ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದವರು ರಾಜಕಾರಣ ಪ್ರವೇಶಿಸುತ್ತಿದ್ದಾರೆ. ಮದ್ದೂರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತೊಮ್ಮೆ ಸ್ಪರ್ಧಿಸುತ್ತಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಗುರುವಾರ ಹೇಳಿದರು.

ಮದ್ದೂರು (ಅ.13): ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದವರು ರಾಜಕಾರಣ ಪ್ರವೇಶಿಸುತ್ತಿದ್ದಾರೆ. ಮದ್ದೂರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತೊಮ್ಮೆ ಸ್ಪರ್ಧಿಸುತ್ತಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಗುರುವಾರ ಹೇಳಿದರು. ತಾಲೂಕಿನ ಕೆಸ್ತೂರು ಜಿಪಂ ಕ್ಷೇತ್ರ ವ್ಯಾಪ್ತಿಯ ಅಡಗನಹಳ್ಳಿ, ಬಸವಲಿಂಗನದೊಡ್ಡಿ, ಚಿಕ್ಕಅಂಕನಹಳ್ಳಿ, ಕುರುಬರು ದೊಡ್ಡಿ, ಹೂತಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ಉದ್ದೇಶಿಸಿ ಮಾತನಾಡಿದರು. ಅನುಭವ ಇಲ್ಲದವರು ರಾಜಕೀಯ ಪ್ರವೇಶ ಮಾಡುವುದರಿಂದ ಕ್ಷೇತ್ರದ ಅಭಿವೃದ್ಧಿ ಹಿನ್ನಡೆಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ನಾನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದರು.

Add Asianetnews Kannada as a Preferred SourcegooglePreferred

ರಾಜಕೀಯ ಸೇವೆ ಎನ್ನುವುದನ್ನು ಮರೆತು ಬೇರೆಲ್ಲೋ ಉದ್ಯಮ ಮಾಡಿಕೊಂಡಿರುವ ವ್ಯಕ್ತಿಗಳು ಉದ್ಯಮದಲ್ಲಿ ಸಂಪಾದಿಸಿದ ಪಾಪದ ಹಣವನ್ನು ಚುನಾವಣೆಯಲ್ಲಿ ಸುರಿದು ದುಪ್ಪಟ್ಟು ಹಣ ದೋಚುವ ಹುನ್ನಾರದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದರಿಂದ ಮದ್ದೂರು ಕ್ಷೇತ್ರದ ಜನರಿಗೆ ಯಾವುದೇ ಉಪಯೋಗವಾಗುವುದಿಲ್ಲ ಎಂದರು. ನಾನು ರಾಜಕೀಯದಲ್ಲಿ ಹಣ ಸಂಪಾದನೆಗಿಂತ ಕಳೆದುಕೊಂಡಿದ್ದೆ ಹೆಚ್ಚು. ಬೇರೆ ರಾಜಕಾರಣಿಗಳ ರೀತಿ ಹೃದಯದಲ್ಲಿ ವಿಷವಿಟ್ಟುಕೊಂಡು ನಾಲಿಗೆಯಲ್ಲಿ ಅಮೃತ ಸುರಿಸುವ ಬುದ್ಧಿ ನನಗಿಲ್ಲ. ನನ್ನ ವಂಶಕ್ಕೂ ಬಂದಿಲ್ಲ. ಜನಸೇವೆ ಉದ್ದೇಶದಿಂದ ರಾಜಕೀಯಕ್ಕೆ ಬಂದು ನನ್ನ ಆಸ್ತಿಪಾಸ್ತಿ ಕಳೆದುಕೊಂಡು ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತಿದ್ದೇನೆ ಎಂದು ಗದ್ಗದಿತರಾದರು.

