* ಕರ್ನಾಟಕದಲ್ಲಿ ತಾರಕಕ್ಕೇರಿದ ಹಿಜಾಬ್ ಕಿಚ್ಚು* ಹಿಜಾಬ್ ಪ್ರಶ್ನಿಸಿದ್ದಕ್ಕೆ ವೃತ್ತಿಗೆ ರಾಜೀನಾಮೆ ನೀಡಿದ ಉಪನ್ಯಾಸಕಿ* ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ನೀಡಿರುವ ಬಗ್ಗೆ ಸ್ಪಷ್ಟನೆ ಕೊಟ್ಟ ಚಾಂದಿನಿ 

ತುಮಕೂರು, (ಫೆ.18): ಕರ್ನಾಟಕದಲ್ಲಿ ಹಿಜಾಬ್ ಕಿಚ್ಚು (Hijab Row) ಇಂದು(ಶುಕ್ರವಾರ) ಮುಂದುವರೆದಿದ್ದು, ಹಿಜಾಬ್ ತೆಗೆಯುವುದಿಲ್ಲ. ಪ್ರತ್ಯೇಕ ಕೊಠಡಿಯಲ್ಲಿ ಪಾಠ ಕೇಳಲ್ಲ. ಎಲ್ಲರ ಜೊತೆ ಹಿಜಾಬ್ ಹಾಕಿಕೊಂಡೆ ಪಾಠ ಪ್ರವಚನ ಕೇಳುತ್ತೇವೆ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.

Add Asianetnews Kannada as a Preferred SourcegooglePreferred

ಇದರ ಮಧ್ಯೆ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ತುಮಕೂರು (Tumakuru) ಜೈನ್​ ಅತಿಥಿ ಉಪನ್ಯಾಸಕಿ(Guest Lecturer) ಚಾಂದಿನಿ ನಾಝ್ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಈ ಬಗ್ಗೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

Hijab Row : ರಾಜೀನಾಮೆ ಕೊಟ್ಟ ಉಪನ್ಯಾಸಕಿ ಚಾಂದಿನಿ, ಅಯೂಬ್ ಖಾನ್‌ಗೆ ಜಾಮೀನಿಲ್ಲ

ಇನ್ನು ತಮ್ಮ ರಾಜೀನಾಮೆ ಬಗ್ಗೆ ಸ್ವತಃ ಚಾಂದಿನಿ ನಾಝ್ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನ ಆತ್ಮಗೌರಕ್ಕೆ ಧಕ್ಕೆ ಉಂಟಾಯಿತು.ಹಾಗಾಗಿ ನಿನ್ನೆ ದಿನ ನನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ನಾನು ಜೈನ್ ಕಾಲೇಜಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದೆ. ಅಲ್ಲಿಂದ ಇಲ್ಲಿವರೆಗೂ ಏನೂ ತೊಂದರೆ ಆಗಿರಲಿಲ್ಲ. ಆದರೆ ನಿನ್ನೆ(ಫೆ.17) ಪ್ರಾಂಶುಪಾಲರು ಕರೆದು ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಸಂಕೇತದ ಬಟ್ಟೆ ಧರಿಸಿ ಪಾಠ ಮಾಡಬಾರದು ಎಂದು ಆದೇಶ ಬಂದಿದೆ ಎಂದು ಹೇಳಿದ್ದರು. ಆದರೆ ನಾನು ಮೂರು ವರ್ಷದಿಂದ ಹಿಜಾಬ್ ಧರಿಸಿಯೇ ಪಾಠ ಮಾಡ್ತಾ ಇದ್ದೆ. ಈ ಬೆಳವಣಿಗೆಯಿಂದಾಗಿ ನನ್ನ ಆತ್ಮಗೌರಕ್ಕೆ ಧಕ್ಕೆ ಉಂಟಾಯಿತು. ಹಾಗಾಗಿ ನಿನ್ನೆ ದಿನ ನನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದೇನೆ ಎಂದಿದ್ದಾರೆ.

ತುಮಕೂರಿನ ತಿಪಟೂರು ಮೂಲದ ಚಾಂದಿನಿ ಜೈನ್ ಪಿಯು ಕಾಲೇಜು, ವಿದ್ಯಾವಾಹಿನಿ ಕಾಲೇಜು ಸೇರಿದಂತೆ ತುಮಕೂರು ನಗರದ ಹಲವು ಕಡೆ ಅತಿಥಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಹಿಜಾಬ್ ಮಧ್ಯೆ ಕುಂಕುಮ ವಿವಾದ
ವಿಜಯಪುರ: ಹಿಜಾಬ್ ವಿವಾದದ ಜೊತೆಗೆಯೇ ಈಗ ಸಿಂಧೂರ(ಕುಂಕುಮ ವಿವಾದ ಶುರುವಾಗಿದೆ. ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಯೋರ್ವನಿಗೆ ಕಾಲೇಜು ಪ್ರವೇಶ ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಿಜಾಬ್​ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು, ಹಿಂದೂ ವಿದ್ಯಾರ್ಥಿನಿಯರು ಕುಂಕುಮ ಹಚ್ಚಿಕೊಂಡು ಬರುತ್ತಾರಲ್ಲಾ ಎಂದು ಪ್ರಶ್ನಿಸಿದ್ದಳು. ಇಂದು ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಶಾಲಾ ಪ್ರವೇಶ ನಿರಾಕರಣೆ ಮಾಡಲಾಗಿದ್ದು, ಪರಿಣಾಮ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಮಧ್ಯೆ ಕೆಲಕಾಲ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ.