ಫೋನ್ ಟ್ಯಾಪಿಂಗ್ ಆರೋಪದ ಕುರಿತು ಸಿಎಂ ಸಿದ್ದರಾಮಯ್ಯಗೆ ಚಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ. ತಾವು ಫೋನ್ ಟ್ಯಾಪ್ ಮಾಡಿಲ್ಲವೆಂದು ದೇವರ ಮೇಲೆ ಪ್ರಮಾಣ ಮಾಡುವಂತೆ ಆಗ್ರಹಿಸಿದ್ದು, ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ ಎಂದು ಗುತ್ತಿಗೆದಾರರ ಸಮಸ್ಯೆ ಮತ್ತು ಕಟ್ಟಡ ಕುಸಿತದ ವಿಚಾರವಾಗಿ ವಾಗ್ದಾಳಿ 

ಬೆಂಗಳೂರು (ಮಾ.3): ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಡಿರುವ ಫೋನ್ ಟ್ಯಾಪಿಂಗ್ ಆರೋಪಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ತಳ್ಳಿ ಹಾಕಿದ್ದು, ಇದೊಂದು ಹತಾಶ ಜೀವಿಗಳ ಹೇಳಿಕೆ' ಸಿಎಂ ಟೀಕಿಸಿದ ಬೆನ್ನಲ್ಲೇ ಇದೀಗ ಅದೇ ವಿಚಾರವಾಗಿ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.

ಫೋನ್ ಟ್ಯಾಪ್ ಮಾಡಿಲ್ವ? ನೀವು ನಂಬುವ ದೇವರ ಮೇಲೆ ಪ್ರಮಾಣ ಮಾಡಿ

ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಚಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವರು ಯಾವ ದೇವರನ್ನ ನಂಬುತ್ತಾರೋ ಆ ದೇವರ ಮೇಲೆ ಪ್ರಮಾಣ ಮಾಡಿ 'ನಾನು ಫೋನ್ ಟ್ಯಾಪ್‌ ಮಾಡಿಲ್ಲ' ಎಂದು ಹೇಳಲಿ ಇಲ್ಲವೇ ಸೆಂಟ್ರಲ್ ಏಜೆನ್ಸಿಗೆ ಕೊಟ್ಟು ತನಿಖೆ ಮಾಡಿಸಲಿ ಎಂದಿರುವ ಅವರು, ಸಿಎಂ ಎಲ್ಲೆಲ್ಲಿ ಫೋನ್ ಟ್ಯಾಪ್ ಮಾಡಿಸಿದ್ದಾರೆ ಅನ್ನೋದು ನಮಗೂ ಗೊತ್ತಿದೆ. ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಈ ವ್ಯವಸ್ಥೆಯಲ್ಲಿ ಹೇಗೆಲ್ಲ ನಡೆಯುತ್ತೆ ಅನ್ನೋದು ಗೊತ್ತಿದೆ ಹೀಗಾಗಿ ಅವರು ಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ದೇವೇಗೌಡರ ಬಗ್ಗೆ ಹಗುರ ಮಾತನಾಡೋ ಸರಿಯಲ್ಲ ಎಂದರು.

ಅಧಿಕಾರ ಇಲ್ಲದಿದ್ದಾಗ ನೀವು ನಿರುದ್ಯೋಗಿ ಆಗಿದ್ರಾ?

ಶಾಸಕರ ಚಲನವಲನ ತಿಳಿಯಲು ಫೋನ್ ಟ್ಯಾಪ್ ಆಗಿರೋದು ಎಲ್ಲರೂ ಮಾತನಾಡ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕೆಲವಿಲ್ಲದೆ ಆರೋಪ ಮಾಡ್ತಿದ್ದಾರೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರು, ಹಿಂದೆ ತಾವು ಅಧಿಕಾರ ಇಲ್ಲದಾಗ ನಿರುದ್ಯೋಗಿ ಆಗಿದ್ರಾ? ನುಣುಚಿಕೊಳ್ಳುವ ಬದಲು ಫೋನ್ ಟ್ಯಾಪಿಂಗ್ ಆಗಿರುವುದಕ್ಕೆ ಉತ್ತರ ಕೊಡಿ. ಡಿಕೆಶಿ, ಪರಮೇಶ್ವರ್ ಅಥವಾ ಸಿಎಂ ಆಗಬೇಕೆನ್ನುವವರ ಫೋನ್ ಟ್ಯಾಪ್ ಆಗಿರುವುದ ಸ್ಪಷ್ಟ ಎಂದರು.

ಡಿಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯರ ನಡುವಿನ ಸಂಬಂಧ ಹಾಲು-ಜೇನಿನಂತೆ ಎಂಬ ಹೇಳಿಕೆಗೆ ವ್ಯಂಗ್ಯವಾಡಿದ ಚಲವಾದಿ ನಾರಾಯಣಸ್ವಾಮಿ ಅವರು, ಇಬ್ಬರ ನಡುವೆ ಎಂಥ ಸಂಬಂಧವಿದೆ ಅಂತಾ ಜನರೇ ಮಾತಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರೇ ನೀವು ಜೆಡಿಎಸ್‌ನಿಂದ ಕಾಂಗ್ರೆಸ್ ಗೆ ಬಂದವರು, ಡಿಕೆಶಿಗೆ ಸರ್ಟಿಫಿಕೇಟ್ ಕೊಡಬೇಕಾ ? ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ

ಕಂಟ್ರಾಕ್ಟರ್ಸ್ ಪ್ರತಿಭಟನೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಚಲವಾದಿ ನಾರಾಯಣಸ್ವಾಮಿ ಅವರು, ಈ ಸರ್ಕಾರ(ಕಾಂಗ್ರೆಸ್) ಪಾಪರ್ ಚೀಟಿ ಸರ್ಕಾರವಾಗಿದೆ. ಲೋನ್ ತಗೊಂಡ ಮೇಲೆ ಹಣ ಕಟ್ಟಲಾಗದಿದ್ರೆ ಅದನ್ನ ಪಾಪರ್ ಚೀಟಿ ಕರೀತಾರೆ. ಮಾನ್ಯ ಮುಖ್ಯಮಂತ್ರಿಗಳಿಗೂ ಇದೇ ಪರಿಸ್ಥಿತಿ ಬಂದಿದೆ. ಹಿಂದೆ ಕಲ್ಬುರ್ಗಿ ಡಿಸಿ ಕಾರು ಜಪ್ತಿ ಮಾಡಿದ್ರು. ಯಾಕೆ ಕಾರು ಜಪ್ತಿ ಮಾಡಿದ್ರು? ಕಾರಣ ಅಲ್ಲಿ ಹಣ ಕಟ್ಟಿರಲಿಲ್ಲ ಅಂತ. ಯಾರು ಹೆಚ್ಚು ಕಮೀಷನ್ ಕೊಡ್ತಾರೆ, ಅಂಥವರಿಗೆ ಹಣ ಬಿಡುಗಡೆ ಮಾಡ್ತಾರೆ. ಹಣ ಬಿಡುಗಡೆ ಆಗದಿದ್ರೆ ಕಮಿಷನ್ ಎಲ್ಲಿಂದ ಕೊಡ್ತಾರೆ? 60-70% ನಿಮಗೇ ಕಮೀಷನ್ ಕೊಟ್ರೆ, ಕಾಂಟ್ರಾಕ್ಟರ್ ಎಲ್ಲಿ ಕಾಮಗಾರಿ ಮಾಡ್ತಾರೆ? ಅದಕ್ಕೇ ಛಾವಣಿ ಕುಸಿದುಬಿದ್ದಿದೆ. 

ಜನವರಿ 11ರಂದು ಪ್ರಬುದ್ಧರು ಉದ್ಘಾಟನೆ ಮಾಡಿದ್ದಾರು. ಆದರೆ ಒಂದೇ ತಿಂಗಳಲ್ಲಿ ಛಾವಣಿ ಕುಸಿದುಬಿದ್ದಿದೆ. 50 ದಿನ ಉಳಿದಿದ್ದಕ್ಕೆ ಟ್ವೀಟ್ ಮಾಡಿದ್ದೇನೆ. ಈ ಸಾಧನೆಗಾಗಿ ಮಂತ್ರಿಗೆ ಪ್ರೈಸ್ ಕೊಡಬೇಕಾ? ಕಂಟ್ರಾಕ್ಟರ್‌ಗೆ ಪ್ರೈಸ್ ಕೊಡಬೇಕಾ? ಪ್ರಬುದ್ಧರು ಉತ್ತರ ಕೊಡಲಿ ಎನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಹೇಳದೇ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.