ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರು ಮುಂದಿನ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಲೋಕಸಭಾ ಚುನಾವಣೆಗಳಿಗೆ ಈಗಿಂದಲೇ ಪಕ್ಷ ಸಂಘಟನೆ ಮಾಡಬೇಕೆಂದು ಮಾಜಿ ಶಾಸಕ ಆರ್‌.ನರೇಂದ್ರ ತಿಳಿಸಿದರು. 

ಹನೂರು (ಜೂ.28): ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರು ಮುಂದಿನ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಲೋಕಸಭಾ ಚುನಾವಣೆಗಳಿಗೆ ಈಗಿಂದಲೇ ಪಕ್ಷ ಸಂಘಟನೆ ಮಾಡಬೇಕೆಂದು ಮಾಜಿ ಶಾಸಕ ಆರ್‌.ನರೇಂದ್ರ ತಿಳಿಸಿದರು. ಹನೂರು ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಕಾಂಗ್ರೆಸ್‌ ನೀಡಿರುವ 5 ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಹಾಗೂ ಗೃಹ ಜ್ಯೋತಿ ಯೋಜನೆ ಚಾಲನೆಯಲ್ಲಿದೆ, ಗೃಹಭಾಗ್ಯ ಹಾಗೂ ನಿರುದ್ಯೋಗಿ ಭತ್ಯೆಯನ್ನು ಹಂತ ಹಂತವಾಗಿ ಈಡೇರಿಸಲಾಗುವುದು. 

ಅನ್ನ ಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ನೀಡಲು ತೀರ್ಮಾನ ಮಾಡಿದ್ದೆವು. ನಾವು ಕೇಂದ್ರದಿಂದ ಹಣಕ್ಕೆ ಅಕ್ಕಿ ನೀಡುವಂತೆ ಮನವಿ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡಿದರೆ ಕರ್ನಾಟಕ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ ಎಂಬ ದೃಷ್ಟಿಯಿಂದ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಾವು ಖಂಡಿತವಾಗಿಯೂ ಅನ್ನ ಭಾಗ್ಯ ಯೋಜನೆ ಅಡಿ 10 ಕೆಜಿ ಅಕ್ಕಿ ನೀಡುವುದು ಖಚಿತ ಎಂದು ತಿಳಿಸಿದರು. ಚುನಾವಣೆ ಬರುವ ಮುನ್ನ ನಮ್ಮ ಪಂಚ ಕಾರ್ಯಕ್ರಮಗಳನ್ನು ಮನೆಮನೆಗೂ ತಿಳಿಸಿ ಕಾರ್ಯಕರ್ತರನ್ನು ಸಂಘಟಿಸಬೇಕು ಎಂದು ಸಲಹೆ ನೀಡಿದರು.

ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗದ ಅಭಿವೃದ್ಧಿ ಹರಿಕಾರರು: ಸಚಿವ ಮುನಿಯಪ್ಪ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು 5 ಗ್ಯಾರಂಟಿಗಳನ್ನು ಬಜೆಟ್‌ ಒಳಗೆ ಈಡೇರಿಸದಿದ್ದರೆ ಗಾಂಧಿ ಪ್ರತಿಮೆ ಮುಂಭಾಗ ಸತ್ಯಾಗ್ರಹ ಮಾಡುತ್ತೇನೆ ಎಂದಿರುವುದು ಹಾಸ್ಯಾಸ್ಪದವಾಗಿದೆ. ನಾವು ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದೆ. ನಾವು ಕೊಟ್ಟಭರವಸೆಗಳನ್ನು ಈಡೇರಿಸುತ್ತೇವೆ. ಆದರೆ ನೀವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 9 ವರ್ಷಗಳೇ ಕಳೆದಿದೆ ಇನ್ನು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕಿಲ್ಲ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಮಾಡಿಲ್ಲ, ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದೀರಿ, ಅಚ್ಚೆ ದಿನ್‌ ಬಂದಿಲ್ಲ ಇದರ ಬಗ್ಗೆ ಹೋರಾಟ ಮಾಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಆಡಳಿತಾವಧಿಯಲ್ಲಿ ಸಣ್ಣ ಭ್ರಷ್ಟ್ರಚಾರ ತೋರಿಸಿ: ಸಂಸದ ಸದಾನಂದಗೌಡ

ಈ ಸಂದರ್ಭದಲ್ಲಿ ಹನೂರು ಕಾಂಗ್ರೆಸ್‌ ಅಧ್ಯಕ್ಷ ಮುಕುಂದ ವರ್ಮಾ, ರಾಮಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈಶ್ವರ್‌, ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್‌, ಹರೀಶ್‌, ಸುದೇಶ್‌ ಸಂಪತ್‌, ಮಹಿಳಾ ಕಾಂಗ್ರೆಸ್‌ನ ಡಾ. ಅತೀಯಾ ಮುಖಂಡರಾದ ನಾಗೇಂದ್ರ, ವೆಂಕಟರಮಣ ನಾಯ್ಡು, ಚಿಕ್ಕ ತಮ್ಮಯ್ಯ, ಮಾದೇಶ್‌, ರವೀಂದ್ರ ರಮೇಶ್‌ ನಾಯ್ಡು, ರವಿ, ರಾಜು, ಸೋಮಶೇಖರ್‌, ಸಿದ್ದರಾಜು ಪಾಳ್ಯ, ಕೃಷ್ಣ, ಎಲ್‌, ರಾಜೇಂದ್ರ, ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.