Mandya: ಪ್ರತಿಮೆಗಳು ಯುವಪೀಳಿಗೆಗೆ ಪ್ರೇರಣೆಯಾಗಲಿ: ಚುಂಚಶ್ರೀ

ಮದ್ದೂರು ಕ್ಷೇತ್ರದಲ್ಲಿ ಶಾಸಕನಾಗಿ ಬಂದ ನಂತರ ಕಳೆದ 50 ವರ್ಷಗಳಿಂದ ಆಯ್ಕೆಯಾಗಿದ್ದ ಯಾವ ಶಾಸಕರು ಮಾಡದ ಅಭಿವೃದ್ಧಿ ಕೆಲಸಗಳನ್ನು ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿ ನನಗಾಗಿದೆ ಎಂದರು. ನಮ್ಮ ಜೆಡಿಎಸ್‌ ಪಕ್ಷದಿಂದಲೇ ಕೆಸ್ತೂರು ಜಿಪಂ ಮತ್ತು ತಾಪಂ ಕ್ಷೇತ್ರಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಕೇವಲ ಹಾರ ತುರಾಯಿ ಹಾಕಿಸಿಕೊಂಡು ಅಭಿವೃದ್ಧಿ ವಿಚಾರದಲ್ಲಿ ಮತ ನೀಡಿದ ಜನರಿಗೆ ವಂಚನೆ ಮಾಡಿ ಹಣ ಲೂಟಿ ಮಾಡಿ ಪಕ್ಷದ್ರೋಹ ಮಾಡಿದ್ದಾರೆ. ಇಂತಹವರನ್ನು ಮೊದಲು ಬೀದಿಯಲ್ಲಿ ನಿಲ್ಲಿಸಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಚಾಮನಹಳ್ಳಿ ಸ್ವಾಮಿ, ಜಿಲ್ಲಾ ಜೆಡಿಎಸ್‌ ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್‌, ಹೂತಗೆರೆ ಗ್ರಾಪಂ ಅಧ್ಯಕ್ಷ ರವಿ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಹೂತಗೆರೆ ದಿಲೀಪ್‌, ಜಗದೀಶ ಇತರರು ಇದ್ದರು.

ಜೆಡಿಎಸ್‌ನಿಂದ ಜನ ಸೇವಾ ರಥಕ್ಕೆ ಚಾಲನೆ: ಗೊಲ್ಲರ ಸಮುದಾಯದಲ್ಲಿ ಋುತುಮತಿಯಾದ ಹಾಗೂ ಬಾಣಂತಿಯರನ್ನು ಗುಡಿಸಲಿನಲ್ಲಿ ಇರಿಸುವ ಪದ್ಧತಿ ಇಂದಿಗೂ ಜೀವಂತವಾಗಿದೆ. ಅವರ ಆರೋಗ್ಯ ಮತ್ತು ಆರೈಕೆ ದೃಷ್ಟಿಯಿಂದ ಮೂಲ ಸೌಕರ್ಯ ಒಳಗೊಂಡ ಕಟ್ಟಡ ನಿರ್ಮಿಸಿಕೊಡಲು ಚಿಂತನೆ ನಡೆಸಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು. ತಾಲೂಕಿನ ಕೆಸ್ತೂರು ಜಿಪಂ ವ್ಯಾಪ್ತಿಯಲ್ಲಿ ಜೆಡಿಎಸ್‌ನಿಂದ ಹಮ್ಮಿಕೊಂಡಿರುವ ಜನ ಸೇವಾ ರಥಕ್ಕೆ ಚಾಲನೆಗೆ ಮುನ್ನಾ ಗೊಲ್ಲರದೊಡ್ಡಿ ಗ್ರಾಮದ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜನಾಂಗದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಮಳವಳ್ಳಿ: ಪುಟ್ಟ ಬಾಲಕಿ ಮೇಲೆ ಕಾಮುಕ ಕಾಂತರಾಜು ಅತ್ಯಾಚಾರ, ಕೊಲೆ!

ಇಂತಹ ಪದ್ಧತಿ ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ಮೂಲ ಸೌಲಭ್ಯ ಒಳಗೊಂಡ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದೆ. ಜನಾಂಗದವರು ವಿರೋಧ ಮಾಡಿ ನಮ್ಮ ಪೂರ್ವಜರ ಪದ್ಧತಿ ಕೈಬಿಡುವುದಿಲ್ಲ ಎಂದರು. ಅನಂತರ ಅಧಿಕಾರಿಗಳು ಗುಡಿಸಿಲಿನಲಿಟ್ಟು ಆರೈಕೆ ಮಾಡುವ ಪದ್ಧತಿ ವಿರುದ್ಧ ಕ್ರಮ ವಹಿಸಿದ್ದರು. ಈ ಬಗ್ಗೆ ಗೊಲ್ಲರ ಜನಾಂಗದ ಆಚಾರ ವಿಚಾರಗಳಿಗೆ ಅಡ್ಡಿ ಬರದಂತೆ ಸೂಚಿಸಿದ್ದೇನೆ ಎಂದರು. ಗೊಲ್ಲರದೊಡ್ಡಿ ಶ್ರೀವೇಣುಗೋಪಾಲ ದೇವಾಲಯದ ಅಭಿವೃದ್ಧಿಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡುವಂತೆ ಮುಜರಾಯಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇದು ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಿ 10 ಲಕ್ಷ ರು.ಅನುದಾನ ತಂದು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.