ಈ ಬಾರಿ ಬಿಸಿಲು ಜೋರಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಅಗತ್ಯ ಮುಂಜಾಗ್ರತೆ ವಹಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದ್ದಾರೆ.

ಸಾಗರ (ಮಾ.11): ಈ ಬಾರಿ ಬಿಸಿಲು ಜೋರಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಅಗತ್ಯ ಮುಂಜಾಗ್ರತೆ ವಹಿಸುವಂತೆ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದ್ದಾರೆ.

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಮತ್ತು ಪಿಡಿಓಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ತಾಲೂಕಿನ ಗೆಣಿಸಿನಕುಣಿ, ಹೆಗ್ಗೋಡು, ಭೀಮನಕೋಣೆ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಹಾಗಾಗಿ ಈ ಭಾಗಗಳಲ್ಲಿ ತುರ್ತು ಗಮನ ಹರಿಸಿ ಹಕ್ರೆ ಬಳಿ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಈ ತಿಂಗಳ ಅಂತ್ಯದೊಳಗೆ ಕಾರ್ಯರೂಪಕ್ಕೆ ಬರಲಿದ್ದು, ನಂತರ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದರು.

ಅಗತ್ಯ ಇರುವ ಕಡೆಗಳಲ್ಲಿ ತಕ್ಷಣ ಕೊಳವೆ ಬಾವಿಗಳನ್ನು ತೆಗೆಯಲು ಸೂಚನೆ ನೀಡಿದ ಶಾಸಕರು, ಗ್ರಾಮ ಪಂಚಾಯಿತಿಗೆ ನೇಮಕವಾಗಿರುವ ಆಡಳಿತಾಧಿಕಾರಿಗಳು ಆಗಾಗ ಪಂಚಾಯಿತಿಗೆ ಹೋಗಿ ಕುಂದುಕೊರತೆಗಳ ಬಗ್ಗೆ ವಿಚಾರಿಸುತ್ತಿರಬೇಕು. ಆನಂದಪುರಂ ಮತ್ತು ಕಣ್ಣೂರು ಜಾತ್ರೆ ಇರುವುದರಿಂದ ಆ ಭಾಗದಲ್ಲಿ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಎದುರಾಗದಂತೆ ಗಮನ ಹರಿಸಲು ಸೂಚನೆ ನೀಡಿದರು.

ಗಣಪತಿ ಜಾತ್ರೆಯ ಸಿದ್ಧತೆಗೆ ಸೂಚನೆ

ಇದೇ ಸಂದರ್ಭದಲ್ಲಿ ಗಣಪತಿ ಜಾತ್ರೆ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಎಲ್ಲರ ಸಹಕಾರದಿಂದ ಮಾರಿಕಾಂಬಾ ದೇವಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿದ್ದು, ಗಣಪತಿ ಜಾತ್ರೆಯನ್ನು ಸಹ ಅದ್ಧೂರಿಯಾಗಿ ನಡೆಸಲು ಎಲ್ಲರೂ ಸಹಕಾರ ನೀಡಬೇಕು.

ಗಣಪತಿ ಜಾತ್ರೆಗೆ ಮುಜರಾಯಿ ಇಲಾಖೆಯಿಂದ ಕಡಿಮೆ ಹಣ ಬರುತ್ತಿದ್ದು, ಸ್ಟಾಲ್ ಹರಾಜಿನಿಂದ ಬರುವ ಹಣವನ್ನು ಜಾತ್ರೆ ಖರ್ಚುವೆಚ್ಚ ನಿರ್ವಹಿಸಲು ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಜಾತ್ರೆ ಸಂದರ್ಭದಲ್ಲಿ ಸ್ವಚ್ಚತೆ ಹಾಗೂ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು. ಉಪವಿಭಾಗಾಧಿಕಾರಿ ವಿರೇಶಕುಮಾರ್, ತಹಸೀಲ್ದಾರ್ ರಶ್ಮಿ, ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಸದಾನಂದಸ್ವಾಮಿ, ಭೂಮೇಶ್, ಪ್ರೇಮಕುಮಾರಿ, ಟಿ.ವಿ.ಪಾಂಡುರಂಗ, ಟಿ.ಪಿ.ರಮೇಶ್, ಶ್ರೀನಿವಾಸ್ ಮೂರ್ತಿ ಇನ್ನಿತರರು ಹಾಜರಿದ್ದರು.