Ramanagara: ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ
ನಾನು ರಾಜಕಾರಣದಲ್ಲಿ ಬೇರೆಯವರಂತೆ ಗಣಿಗಾರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಹಣ ಮಾಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಮನಗರ (ಡಿ.19): ನಾನು ರಾಜಕಾರಣದಲ್ಲಿ ಬೇರೆಯವರಂತೆ ಗಣಿಗಾರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಹಣ ಮಾಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಪಂಚರತ್ನ ರಥಯಾತ್ರೆಯಲ್ಲಿ ಆಗಮಿಸಿ ಹಾರೋಹಳ್ಳಿ - ಮರಳವಾಡಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣಕ್ಕೆ ಬರುವುದಕ್ಕೂ ಮುಂಚೆ ಬಿಡದಿಯ ಕೇತಗಾನಹಳ್ಳಿಯಲ್ಲಿ ಕೃಷಿ ಮಾಡಿ ಸಂಪಾದನೆ ಮಾಡಿದಷ್ಟೇ ಆಸ್ತಿ ನನ್ನದು.
ಶಾಪಿಂಗ್ ಮಾಲ್, ಕಟ್ಟಡ ಕಟ್ಟಲು ರಾಜಕಾರಣದಲ್ಲಿ ಹಣ ಮಾಡಿಲ್ಲ ಎಂದರು. ನಾನು ಯಾವ ರೀತಿ ಬದುಕಿದ್ದೇನೆ ಎಂಬುದನ್ನು ನೀವೇ ನೊಂಡಿದ್ದೀರಿ. ಇಲ್ಲಿ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೂ ಅಡ್ಡಿ ಮಾಡುತ್ತಾರೆ. ಆದರೂ ನಿಮ್ಮ ಕಷ್ಟಮತ್ತು ಸಮಸ್ಯೆಗಳಿಗೆ ನಾವಿದ್ದೇವೆ. ನಿಮ್ಮ ಮಡಿಲಿಗೆ ನಿಖಿಲ್ ನನ್ನು ಹಾಕಿದ್ದೇನೆ. ಅವನನ್ನು ಯಾವ ರೀತಿಯಲ್ಲಿ ಬೆಳೆಸುತ್ತೀರಾ ಎಂಬುದು ನಿಮಗೆ ಬಿಟ್ಟಿದ್ದು. ನನ್ನ ಹಾಗೂ ನಮ್ಮ ತಂದೆಯವರಂತೆ ಅವನನ್ನು ನಿಮ್ಮ ಮನೆ ಮಗನಾಗಿ ಬೆಳೆಸಿ ಎಂದು ಮನವಿ ಮಾಡಿದರು.
ರಾಮನಗರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಶಕ್ತಿ ಪ್ರದರ್ಶನ
ನನ್ನ ಅಧಿಕಾರ ದುರ್ಬಳಸಿಕೊಂಡಿಲ್ಲ: ಈ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದವರ ಹಲವರ ಮಕ್ಕಳು ಅಧಿಕಾರವನ್ನು ಯಾವರೀತಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಿದ್ದೀರಿ. ಆದರೆ ನಿಖಿಲ್ ಕುಮಾರಸ್ವಾಮಿ ಯಾವತ್ತೂ ಸಹ ನಾನು ಮುಖ್ಯಮಂತ್ರಿ ಆಗಿದ್ದಾಗ ಬರಲಿಲ್ಲ. ಆ ರೀತಿಯಲ್ಲಿ ನನ್ನ ಮಗನನ್ನು ಬೆಳೆಸಿದ್ದೇನೆ. ಅವನನ್ನು ಬೆಳೆಸುವುದು ನಿಮ್ಮ ಜವಾಬ್ದಾರಿ ಎಂದು ಹೇಳಿದರು. ಮತ್ತೊಂದು ಪಕ್ಷದ ಜೊತೆಗೆ ಸೇರಿ ಕೆಲಸ ಮಾಡಲು ಆಗುವುದಿಲ್ಲ. ಈಗಾಗಲೇ ಬಿಜೆಪಿಯವರು ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗದಂತೆ ಕಾಪಾಡುತ್ತೇನೆ. ಈ ಬಾರಿ ಸ್ವತಂತ್ರವಾಗಿ ಕೆಲಸ ಮಾಡಲು ಸ್ಪಷ್ಟಬಹುಮತ ನೀಡುವಂತೆ ಕುಮಾರಸ್ವಾಮಿ ಜನರಲ್ಲಿ ಕೋರಿದರು.
