Asianet Suvarna News Asianet Suvarna News

Hijab Row ಶಿಕ್ಷಕನಾಗಿ, ಜನಪ್ರತಿನಿಧಿಯಾಗಿ ಹಿಜಾಬ್ ವಿವಾದದ ಬಗ್ಗೆ ದತ್ತಾ ನೇರ ಮಾತು

* ಕರ್ನಾಟಕದಲ್ಲಿ ಮುಂದುವರಿದ ಹಿಜಾಬಬ್ ಕಿಚ್ಚು
* ಹಿಜಾಬ್‌ಗೆ ಅವಕಾಶ ನೀಡುವಂತೆ ವಿದ್ಯಾರ್ಥಿನಿಯರ ಪಟ್ಟು
* ಹಿಜಾಬ್ ವಿವಾದದ ಬಗ್ಗೆ ಶಿಕ್ಷಕನಾಗಿ, ಜನಪ್ರತಿನಿಧಿಯಾಗಿ ದತ್ತಾ ಮಾತು

JDS Leader YSV Datta Talks about Hijab In Karnataka Education rbj
Author
Bengaluru, First Published Feb 18, 2022, 5:02 PM IST

ಬೆಂಗಳೂರು, (ಫೆ.18): ಹಿಜಾಬ್ (Hijab Row)ಹಾಗೂ ಕೇಸರಿ ವಿವಾದ ಕರ್ನಾಟಕ ಶಿಕ್ಷಣ (Karnataka Education) ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು, ಹಿಂದೂ-ಮುಸ್ಲಿಂ ಗೆಳೆತನಕ್ಕೆ ಹಿಜಾಬ್ ಕಿಡಿ ಹೊತ್ತಿಕೊಂಡಿದೆ. 

ಉಡುಪಿಯ (Udupi) ಕಾಲೇಜುವೊಂದರಲ್ಲಿ ಶುರುವಾದ ಈ ಹಿಜಾಬ್ ವಿವಾದ ಇದೀಗ ರಾಜ್ಯದ ಮೂಲೆ-ಮೂಲೆಗೂ ವ್ಯಾಪಿಸಿದ್ದು, ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದರ ಮಧ್ಯೆ ಜೆಡಿಎಸ್‌ ನಾಯಕ, ಮಾಜಿ ಶಾಸಕ ಹಾಗೂ ಮೇಷ್ಟು ಆಗಿದ್ದ ವೈ.ಎಸ್‌.ವಿ. ದತ್ತಾ(YSV Datta) ಅವರು ಈ ಹಿಜಾಬ್ ವಿವಾದದ ಬಗ್ಗೆ ಸಂಕ್ಷಿಪ್ತವಾಗಿ ಸಾಮಾಜಿಕ ಜಾಲನಾತಣಗಳಲ್ಲಿ ಬರೆದುಕೊಂಡಿದ್ದಾರೆ. ಅದು ಈ ಕೆಳಗಿನಂತಿದೆ ನೋಡಿ.

Hijab Row ಕರ್ನಾಟಕದಲ್ಲಿ ಅಚ್ಚರಿ ಬೆಳವಣಿಗೆ, ಹಿಜಾಬ್‌ಗಾಗಿ ವೃತ್ತಿಗೆ ರಾಜೀನಾಮೆ ಕೊಟ್ಟ ಉಪನ್ಯಾಸಕಿ ಹೇಳಿದ್ದಿಷ್ಟು

ಹಿಜಾಬ್‌ ಬಗ್ಗೆ ದತ್ತಾ ಬರೆದುಕೊಂಡಿದ್ದು ಹೀಗೆ
ಕುವೆಂಪುರವರ ಸೌಹಾರ್ದತೆಯ ನೆಲೆಗಟ್ಟನ್ನು ಆದರ್ಶವಾಗಿಟ್ಟುಕೊಂಡ ಕರ್ನಾಟಕ ರಾಜ್ಯದಲ್ಲಿ ಕಳೆದಷ್ಟು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ನನ್ನಲ್ಲಿ ರಾಜ್ಯದ ಭವಿಷ್ಯದ ಬಗ್ಗೆ ಆತಂಕವನ್ನುಂಟು ಮಾಡಿದೆ.ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಹಿಂದು,ಕ್ರೈಸ್ತ,ಮುಸಲ್ಮಾನ,ಜೈನ,ಸಿಕ್ಖರೆಲ್ಲರು ತಮಗಿಷ್ಟದ ಧರ್ಮಗಳನ್ನು ಅನುಸರಿಸಿಕೊಂಡು ಸಹಬಾಳ್ವೆ ನಡೆಸುತ್ತಿದ್ದಾರೆ.

ನಾನೊಬ್ಬ ಶಿಕ್ಷಕನಾಗಿ,ಜನಪ್ರತಿನಿಧಿಯಾಗಿ ನೂರಾರು ಶಾಲಾ,ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಹಿಜಾಬ್ ತೊಟ್ಟ ಹುಡುಗಿಯರು,ಕುಂಕುಮವಿಟ್ಟುಕೊಂಡ ಹುಡುಗಿಯರು ಒಟ್ಟಿಗೆ ಕಲಿಯುವುದನ್ನು,ನಲಿಯುವುದನ್ನು ಕಣ್ಣಾರೆ ಕಂಡಿದ್ದೇನೆ ಎಂದಿದ್ದಾರೆ.

