ಎಲ್ಲಾ ಗೊಂದಲಗಳಿಗೆ ತೆರೆ: ಸಿದ್ದರಾಮಯ್ಯ-ಡಿಕೆಶಿಗೆ ಉದೋ ಎಂದ ಹೈಕಮಾಂಡ್
ರಾಜ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಪಕ್ಷದಲ್ಲಿ ಮೂಲ ಮತ್ತು ವಲಸಿಗ ಎರಡೂ ಬಣ ಎನ್ನುವ ಎರಡು ಬಣಗಳಾಗಿ ಬಡಬಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಆಯ್ಕೆ ಕಗ್ಗಂಟಾಗಿ ಉಳಿದಿದೆ. ಆದ್ರೆ, ಇದೀಗ ಹೈಕಮಾಂಡ್, ಎರಡೂ ಬಣಗಳನ್ನು ಸಮಾಧಾನಪಡಿಸಲು ಹೊಸ ಸೂತ್ರ ಸಿದ್ಧಪಡಿಸಿದೆ. ಏನದು? ಕಂಪ್ಲೀಟ್ ವಿವರ ಈ ಕೆಳಗಿನಂತಿದೆ.
ಬೆಂಗಳೂರು, (ಫೆ.13): ದೆಹಲಿ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಮತ್ತೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಸರತ್ತು ಆರಂಭವಾಗಿದೆ.. ಅಧ್ಯಕ್ಷರು ಹಾಗು ವಿಪಕ್ಷ ನಾಯಕರ ರಾಜೀನಾಮೆಯಿಂದ ರಾಜ್ಯ ಕಾಂಗ್ರೆಸ್ ನಿಂತ ನೀರಾಗಿದೆ.
ಪಕ್ಷಕ್ಕೆ ಕಾಯಕಲ್ಪ ನೀಡುವ ಕಾರ್ಯ ಶೀಘ್ರ ಆಗಬೇಕು ಅಂತ ಕೈ ಹಿರಿಯ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ. ಕಗ್ಗಂಟಾಗಿರುವ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಹೈಕಮಾಂಡ್ ಹೊಸ ಸೂತ್ರ ಬಳಸಲು ಮುಂದಾಗಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ: ಡಿಕೆಶಿ ಸುತ್ತ 4 ಗೋಡೆ ಕಟ್ಟಿದ ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷರನ್ನು ಇನ್ನೂ ಯಾಕೆ ಆಯ್ಕೆ ಮಾಡಿಲ್ಲ ಅಂತ ಪ್ರಶ್ನೆ ಎತ್ತಿದ್ರೆ, ಕಾಂಗ್ರೆಸ್ಸಿಗರು, ದೆಹಲಿ ಚುನಾವಣೆ ಎಂಬ ಸಿದ್ಧ ಉತ್ತರ ಕೊಡ್ತಿದ್ರು. ಆದ್ರೆ, ದೆಹಲಿಯಲ್ಲಿ ಸೊನ್ನೆ ಸುತ್ತಿ, 67 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಬಳಿಕ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ರಾಜ್ಯ ಕಾಂಗ್ರೆಸ್ನ ಪ್ರಮುಖ ಹುದ್ದೆಗಳಿಗೆ ಸಮರ್ಥರನ್ನು ಆಯ್ಕೆ ಮಾಡಲೆಂದೇ ಸೋನಿಯಾ ಗಾಂಧಿ, ಕೆ.ಸಿ ವೇಣುಗೋಪಾಲ್ ಮಹತ್ವದ ಸಭೆ ನಡೆಸಿದ್ದಾರೆ.
ಡಿಕೆಶಿಗೆ ಅಧ್ಯಕ್ಷಗಿರಿ, ಸಿದ್ದರಾಮಯ್ಯ ವಿಪಕ್ಷ ನಾಯಕ..!
ಕೆಪಿಸಿಸಿ ಅಧ್ಯಕ್ಷ, ವಿಪಕ್ಷ ನಾಯಕ ಸ್ಥಾನ, CLP ನಾಯಕನ ಆಯ್ಕೆ ವಿಚಾರದಲ್ಲಿ ಕೈ ಪಾಳೆಯದೊಳಗೆ ಬಣ ರಾಜಕೀಯ ಜೋರಾಗಿದೆ. ಅದಕ್ಕೆ ಕೊನೆ ಹಾಡಲು ಹೈಕಮಾಂಡ್ ಮುಂದೆ ಹೊಸ ಸೂತ್ರ ಇಡಲಾಗಿದೆ.
KPCC ಹುದ್ದೆ: ವೇಣುಗೋಪಾಲ್-ಡಿಕೆಶಿ ಸಭೆಯ ಮಾತುಕತೆ ಬಹಿರಂಗ
ಹೊಸ ಸೂತ್ರ ಏನು ಅಂತ ನೋಡೋದಾದ್ರೆ, ಯಾವುದೇ ಕಾರಣಕ್ಕೂ ವಿಪಕ್ಷ ನಾಯಕ ಹಾಗೂ ಸಿಎಲ್ಪಿ ಸ್ಥಾನಗಳನ್ನು ಬೇರ್ಪಡಿಸೋದು ಬೇಡ. ಸಿದ್ದರಾಮಯ್ಯನವ್ರೇ ಎರಡೂ ಸ್ಥಾನಗಳ ನಾಯಕರಾಗಿ ಮುಂದುವರಿಯಲಿ. ಆಗ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸುಲಭವಾಗಲಿದೆ. ಡಿ.ಕೆ ಶಿವಕುಮಾರ್ರನ್ನ ಅಧ್ಯಕ್ಷರನ್ನಾಗಿ ಮಾಡಿದ್ರೂ ಸಿದ್ದರಾಮಯ್ಯ ವಿರೋಧಿಸಲ್ಲ. ಸಿದ್ದು ಬಣವನ್ನು ತಣ್ಣಗಾಗಿಸಿದ್ರೆ ಅರ್ಧ ಸಮಸ್ಯೆ ಪರಿಹರಿಸಿದಂತೆ ಎನ್ನಲಾಗ್ತಿದೆ.
ಸದ್ಯಕ್ಕೆ ಇಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸೋಣ. ಈಶ್ವರ್ ಖಂಡ್ರೆ ಜೊತೆಗೆ ಸತೀಶ್ ಜಾರಕಿಹೊಳಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡೋಣ. ಪರಮೇಶ್ವರ್, ಎಂ.ಬಿ ಪಾಟೀಲ್ರಂಥವರಿಗೆ ಸಿಡಬ್ಲೂಸಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಹೊಸ ಸೂತ್ರಕ್ಕೆ ಸೋನಿಯಾ ಗಾಂಧಿ ಒಪ್ಪಿಗೆ ಸೂಚಿಸಿದ್ರೆ, ಶೀಘ್ರವೇ ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕವಾಗೋದು ಪಕ್ಕಾ.