ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದೊಳಗೆ ತನಗಾದ ಹಿಂಸೆ ತಾಳಲಾರದೆ ಸರ್ಕಾರ ಬಿದ್ದು ಹೋಗಲಿ ಎಂದು ನಾನೇ ಅಮೆರಿಕಗೆ ಹೋಗಿ ಕೂತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬೆಳಗಾವಿ (ಜೂ.06): ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದೊಳಗೆ ತನಗಾದ ಹಿಂಸೆ ತಾಳಲಾರದೆ ಸರ್ಕಾರ ಬಿದ್ದು ಹೋಗಲಿ ಎಂದು ನಾನೇ ಅಮೆರಿಕಗೆ ಹೋಗಿ ಕೂತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, 2018ರಲ್ಲಿ ಸಮ್ಮಿಶ್ರ ಸರ್ಕಾರ ತೆಗೆಯಲೇಬೇಕು ಎಂದು ಹಲವಾರು ತಿಂಗಳಿಂದ ಪ್ರಯತ್ನಗಳು ನಡೆಯುತ್ತಿದ್ದವು. ನನಗೆ ಕೊಡುತ್ತಿದ್ದ ಹಿಂಸೆಗಳನ್ನು ನೋಡಿದ್ದೆ. ಹೀಗಾಗಿ ಆ ಸರ್ಕಾರ ಹೋಗಲಿ ಎಂದು ನಾನೇ ತೀರ್ಮಾನಕ್ಕೆ ಬಂದಿದ್ದೆ. ಆದ್ದರಿಂದಲೇ ನಾನು ಆಗ ಅಮೆರಿಕಗೆ ಹೋಗಿದ್ದು ಎಂದು ತಿಳಿಸಿದರು.
ರೈತರ ಸಾಲಮನ್ನಾ ಮಾಡುವ ಟಾಸ್ಕ್ ನನ್ನ ಮೇಲಿತ್ತು. ಜನತೆಗೆ ಮಾತು ಕೊಟ್ಟಿದ್ದೆ. ಆ ಕಾರ್ಯಕ್ರಮ ಪೂರೈಸಿದ ನಂತರ ನನಗೆ ಸರ್ಕಾರದಲ್ಲಿ ಆಸಕ್ತಿ ಉಳಿದಿರಲಿಲ್ಲ. ಅದಕ್ಕೆ ಕಾರಣ ಅವತ್ತು ಇದ್ದಂತಹ ಮೈತ್ರಿ ಸರ್ಕಾರದ ನಡವಳಿಕೆಗಳು. ಮನಸ್ಸಿನಲ್ಲಿ ಈ ಬಗ್ಗೆ ಬೇಸರ ಇತ್ತು. ಆದ್ದರಿಂದ ನಾನು ನಿರಾಸಕ್ತನಾಗಿದ್ದೆ. ಹೋದರೆ ಹೋಗಲಿ. ಯಾಕೆ ಪ್ರತಿನಿತ್ಯ ಇಂತಹ ಘಟನೆಗಳು ನಡೆಯಬೇಕು? ನಾನು ಯಾಕೆ ವ್ಯರ್ಥ ಕಸರತ್ತು ಮಾಡಬೇಕು? ರಾಜ್ಯಕ್ಕೆ ಒಳ್ಳೆಯದು ಮಾಡುವುದಾದರೆ ಮಾಡಿಕೊಳ್ಳಲಿ ಎಂದು ನಾನು ನಿರ್ಧಾರಕ್ಕೆ ಬಂದುಬಿಟ್ಟೆ. ಮತ್ತೆ ಪ್ರಯತ್ನ ಮಾಡಲು ನಾನು ಹೋಗಲಿಲ್ಲ. ಅದರಲ್ಲಿ ಯಾರ ಯಾರ ಪಾತ್ರ ಏನೂ ಅದೆಲ್ಲ ಈಗ ಬೇಕಿಲ್ಲ ಎಂದರು.