ಹಾಗೆ ಒಟ್ಟಾಗಿ ಇರುವುದೆ ಈ ಭಾರತವೆಂಬ ಜಾತ್ಯಾತೀತ ನೆಲದ ಗುಣ ಮತ್ತು ಪರಂಪರೆ.ವಿವಿಧತೆಯಲ್ಲಿ ಏಕತೆಯೆ ಈ ಭಾರತ ಒಕ್ಕೂಟದ ಧ್ಯೇಯ.ವಿವಿಧ ಸಂಸ್ಕೃತಿಗಳನ್ನು ಗೌರವಿಸುತ್ತ ಏಕತೆಯಿಂದ ಬದುಕುವುವರೆ ನಿಜವಾದ ಭಾರತೀಯರು. ಸ್ವತಂತ್ರ್ಯಾ ನಂತರ ಕಳೆದ ಎಪ್ಪತ್ತು ವರ್ಷಗಳಿಂದ ಇಲ್ಲದ ಈ ಸಮಸ್ಯೆ ಏಕಾಏಕಿಯಾಗಿ ಈಗ ಹುಟ್ಟಿಕೊಂಡಿರುವುದಕ್ಕೆ ಕಾರಣ ಯಾರು ಎಂಬುದು ಗೋಡೆಯ ಮೇಲೆ ಬರೆದ ಬರಹದಷ್ಟೆ ಸ್ಪಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯ ಬಳಿ ಹೇಳಿಕೊಳ್ಳುವಂತಹ ಯಾವ ಅಭಿವೃದ್ಧಿಯ ಕೆಲಸಗಳು ಇಲ್ಲದೆ ಇರುವುದರಿಂದ ಈ ನಾಡಿನ ಹಿಂದು-ಮುಸಲ್ಮಾನರ ಸೌಹಾರ್ದತೆಯನ್ನು ಕೆಡಿಸಿ,ಜಗಳವಾಡಿಸಿ ಆ ಮೂಲಕ ಮತ ವಿಭಜನೆಮಾಡಲು ಹೊರಟಿರುವ ನಡೆ ಅದರಲ್ಲೂ ವಿಶೇಷವಾಗಿ‌ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ಅಸಹ್ಯ ರಾಜಕಾರಣದ ಪರಮಾವಧಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷಾತೀತವಾಗಿ ನಾಡಿನ ಸರ್ವ ಜಾತಿ,ಜನಾಂಗದ ಜನರ ಹಿತ ಬಯಸುವುದು ರಾಜಕಾರಣಿಗಳಾದ ನಮ್ಮ ಕರ್ತವ್ಯ.
ಜನಪ್ರತಿನಿಧಿಗಳಾದವರು ಅಧಿಕಾರ ಸ್ವೀಕರಿಸುವಾಗ ಬಾಬಾ ಸಾಹೇಬ್ ಅಂಬೇಡ್ಕರರು ಬರೆದ ಸಂವಿಧಾನದ ಮೇಲೆ ಮಾಡಿರುವ ಪ್ರಮಾಣವನ್ನು ಮರೆತು ದೇಶದ ಜಾತ್ಯಾತೀತ ಸಿದ್ಧಾಂತವನ್ನು ಗಾಳಿಗೆ ತೂರುವ ಹೇಳಿಕೆ ಕೊಟ್ಟು ಜನರ ನೆಮ್ಮದಿ,ಶಾಂತಿಯನ್ನು ಕದಡಬೇಡಿ ಎಂದು ಬರೆದುಕೊಂಡಿದ್ದಾರೆ.

ಕೋರ್ಟ್‌ನಲ್ಲಿ ಹಿಜಾಬ್
ಇನ್ನು ಈ ಹಿಜಾಬ್ ವಿವಾದ ಪ್ರಕರಣ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ವಿದ್ಯಾರ್ಥಿನಿಯ ಪರ ವಕೀಲರು ಸುದೀರ್ಘವಾಗಿ ತಮ್ಮ ವಾದ ಮಂಡಿಸಿದ್ದಾರೆ. ಇದೀಗ ಸರ್ಕಾರದ ಪರ ವಕೀಲರು ವಾದ ಮಾಡುತ್ತಿದ್ದಾರೆ.

ಇದಕ್ಕೂ ಮೊದಲು ಹೈಕೋರ್ಟ್‌ ಅಂತಿಮ ಆದೇಶ ನೀಡುವವರೆಗೂ ಯಾವುದೇ ಧರ್ಮದ ಸಂಕೇತದಲ್ಲಿ ತರಗತಿ ಅಥವಾ ಶಾಲೆ, ಕಾಲೇಜಿಗೆ ಬರುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ. ಆದ್ರೆ, ಮುಸ್ಲಿಂ ವಿದ್ಯಾರ್ಥಿನಿಯರು ಇದಕ್ಕೆ ಒಪ್ಪುತ್ತಿಲ್ಲ. ಹಿಜಾಬ್ ಹಾಕಿಕೊಂಡೇ ತರಗತಿಗೆ ಬರುತ್ತೇವೆ. ಇಲ್ಲಂದ್ರೆ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಹಿಜಾಬ್‌ಗೆ ಅವಕಾಶ ಕೊಡಬೇಕೆಂದು ಕೆಲವೆಡೆ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. 

ಈ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಕರ್ನಾಟಕ ಹೈಕೊರ್ಟ್ ಈ ಬಗ್ಗೆ ಯಾವ ತೀರ್ಪು ನೀಡಲಿದೆ ಎಂದು ಎಲ್ಲರೂ ಕಾದು ಕುಳಿತ್ತಿದ್ದಾರೆ.

Follow Us:
Download App:
  • android
  • ios