Asianet Suvarna News Asianet Suvarna News

ಮೋದಿ ಆಡಳಿತಾವಧಿಯಲ್ಲಿ ಸಣ್ಣ ಭ್ರಷ್ಟ್ರಚಾರ ತೋರಿಸಿ: ಸಂಸದ ಸದಾನಂದಗೌಡ

ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ಒಂದು ಸಣ್ಣ ಭ್ರಷ್ಟ್ರಚಾರ ತೋರಿಸಿ, ಆಧಾರವಿಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಶೇ. 40 ಪರ್ಸೆಂಟ್‌ ಅಪಪ್ರಚಾರ ಮಾಡಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಸದಾನಂದಗೌಡ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. 

BJP MP DV Sadananda Gowda Slams On Congress Govt At Chamarajanagar gvd
Author
First Published Jun 23, 2023, 12:37 PM IST

ಚಾಮರಾರಾಜನಗರ (ಜೂ.23): ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ಒಂದು ಸಣ್ಣ ಭ್ರಷ್ಟ್ರಚಾರ ತೋರಿಸಿ, ಆಧಾರವಿಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಶೇ. 40 ಪರ್ಸೆಂಟ್‌ ಅಪಪ್ರಚಾರ ಮಾಡಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಸದಾನಂದಗೌಡ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ನಗರದ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದುಕೊಂಡ ಜಾಗದಲ್ಲಿಯೇ ಮತ್ತೆ ಹುಡುಕಿ, ಹಿನ್ನಡೆಯನ್ನು ಮುನ್ನಡೆಯಾಗಿಸಲು ಕಾರ್ಯಕರ್ತರ ಸಹಕಾರ ಅತ್ಯಗತ್ಯ. ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ, ಅವರಿಗೆ ಗೌರವ ಕೊಟ್ಟಾಗ ಮಾತ್ರ ಪಕ್ಷ ಯಶಸ್ಸು ಕಾಣಲು ಸಾಧ್ಯ ಎಂದರು.

ಬಿಜೆಪಿಗೆ ಸೋಲು ಗೆಲವು ಸಾಮಾನ್ಯ, ಪಕ್ಷ ಎಂದು ಅಧಿಕಾರಕ್ಕೆ ಆಸೆ ಪಟ್ಟಿಲ್ಲ, 2 ಲೋಕಸಭಾ ಸ್ಥಾನದಿಂದ ಕೇಂದ್ರದಲ್ಲಿ ಸ್ಪತಂತ್ರವಾಗಿ ಅಧಿಕಾರ ಹಿಡಿಯಲು, ರಾಜ್ಯದಲ್ಲಿ ಎರಡು ವಿಧಾನಸಭಾ ಸ್ಥಾನದಿಂದ ಅಧಿಕಾರಕ್ಕೆ ಬರಲು ಕಾರ್ಯಕರ್ತರೇ ಕಾರಣ, ಈ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿಯೂ, ಕಾಂಗ್ರೆಸ್‌ನವರ ಸುಳ್ಳು ಅಪಪ್ರಚಾರಕ್ಕೆ ಪಕ್ಷಕ್ಕೆ ಹಿನ್ನಡೆಯಾಗಿರುವುದು ಕಾರ್ಯಕರ್ತರಿಗೆ ನೋವು ತಂದಿದೆ ಎಂಬುದು ಗೊತ್ತು. ಕಾಂಗ್ರೆಸ್‌ ಸುಳ್ಳು ಅಪಪ್ರಚಾರಕ್ಕೆ ನಮ್ಮ ನಾಯಕರು ಕೌಂಟರ್‌ ಕೊಡುವಲ್ಲಿ ತಪ್ಪು ಮಾಡಿದ್ದು, ಜೊತೆಗೆ ಕಾಂಗ್ರೆಸ್‌ನವರ ಐದು ಗ್ಯಾರಂಟಿಗಳು ಪಕ್ಷ ಹಿನ್ನಡೆ ಸಾಧಿಸುವಂತಾಯಿತು, ಇದಕ್ಕೆ ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ.

ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ ಹೊರಡಿ: ಅಧಿಕಾರಿಗಳಿಗೆ ಶಾಸಕ ಇಕ್ಬಾಲ್‌ ತರಾಟೆ

