Asianet Suvarna News Asianet Suvarna News

Mandya: ಪ್ರತಿಮೆಗಳು ಯುವಪೀಳಿಗೆಗೆ ಪ್ರೇರಣೆಯಾಗಲಿ: ಚುಂಚಶ್ರೀ

ಸಾಧಕರ ಪ್ರತಿಮೆಗಳು ಯುವ ಪೀಳಿಗೆಗೆ ಆದರ್ಶವಾಗಿ, ಪ್ರೇರಣೆಯಾಗಿ ಉಳಿಯಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

Let the idols inspire the youths says dr nirmalanandanatha swamiji gvd
Author
First Published Oct 13, 2022, 9:45 PM IST

ಮಂಡ್ಯ (ಅ.13): ಸಾಧಕರ ಪ್ರತಿಮೆಗಳು ಯುವ ಪೀಳಿಗೆಗೆ ಆದರ್ಶವಾಗಿ, ಪ್ರೇರಣೆಯಾಗಿ ಉಳಿಯಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಹೊಳಲು ಗ್ರಾಮದಲ್ಲಿ ಡಾ.ಎಚ್‌.ಡಿ.ಚೌಡಯ್ಯ ಪ್ರತಿಮೆ ನಿರ್ಮಾಣ ಸಮಿತಿಯಿಂದ ನಿರ್ಮಿಸಿರುವ ಎಚ್‌.ಡಿ ಚೌಡಯ್ಯ ಪ್ರತಿಮೆ ಅನಾವರಣಗೊಳಿಸಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಆದರ್ಶಗಳಿಗೆ ಕೊರತೆ ಏನೂ ಇಲ್ಲ. ಹಣ, ಅಧಿಕಾರವಿರುವವರು ಆದರ್ಶಗಳ ಮೌಲ್ಯವನ್ನು ಕುಂಠಿತಗೊಳಿಸಬಹುದು. ಆದರೆ, ನಾಯಕರಾಗುವವರು ಆದರ್ಶಗಳ ಮಟ್ಟಕ್ಕೆ ಬೆಳೆಯಬೇಕು. 

ಮನಸ್ಸನು ಉದ್ದೀಪನಗೊಳಿಸುವ ವ್ಯಕ್ತಿಗಳ ಪ್ರತಿಮೆಗಳಿಂದ ಯುವಕರ ಮನಸ್ಸಿಗೆ ಶಕ್ತಿ ಬರುತ್ತದೆ ಎಂದರು. ಆದರ್ಶ ಪುರುಷರ ಪ್ರತಿಮೆಗಳ ದರ್ಶನವಾದಾಗ ಉದ್ದೀಪನಗೊಂಡು ಮೌಲ್ಯಗಳು ನೆನಪಿಗೆ ಬರುವುದಾದರೆ ಅಂತಹ ಹತ್ತಾರು ಪ್ರತಿಮೆಗಳಿದ್ದರೂ ತೊಂದರೆ ಇಲ್ಲ. ಚೌಡಯ್ಯನವರು ಅಂತಹ ಪ್ರೇರಕರಾಗಿ ನಿಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು. ಸ್ವಾಮಿ ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರು ಆದರ್ಶವಾದರೆ, ವಿವೇಕಾನಂದರು ಅರವಿಂದರಿಗೆ ಆದರ್ಶವಾದರು. ನಮ್ಮ ಯುವಕರು ವಿದೇಶಗಳ ಕನಸು ಕಾಣದೆ ದೇಶದಲ್ಲಿ ಬೇಕಾದಷ್ಟುಬದಲಾವಣೆಗಳಾಗಿದ್ದು ಇಲ್ಲಿಯೇ ತೊಡಗಿಸಿಕೊಂಡು ಸಾಧನೆ ಮಾಡಬೇಕು. ಹಿರಿಯರು ಮಕ್ಕಳಿಗೆ ಆದರ್ಶಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದರು.

Mandya : ಕುಂಭಮೇಳ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ನಮ್ಮಂತಹ ನಾಯಕರಿಗೆ ಚೌಡಯ್ಯನವರು ಪ್ರೀತಿಯಿಂದ ಆಶೀರ್ವಾದ ಮಾಡಿದ್ದಾರೆ. ಶಿಸ್ತನ್ನು ಅಳವಡಿಸಿಕೊಂಡಿದ್ದರಿಂದ ಸಮಾರಂಭಕ್ಕೆ ತಡವಾಗಿ ಬಂದರೆ ಪ್ರೀತಿಯಿಂದ ಗದರುತ್ತಿದ್ದರು. ಕೆ.ವಿ.ಶಂಕರಗೌಡ, ಎಸ್‌.ಎಂ.ಕೃಷ್ಣ, ಜಿ.ಮಾದೇಗೌಡರಂತೆ ಚೌಡಯ್ಯನವರು ಎಲ್ಲರನ್ನೂ ಒಗ್ಗೂಡಿಸಿ ಜಿಲ್ಲೆಯನ್ನು ಮುನ್ನಡೆಸಿದ್ದಾರೆ. ಮಂಡ್ಯ ಎಂದರೆ ಇಂಡಿಯಾ ಎಂಬಂತೆ ಚೌಡಯ್ಯನವರ ವಿಷಯ ದೆಹಲಿಯಲ್ಲೂ ಪ್ರಸ್ತಾಪವಾಗುತ್ತಿತ್ತು. ಶಾಸಕರಾಗಿ, ಪಿಇಟಿ ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಅವರು ನಡೆದಂತಹ ದಾರಿಯಲ್ಲಿ ಹೆಜ್ಜೆ ಹಾಕುವ ಶಕ್ತಿ ನಮಗೆ ಬರಲಿ ಎಂದು ಪ್ರಾರ್ಥಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ ಅವರಿಗೆ ಡಾ.ಎಚ್‌.ಡಿ.ಚೌಡಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಥಳೀಯ ಸಾಧಕರಾದ ಮೂಳೆ ಮತ್ತು ಕೀಲು ಶಸ್ತ್ರ ಚಿಕಿತ್ಸಕ ಡಾ.ಎಚ್‌.ಎಸ್‌.ರವಿಕುಮಾರ್‌ ಹಾಗೂ ಬಂಟ್ವಾಳ ತಾಲೂಕು ತಹಸೀಲ್ದಾರ್‌ ಡಾ.ಸ್ಮಿತಾರಾಮು ಅವರನ್ನು ಜನತಾ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌ ಸನ್ಮಾನಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಹೊಳಲು ಸರ್ಕಾರಿ ಪ್ರೌಢಶಾಲೆಯ ಎಚ್‌.ಕೆ.ವಿಸ್ಮಯ, ಎಚ್‌.ಕೆ.ಸತ್ಯಮೂರ್ತಿ ಹಾಗೂ ಶ್ರೀವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯ ಎಸ್‌.ದಿಶಾ, ಸಿ.ಎಸ್‌.ಭುವನ್‌ ಅವರಿಗೆ ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಶ್ರೀನಿವಾಸ್‌, ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ, ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಶಾಸಕ ಎಚ್‌.ಬಿ.ರಾಮು, ಹೊಳಲು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್‌.ಡಿ.ರವಿ, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಚ್‌.ಎಂ.ಕುಮಾರ್‌, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಪದ್ಮಾ ನಾಗರಾಜು ಭಾಗವಹಿಸಿದ್ದರು. ಸಮಾರಂಭದಲ್ಲಿ ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಎಚ್‌.ಎಲ್‌.ಶಿವಣ್ಣ, ಕಾರ್ಯದರ್ಶಿ ಲಿಂಗಪ್ಪ, ಎಚ್‌.ಸಿ.ಹರಿಪ್ರಸಾದ್‌, ಮೋಹನ್‌, ಎಚ್‌.ಬಿ. ಶಿವಣ್ಣ, ಎಚ್‌.ಸಿ.ಶ್ರೀಧರ್‌ ಮುಂತಾದವರಿದ್ದರು.

ಕಾನೂನುಬದ್ಧ, ಶಿಸ್ತುಬದ್ಧ ಚೌಡಯ್ಯ: ಸಾರ್ವಜನಿಕ, ಸಹಕಾರ ಮತ್ತು ಆಡಳಿತ ಕ್ಷೇತ್ರದಲ್ಲಿ ಶಿಸ್ತು ಮತ್ತು ಕಾನೂನುಬದ್ಧ ನಡವಳಿಕೆಗೆ ಎಚ್‌.ಡಿ.ಚೌಡಯ್ಯ ಹೆಸರಾಗಿದ್ದರು ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ಕಾಯಕಯೋಗಿ ಡಾ.ಎಚ್‌.ಡಿ.ಚೌಡಯ್ಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಎಲ್ಲವೂ ಕಾನೂನುಬದ್ಧ, ಶಿಸ್ತುಬದ್ಧವಾಗಿರಬೇಕು ಎನ್ನುವ ಕಾರಣಕ್ಕೆ ಆಗಾಗ್ಗೆ ನಮ್ಮ ಮತ್ತು ಅವರ ನಡುವೆ ಸಂಘರ್ಷ ಇರುತ್ತಿತ್ತು. ಆದರೂ ತಕ್ಷಣವೇ ಆತ್ಮೀಯತೆಯಿಂದ ನಮ್ಮನ್ನು ತಿದ್ದುತ್ತಿದ್ದರು. ನಮ್ಮಂತಹ ಯುವ ನಾಯಕರಿಗೆ ಸಹಕಾರ ತತ್ವದ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಸಮಾಜಕ್ಕೆ ಹತ್ತಾರು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಷ್ಟ್ರವೇ ಒಪ್ಪುವ ನಾಯಕತ್ವ ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

Mandya: ರಾಜ್ಯ ಸರ್ಕಾರದ ವಿರುದ್ಧ ದಿನೇಶ್‌ ಗೂಳಿಗೌಡ ಆಕ್ರೋಶ

ಜಿಲ್ಲೆ ಅಭಿವೃದ್ಧಿಯಾಗಬೇಕು ಎನ್ನುವ ಮಾತುಗಳನ್ನು ಸದಾ ಅವರು ನೆನಪಿಸುತ್ತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಶಿಸ್ತುಬದ್ಧ ನಡವಳಿಕೆಯಿಂದ ಎಲ್ಲರ ಗಮನಸೆಳೆದಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡಿ ಸಮಾಜದ ಎಲ್ಲ ಜನರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದಾರೆ. ಅವರನ್ನು ಕಳೆದುಕೊಂಡದ್ದು ನೋವಿನ ಸಂಗತಿ. ನಾವು ಅವರ ಮಟ್ಟಕ್ಕೆ ಬೆಳೆದು, ರಾಜಕೀಯವಾಗಿ ಗೌರವ ಪಡೆದುಕೊಳ್ಳಲು, ಆಡಳಿತದಲ್ಲಿ ಸುಧಾರಣೆ ತರುವುದು ಕಷ್ಟದ ಕೆಲಸ. ಅಂತಹ ಮಹನೀಯರು ಮತ್ತೊಮ್ಮೆ ಹುಟ್ಟಿಬರಬೇಕೆಂಬ ಆಶಯ ವ್ಯಕ್ತಪಡಿಸಿದರು.

Follow Us:
Download App:
  • android
  • ios