ಕಬ್ಬಾಳು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದ್ದು, ತಾಯಿ ಕಬ್ಬಾಳಮ್ಮನಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಜನರ ಆಶೀರ್ವಾದವೇ ತಮ್ಮ ರಾಜಕೀಯ ಶಕ್ತಿಯ ಮೂಲ ಎಂದು ಹೇಳಿದ್ದಾರೆ.
ಕನಕಪುರ (ಜೂ.07): ಕಬ್ಬಾಳು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದ್ದು, ತಾಯಿ ಕಬ್ಬಾಳಮ್ಮನಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಜನರ ಆಶೀರ್ವಾದವೇ ತಮ್ಮ ರಾಜಕೀಯ ಶಕ್ತಿಯ ಮೂಲ ಎಂದು ಹೇಳಿದ್ದಾರೆ. ರಾತ್ರಿ ತಡವಾದರೂ ಸಾವಿರಾರು ಅಭಿಮಾನಿಗಳು ಅವರನ್ನು ನೋಡಲು ಕಾದು ನಿಂತಿದ್ದ ದೃಶ್ಯ ಕಾರ್ಯಕ್ರಮದ ವಿಶೇಷವಾಗಿತ್ತು.
"ನಿಮ್ಮ ಹಾಗೂ ರಾಜ್ಯ ಸರ್ಕಾರದ ಪರವಾಗಿ ತಾಯಿ ಕಬ್ಬಾಳಮ್ಮನಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. 1985ರ ಮೊದಲು ಮತ್ತು ನಂತರ ಕನಕಪುರ ಹೇಗೆ ಅಭಿವೃದ್ಧಿಯಾಗಿದೆ ಎಂಬುದು ನಿಮ್ಮ ಕಣ್ಣೆದುರೇ ಇದೆ. ಕಬ್ಬಾಳಮ್ಮ ದೇವಾಲಯ ಇಂದು ಇಡೀ ರಾಜ್ಯದ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ," ಎಂದು ಅವರು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ರಚನೆಯ ಬಳಿಕ ಈ ಭಾಗದ ಆಸ್ತಿ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಿದ ಸಿಎಂ, "ಜನರಿಗೆ ನೀಡಿದ ಮಾತಿನಂತೆ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ₹2,000, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, 10 ಕೆಜಿ ಅಕ್ಕಿ ಸೇರಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ" ಎಂದು ತಿಳಿಸಿದರು. ಜನರ ಬೆಂಬಲದಿಂದಲೇ ತಮ್ಮ ರಾಜಕೀಯ ಪಯಣ ಸಾಧ್ಯವಾಗಿದೆ ಎಂದು ಹೇಳಿದ ಅವರು, "ನಿಮ್ಮೆಲ್ಲರ ಶ್ರಮ ಮತ್ತು ಆಶೀರ್ವಾದದಿಂದ ನನಗೆ ಈ ಶಕ್ತಿ ಸಿಕ್ಕಿದೆ. ನೀವು ಕೊಟ್ಟ ಶಕ್ತಿಯನ್ನು ಇಡೀ ರಾಜ್ಯದ ಅಭಿವೃದ್ಧಿಗೆ ಸಮರ್ಪಿಸುತ್ತೇನೆ" ಎಂದರು.
ಅಧಿಕಾರ ಹಂಚಿಕೆ ವಿಚಾರವನ್ನು ಉಲ್ಲೇಖಿಸಿದ ಸಿಎಂ, "ಕೇಂದ್ರದ ನಾಯಕರು ಹಾಗೂ ನಮ್ಮ ಪಕ್ಷದ ಹಿರಿಯರು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಅದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ವಿಧಾನಸೌಧದ ಮುಂದೆ ಪ್ರಮಾಣವಚನ ಸ್ವೀಕರಿಸಬೇಕು ಎಂದುಕೊಂಡಿದ್ದೆ. ಆದರೆ ಯಾವುದೇ ಗೊಂದಲ ಉಂಟಾಗಬಾರದೆಂಬ ಕಾರಣಕ್ಕೆ ಗ್ಲಾಸ್ ಹೌಸ್ನಲ್ಲಿ ಪ್ರಮಾಣವಚನ ಸ್ವೀಕರಿಸಿದೆ" ಎಂದು ಹೇಳಿದರು.
"ನೀವೆಲ್ಲರೂ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾನೇ ನಿಮ್ಮ ಬಳಿಗೆ ಬಂದಿದ್ದೇನೆ. ನೀವು ನನಗೆ ಎಂಟು ಬಾರಿ ಶಾಸಕ ಸ್ಥಾನ ನೀಡಿದ್ದೀರಿ, ಸಚಿವನನ್ನಾಗಿ ಮಾಡಿದ್ದೀರಿ, ಈಗ ಮುಖ್ಯಮಂತ್ರಿ ಸ್ಥಾನವನ್ನೂ ನೀಡಿದ್ದೀರಿ. ಈ ಜಿಲ್ಲೆಯ ಗೌರವ ಉಳಿಸುವ ಕೆಲಸವನ್ನು ನಮ್ಮ ಪಕ್ಷ ಮಾಡಿದೆ" ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
2028ರ ಚುನಾವಣೆಯನ್ನು ಉಲ್ಲೇಖಿಸಿದ ಅವರು, "ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮ್ಮ ಬೆಂಬಲ ಅಗತ್ಯ. ಮುಂದೆಯೂ ಅವಕಾಶ ನೀಡಿ, ಮತ್ತೊಮ್ಮೆ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಬೇಕು" ಎಂದು ಮನವಿ ಮಾಡಿದರು. ಮೆಡಿಕಲ್ ಕಾಲೇಜು ಯೋಜನೆ ಕುರಿತು ಮಾತನಾಡಿದ ಸಿಎಂ, "ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. ಇನ್ನೊಂದು ತಿಂಗಳೊಳಗೆ ಅದರ ಶಂಕುಸ್ಥಾಪನೆ ನೆರವೇರಲಿದೆ" ಎಂದು ಘೋಷಿಸಿದರು.
ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ
ಭೂ ಹಕ್ಕುಗಳ ಕುರಿತು ಮಾತನಾಡಿದ ಅವರು, "ನಮ್ಮ ಸರ್ಕಾರ 6ನೇ ಗ್ಯಾರಂಟಿಯಾಗಿ 'ಭೂ ಗ್ಯಾರಂಟಿ' ಯೋಜನೆಯನ್ನು ಜಾರಿಗೆ ತಂದಿದೆ. ಯಾವುದೇ ಸರ್ಕಾರಿ ಕೆಲಸಕ್ಕಾಗಿ ಯಾರಿಗೂ ಒಂದು ರೂಪಾಯಿ ಲಂಚ ನೀಡಬೇಡಿ. ಜನರ ಹಕ್ಕುಗಳನ್ನು ಕಾಪಾಡುವುದು ನಮ್ಮ ಸರ್ಕಾರದ ಬದ್ಧತೆ" ಎಂದು ಹೇಳಿದರು. ಕೊನೆಯಲ್ಲಿ, "ನೀವು ನನಗೆ ನೀಡಿರುವ ಪ್ರೀತಿ, ವಿಶ್ವಾಸ ಮತ್ತು ಶಕ್ತಿಯ ಋಣ ತೀರಿಸಲು ನಾನು ನಿಮ್ಮ ನಡುವೆ ಬಂದಿದ್ದೇನೆ. ನಿಮ್ಮ ಗೌರವ ಮತ್ತು ಜಿಲ್ಲೆಯ ಹೆಮ್ಮೆ ಉಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ" ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.