'ನಿಮ್ನಿಮ್ಮ ಚಡ್ಡಿ ಬಿಚ್ಚಿಕೊಳ್ಳಿ ತೊಂದರೆ ಇಲ್ಲ-ಜನರ ಚಡ್ಡಿ ಬಿಚ್ಚಬೇಡಿ' ಎಂದ ಹೆಚ್ಡಿಕೆ
ಕಾಂಗ್ರೆಸ್ಗೆ ನೈತಿಕತೆ ಇಲ್ಲ: ಕಾಂಗ್ರೆಸ್ನವರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವ ನೈತಿಕತೆ ಇಲ್ಲ. ಅವರು ಗಾಜಿನ ಮನೆಯಲ್ಲಿ ಕುಳಿತುಕೊಂಡೇ ರಾಜ್ಯ ಆಳಿದವರು. ಬಿಜೆಪಿಯವರು ಅದನ್ನು ಮುಂದುವರೆಸಿಕೊಂಡು ಹೋದರು. ಮೈತ್ರಿ ಸರ್ಕಾರ ತೆಗೆದು ಬಿಜೆಪಿಯವರು ಇದೇ ಪರಿವರ್ತನೆ ತಂದಿದ್ದು, ಗುತ್ತಿಗೆದಾರ ಪರಿಸ್ಥಿತಿ ಏನಾಗಿದೆ, ಸರ್ಕಾರದ ಹಣ ಯಾವ ರೀತಿ ಲೂಟಿ ಆಗ್ತಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬಿಜೆಪಿ ಇಷ್ಟೇಲ್ಲಾ ಕುತಂತ್ರದ ಮುಖಾಂತರ ಬೆಟ್ಟಿಂಗ್ ದಂಧೆ ನಡೆಸುವವರ, ಬಡವರ ರಕ್ತ ಹೀರಿದಂತವರ ಪಾಪದ ಹಣದಿಂದ ಮೈತ್ರಿ ಸರ್ಕಾರ ತೆಗೆಯಲು ಉಪಯೋಗ ಮಾಡಿಕೊಂಡು ಸರ್ಕಾರ ರಚನೆ ಮಾಡಿಕೊಂಡ್ರಿ. ನಾನು ಯಡಿಯೂರಪ್ಪ ಅವರಿಗೆ ಎಂದೂ ಆಕ್ರೋಶ ಭರಿತ ಮಾತುಗಳನ್ನ ಹೇಳಲಿಲ್ಲ, ಸಲಹೆ ಕೊಟ್ಟೆ. ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗಿದ್ದೀರಿ, ರಾಜಕಾರಣದಲ್ಲಿ ಕೊನೆ ಭಾಗದಲ್ಲಿದೀರಿ. ಒಳ್ಳೆಯ ಕೆಲಸ ಮಾಡಿ ಜನರ ಹತ್ತಿರ ಹೆಸರು ಮಾಡಿಕೊಳ್ಳಿ ಅಂದಿದ್ದೆ. ಆದ್ರೆ, ನಡೆದ ಘಟನೆಗಳು ಪ್ರತಿಯೊಂದು ನಿಮ್ಮ ಗಮನಕ್ಕಿದೆ. ಇವತ್ತು ಪರ್ಸಂಟೇಜ್ ಬಗ್ಗೆ ಚರ್ಚೆ ಮಾಡ್ತಾರೆ. ಬೆಳಗಾವಿಯಲ್ಲೇ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ನಡೆದು ಹೋಯ್ತು. ಕಾಂಗ್ರೆಸ್ನವರು ಒಂದು ರೀತಿ, ಬಿಜೆಪಿಯವರು ಒಂದು ರೀತಿ ಅದನ್ನ ಬಳಕೆ ಮಾಡಿಕೊಂಡರು. ನಾನು ಅದಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಕೊಡಲಿಲ್ಲ ಎಂದರು.
Karnataka Politics: ಇಂದಿನ ರಾಜಕಾರಣದಲ್ಲಿ ನೈತಿಕತೆ ಉಳಿದಿಲ್ಲ: ಕುಮಾರಸ್ವಾಮಿ
ಅಡ್ಡಮತ ಸೆಳೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ನಿಸ್ಸಿಮರು: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ ಸೆಳೆಯುವ ವಿಚಾರವಾಗಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಅದರಲ್ಲಿ ಅವರೆಲ್ಲಾ ಪರಿಣಿತರಿದ್ದಾರೆ, ಈಗಾಗಲೇ ಆ ಪ್ರಯತ್ನ ಶುರುವಾಗಿದೆ. ಜೆಡಿಎಸ್ ಮತ ಒಡೆಯಬೇಕೆನ್ನೋದು ಎರಡೂ ಪಕ್ಷದಲ್ಲಿ ನಡೆಯುತ್ತಿದೆ. ನಾನು ಆರಾಮವಾಗಿದ್ದೇನೆ ಎಂದ ತಿರುಗೇಟು ನೀಡಿದ ಕುಮಾರಸ್ವಾಮಿ, ನಮ್ಮ ಪಕ್ಷದ ಕೆಲವು ಶಾಸಕರಲ್ಲಿ ಭಿನ್ನಾಭಿಪ್ರಾಯ ಇರೋದು ನಿಜ,ಆ ಭಿನ್ನಾಭಿಪ್ರಾಯ ಹೊರತುಪಡಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಕಾಂಗ್ರೆಸ್ ಏನೇ ಆಸೆ ಆಮಿಷ ತೋರಿಸಿದ್ರೂ ನಮ್ಮ ಮತ ಗಟ್ಟಿಯಾಗಿವೆ ಅನ್ನೋ ವಿಶ್ವಾಸ ನನಗಿದೆ ಎಂದರು.