ಕಾರ್ಯಕರ್ತರ ನೋವಿಗೆ ಸ್ಪಂದಿಸಿ, ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ಅರಿತು, ತಪ್ಪುಗಳನ್ನು ಸರಿ ಮಾಡಿಕೊಂಡು, ಮುಂಬರುವ ಸ್ಥಳೀಯ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸೋಣ ಎಂದರು. ಕಳೆದ 9 ವರ್ಷದಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಒಂದು ಭ್ರಷ್ಟಾಚಾರ ವಿಲ್ಲದೆ, ಶುದ್ಧ ಮತ್ತು ಆಭಿವೃದ್ಧಿಯ ಆಡಳಿತ ನೀಡುತ್ತಿದೆ,ಇಂದು ಜಗತ್ತೆ ಭಾರತದತ್ತ ತಿರುಗಿ ನೋಡವಂತೆ ಮಾಡಿದೆ ಎಂದರು. ಕಾಶ್ಮೀರದಿಂದ ಕನ್ಯಾಕುಮಾರಿವರಗೆ ನಾವೆಲ್ಲ ಒಂದೇ, ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನದಿಂದ ಬದುಕಬೇಕೆಂಬ ಉದ್ದೇಶದಿಂದ ಜಾರಿಗೊಳಿರುವ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡೋಣ ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್‌ನಾರಾಯಣ್‌ ಮಾತನಾಡಿ, ಕಾರ್ಯಕರ್ತರ ನೋವನ್ನು ಕೇಳಲು ಮತ್ತು ಮುಂಬರುವ ಚುನಾವಣೆಗಳನ್ನು ಎದುರಿಸಲು, 9 ತಂಡಗಳನ್ನು ಮಾಡಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ, ಈ ತಂಡದ ನೇತೃತ್ವವನ್ನು ಸದಾನಂದಗೌಡರು ವಹಿಸಿದ್ದಾರೆ ಎಂದರು. ಬೆಳೆಯುವ ಪೈರು ಮೊಳಕೆಯಲ್ಲಿ: ಮಾಜಿ ಶಾಸಕ ಎನ್‌. ಮಹೇಶ್‌ ಮಾತನಾಡಿ, ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಗಾದೆಯಂತೆ, ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ ಕಥೆ ಪ್ರಾರಂಭದಲ್ಲೇ ಗೊತ್ತಾಗುತ್ತಿದೆ. ಎಲ್ಲವು ಫ್ರೀ ಎಂದು ಹೇಳಿ ಇಂದು ಎಲ್ಲದಕ್ಕೂ ಕಂಡೀಷನ್‌ ಹಾಕುತ್ತಿರುವುದು ನೋಡಿದರೆ ಈ ಗ್ಯಾರಂಟಿಗಳ ಕಥೆ ಲೋಕಸಭಾ ಚುನಾವಣೆವರೆಗೆ ಮಾತ್ರ ಎಂದರು.

ಸರ್ಕಾರ ಬಂದ 24 ಗಂಟೆಯಲ್ಲಿ ಜಾರಿ ಮಾಡುತ್ತೇವೆ ಎಂದು ಹೇಳಿ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ ಕೊಡುತ್ತಿದೆ, ನೀವು ಹೇಳಿದಂತೆ 10 ಕೆಜಿ ಸೇರಿಸಿ 15 ಕೆಜಿ ಕೊಡಿ ಇಲ್ಲದಿದ್ದರೆ ನಿಮ್ಮ 5 ಗ್ಯಾರಂಟಿಗಳು ಸಂಪೂರ್ಣವಾಗಿ ಜಾರಿಯಾಗುವವರೆಗೂ ಬೆಜೆಪಿ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು. ಮೀನು ಕೊಟ್ಟತಕ್ಷಣ ಹಸಿವು ನೀಗಿಸುವ, ಮೂಗಿಗೆ ತುಪ್ಪ ಸವರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿಗಳಿಗಿಂತ ಮೀನನ್ನೇ ಹಿಡಿಯವುದನ್ನು ಕಲಿಸಿ ಸ್ವಾಭಿಮಾನದ ಬದುಕನ್ನು ಕಲಿಸುವ ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಎಲ್ಲರು ಸೇರಿ ಮಾಡೋಣ ಎಂದರು.

ಕಳೆದ 52 ವರ್ಷಗಳಲ್ಲಿ ಹೆಚ್ಚು ಆಡಳಿತ ನಡೆಸಿದ ಕಾಂಗ್ರೆಸ್‌ ಬರೀ ಸುಳ್ಳುಗಳನ್ನೇ ಹೇಳುತ್ತ ಜನರಿಗೆ ಮೋಸ ಮಾಡಿ, ಬಡತನವನ್ನು ಹೆಚ್ಚಿಸಿದೆ ಹೊರತು ಜೀವನ ಮಟ್ಟಸುಧಾರಿಸಲಿಲ್ಲ ಎಂದರು. ಮಾಜಿ ಸಚಿವ ಸಿ.ಎಚ್‌. ವಿಜಯಶಂಕರ್‌ ಮಾತನಾಡಿ, ಇಂದಿನ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ವರದಾನವಾಗಿರುವ 5 ಗ್ಯಾರಂಟಿಗಳು ಶೀಘ್ರದಲ್ಲಿಯೇ ಶಾಪವಾಗಲಿವೆ. ಕಾರ್ಯಕರ್ತರು ಗಟ್ಟಿಯಾಗಿ, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸೋಣ ಎಂದರು.

ಕಾಂಗ್ರೆಸ್‌ನ ಮಾಯಾಯುದ್ಧದ ಗೆಲುವು ತಾತ್ಕಾಲಿಕ: ಸಿ.ಟಿ.ರವಿ

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣಪ್ರಸಾದ್‌ ಅಧ್ಯಕ್ಷತೆವಹಿಸಿದ್ದರು, ಸಭೆಯಲ್ಲಿ ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ಪ್ರೊ. ಕೆ.ಆರ್‌. ಮಲ್ಲಿಕಾರ್ಜುನಪ್ಪ, ಸಿ.ಎಸ್‌. ನಿರಂಜನಕುಮಾರ್‌, ಎಸ್‌. ಬಾಲರಾಜು, ಚಾಮುಲ್‌ ಅಧ್ಯಕ್ಷ ನಾಗೇಂದ್ರ ಮುಖಂಡರಾದ ಎಸ್‌. ಮಹದೇವಯ್ಯ, ರವಿಶಂಕರ್‌, ನೂರೊಂದುಶೆಟ್ಟಿ, ಹನುಮಂತಶೆಟ್ಟಿ, ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು. ಜಿಲ್ಲಾ ಪ್ರದಾನಕಾರ್ಯದರ್ಶಿ ನಾಗಶ್ರೀ ಪ್ರತಾಪ್‌ ನಿರೂಪಿಸಿದರು.

Follow Us:
Download App:
  • android
  • ios