ತಾಲೂಕು ಘೋಷಣೆಯಲ್ಲಿ ಅನಿತಾ ಪಾತ್ರ: ಹಾರೋಹಳ್ಳಿಯ ಪೇಟೆ ಬೀದಿ ನೋಡಿ ನೋವಾಯಿತು. ಅಲ್ಲಿ ರಸ್ತೆ, ಚರಂಡಿ ವ್ಯವಸ್ಥೆಗಳು ಹಾಳಾಗಿವೆ. ಇದಕ್ಕೆ ಬಿಜೆಪಿ ಸರ್ಕಾರದ ಕುತಂತ್ರ ಕಾರಣವೇ ಹೊರತು ನಾನಾಗಲಿ ಅಥವಾ ಶಾಸಕಿ ಅನಿತಾ ಕುಮಾರಸ್ವಾಮಿ ಅಲ್ಲ. ನನ್ನ ಸರ್ಕಾರ ಬಂದ ಕೂಡಲೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆ ಎಂದರು. ಹಾರೋಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದೇವೆ. ಇದರಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪ್ರಯತ್ನವೂ ಇದೆ. ಈಗಾಗಲೇ 12ಕ್ಕೂ ಹೆಚ್ಚು ಅಧಿಕಾರಗಳನ್ನು ನೇಮಕ ಮಾಡಲಾಗಿದೆ. ಆದರೆ, ಪಕ್ಕದ ಕ್ಷೇತ್ರದ ಮಹಾನುಭಾವರು ಆಡಳಿತ ವ್ಯವಸ್ಥೆ ಹಾಳುಗೆಡುವಿದ್ದಾರೆ ಎಂದು ಡಿಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಯಾರು ಎಷ್ಟೇ ಪಿತೂರಿ ಮಾಡಿದರು ಹಾರೋಹಳ್ಳಿಯನ್ನು ತಾಲೂಕು ಅನ್ನಾಗಿ ಮಾಡಿದ್ದೇವೆ. ನಾನು ಸಹ ಕುಮಾರಸ್ವಾಮಿ ಅವರಂತೆಯೇ ಶ್ರಮ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಸಾಗುವಳಿ ಚೀಟಿ ಸೇರಿದಂತೆ ಈ ಭಾಗದ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದೇನೆ. ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದೇನೆ. ನಾಳೆಯೇ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದೇನೆ. ನನಗೆ ಕೊಟ್ಟಪ್ರೀತಿ ವಿಶ್ವಾಸವನ್ನು ನನ್ನ ಮಗನಿಗೂ ನೀಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿರವರು ರೈತರ ಸಾಲಮನ್ನಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಉತ್ತಮ ಆಡಳಿತ ನೀಡಿದರು. ಶಾಸಕಿ ಅನಿತಾರವರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮುಂದೆ ಪಂಚರತ್ನ ಯೋಜನೆಗಳು ಜಾರಿ ಆಗಬೇಕಾದರೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರುವಂತೆ ಕೋರಿದರು.
Mandya: ಡಿ.24ಕ್ಕೆ ಮೇಲುಕೋಟೆಗೆ ಪಂಚರತ್ನ ರಥಯಾತ್ರೆ: ಶಾಸಕ ಸಿ.ಎಸ್.ಪುಟ್ಟರಾಜು
ಮರಳವಾಡಿ ಹೋಬಳಿಯ ತಟ್ಟೆಕೆರೆ, ಶಿವನಹಳ್ಳಿ ಗ್ರಾಮದ ರೈತರಿಗೆ ಅರಣ್ಯಾಧಿಕಾರಿಗಳು ತೊಂದರೆ ನೀಡುತ್ತಿದ್ದು ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು. ಮರಳವಾಡಿ ವ್ಯಾಪ್ತಿಯಲ್ಲಿ ರಿಂಗ್ ರಸ್ತೆಗೆ ಭೂಮಿ ನೀಡುತ್ತಿರುವ ರೈತರಿಗೆ ಉತ್ತಮ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುವುದು.
- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