೆಸ್‌ ನಾಯಕತ್ವದ ವಿಶ್ವಾಸವನ್ನು ದೇಶದ ಜನರು, ರಾಜ್ಯದ ಜನರು ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿ ಅಂತಹ ದಿಟ್ಟನಾಯಕತ್ವ ಮೆಚ್ಚಿ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಎಲ್ಲ ಕಡೆ ಬಿಜೆಪಿ ಸೇರುತ್ತಿದ್ದಾರೆ. ಇದನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು. ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನೇ ಕಳೆದು ಕೊಂಡಿದೆ. ಇದು ಭಾರತ… ಜೋಡೋ ಅಲ್ಲ ಕಾಂಗ್ರೆಸ್‌ ಜೋಡೋ ಯಾತ್ರೆ ಇದು. ಕಳೆದ ಎರಡು ಮೂರು ತಿಂಗಳಿಂದ ಗುಲಾಮ್ ನಬಿ ಆಜಾದ್ ಅವರಿಂದ ಹಿಡಿದು ದೊಡ್ಡ ಡೊಡ್ಡ ನಾಯಕರು ಕಾಂಗ್ರೆಸ್‌ ಪಕ್ಷದ ನಾಯಕತ್ವಕ್ಕೆ ಬೇಸತ್ತು ಪಕ್ಷ ಬಿಟ್ಟಿದ್ದಾರೆ. ಕೆಲವರು ಹೊಸ ಪಕ್ಷವನ್ನು ಕಟ್ಟುತ್ತಿದ್ದಾರೆ. ಇನ್ನು ಕೆಲವರು ಬೇರೆ ಬೇರೆ ಪಕ್ಷಕ್ಕೆ ಸೇರುತ್ತಿದ್ದಾರೆ. 

ಯಾರಿಗೆ ಯೋಗ ಇದೆಯೋ ಅವರು ಸಿಎಂ ಆಗುತ್ತಾರೆ: ಸಚಿವ ಬಿ.ಸಿ.ಪಾಟೀಲ್

ಹೀಗಾಗಿ ಇದು ಭಾರತ್ ಜೋಡೋ ಯಾತ್ರೆ ಅಲ್ಲ, ಕಾಂಗ್ರೆಸ್‌ ಜೋಡೋ ಯಾತ್ರೆ ಆಗಲಿದೆ ಎಂದು ವ್ಯಂಗ್ಯವಾಡಿದರು. ಇದರ ಬಗ್ಗೆ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿ ಭಯವಿಲ್ಲ. ಅವರು ಯಾತ್ರೆ ಮಾಡಬೇಕು. ಏಕೆಂದರೆ ಯಪಿಎ ಸರ್ಕಾರ ನಡೆಸಿದ ಹಗರಣದ ಬಗ್ಗೆ ಅವರೇ ಜನರಿಗೆ ತಿಳಿಸುತ್ತಾರೆ. ಹಾಗಾಗಿ ಬಿಜೆಪಿ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದರು. ಪ್ರಧಾನಿ ಮೋದಿ ಶಿವಮೊಗ್ಗ ಭೇಟಿ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದವರು, ರಾಜ್ಯದ ನಾಯಕರು ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತಾರೆ. ಮುಂದಿನ ಹದಿನೈದು ದಿನಗಳಲ್ಲಿ ದಿನಾಂಕ ನಿಗದಿಯಾಗುತ್ತದೆ ಎಂದರು.

Follow Us:
Download App:
  • android
  • ios