ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಬಿಜೆಪಿಯವರೇ ಕಾರಣ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗಿದರು. ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಗಮನಹರಿಸುವುದು ನನ್ನ ಅಥವಾ ರಾಜ್ಯ ಸರ್ಕಾರದ ಕೈಯಲ್ಲಿಲ್ಲ.
ಆನಂದಪುರ (ಮಾ.14): ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಬಿಜೆಪಿಯವರೇ ಕಾರಣ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗಿದರು. ಅವರು ಸಮೀಪದ ಕಣ್ಣೂರಿನಲ್ಲಿ ಐದು ವರ್ಷಕ್ಕೆ ಒಮ್ಮೆ ನಡೆಯುವ ಮಾರಿಕಾಂಬ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಎಲೆಕ್ಷನ್ ಹತ್ತಿರ ಬಂದ ಕೂಡಲೇ ಮುಳುಗಡೆ ಸಂತ್ರಸ್ತರು ಎಂದು ಓಡಿ ಬರುತ್ತಾರೆ. ಮುಳುಗಡೆ ಸಂತ್ರಸ್ತರಿಗೆ ವಿಷ ಕೊಟ್ಟವರು ಬಿಜೆಪಿಯವರು ಎಂದು ಟೀಕಿಸಿದರು.
ಚುನಾವಣೆ ಸಮೀಪಿಸುತ್ತಿವೆ ಎಂಬ ಸಂದರ್ಭದಲ್ಲಿ ವಿರೋಧ ಪಕ್ಷದವರು ಮುಳುಗಡೆಯ ಸಂತ್ರಸ್ತರ ನೆನಪು ಮಾಡಿಕೊಂಡು ಮುಳುಗಡೆ ಸಂತ್ರಸ್ತರಿಗೆ ಅನ್ಯಾಯವಾಗಿದೆ ಇವರಿಗೆ ನ್ಯಾಯ ಕೊಡಿಸಲು ಹೋರಾಡುತ್ತೇನೆ ಎನ್ನುತ್ತಾರೆ. ಆ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ. ಈಗ ಕೇಂದ್ರ ಸರ್ಕಾರ ನಿಮ್ಮದೇ ಸರ್ಕಾರ ಇದೆ ನಿಮಗೆ ಎದೆಗಾರಿಕೆ ಇದ್ದರೆ ಅರಣ್ಯ ಕಾಯ್ದೆಯನ್ನು 75 ವರ್ಷದಿಂದ 30 ವರ್ಷಕ್ಕೆ ಕಡಿಮೆ ಮಾಡಿ ಕೊಡುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಗಮನಹರಿಸುವುದು ನನ್ನ ಅಥವಾ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಇದು ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಇದನ್ನು ಬಗೆಹರಿಸಿದರೆ, ಖುದ್ದಾಗಿ ನಾನೇ ನಿಮ್ಮ ಬಳಿ ಬಂದು ಸನ್ಮಾನ ಮಾಡುತ್ತೇನೆ. ಸಮಸ್ಯೆಯನ್ನು ಬಗೆಹರಿಸುವ ಯೋಗ್ಯತೆ ನಿಮಗಿದೆಯಾ ಎಂದು ಪ್ರಶ್ನಿಸಿದರು.
ಅರ್ಜಿಗಳ ವಜಾ
ಯಾರು ನನ್ನ ಮೇಲೆ ಆಪಾದನೆ ಮಾಡುವರೋ ಅವರು ಅಧಿಕಾರದಲ್ಲಿದ್ದಾಗಲೇ ಶರಾವತಿ ಮುಳುಗಡೆ ಸಂತ್ರಸ್ತರ 9 ಸಾವಿರ ಅರ್ಜಿಗಳನ್ನು ವಜಾ ಮಾಡಿದ್ದಾರೆ ಎಂದು ಆರೋಪಿಸಿದರು. ಸಚಿವ ಮಧು ಬಂಗಾರಪ್ಪ, ನಾನು ಮತ್ತು ನಮ್ಮ ಸರ್ಕಾರದವರು ಸೇರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿ ಸರ್ವೇ ಮಾಡಿಸಿದ್ದೇವೆ. ಈ ಸರ್ವೆಯಿಂದ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆ ಹರಿಯಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ನನ್ನ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್ ನ ಅವಶ್ಯಕತೆ ಇಲ್ಲ. ಈಗಾಗಲೇ ಸಾಗರಕ್ಕೆ ಕಾರ್ಮಿಕರ ವಸತಿ ಶಾಲೆ ಪ್ರಾರಂಭಿಸಲು ಸರ್ಕಾರ ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ತರುವಂತಹ ಶಕ್ತಿ ಗೋಪಾಲಕೃಷ್ಣ ಬೇಳೂರಿಗೆ ಇದೆ ಎಂದರು. ಈ ಸಂದರ್ಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಗಣಪತಿ, ಜಾನಪದ ಕಲಾವಿದ ಬಿ. ಟಾಕಪ್ಪ, ಶೇಖರಪ್ಪ, ಚೇತನ್ ರಾಜ್ ಕಣ್ಣೂರ್, ಪ್ರಕಾಶ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

