ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಯತ್ನಾಳ್‌ಗೆ ಅಸಮಾಧಾನವಿದ್ದರೆ ಬಹಿರಂಗವಾಗಿ ಅಸಮಾಧಾನ ತೋರಿಸುವುದು ಸರಿಯಲ್ಲ. ಕುಟುಂಬ ಸಮಸ್ಯೆಯನ್ನು ಕುಟುಂಬ ಸದಸ್ಯರು ಸರಿಪಡಿಸುತ್ತಾರೆ. ಯತ್ನಾಳ್ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು.  

ಶಿವಮೊಗ್ಗ (ಡಿ.14): ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಯತ್ನಾಳ್‌ಗೆ ಅಸಮಾಧಾನವಿದ್ದರೆ ಬಹಿರಂಗವಾಗಿ ಅಸಮಾಧಾನ ತೋರಿಸುವುದು ಸರಿಯಲ್ಲ. ಕುಟುಂಬ ಸಮಸ್ಯೆಯನ್ನು ಕುಟುಂಬ ಸದಸ್ಯರು ಸರಿಪಡಿಸುತ್ತಾರೆ. ಯತ್ನಾಳ್ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಅದನ್ನು ಬಿಟ್ಟು ಬೀದಿಯಲ್ಲಿ ನಿಂತು ಮಾತನಾಡುವುದು, ಇದಕ್ಕಾಗಿ ಪಕ್ಷದ ಸಭೆಗೆ ಹೋಗಲ್ಲ ಎನ್ನುವುದು ಅವರ ಉತ್ತರಕುಮಾರನ ಪೌರುಷ ಆಗುತ್ತದೆ ಎಂದು ಕೆ.ಎಸ್‌.ಈಶ್ವರಪ್ಪ ಚಾಟಿ ಬೀಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಹಿಂದುತ್ವವಾದಿ, ರಾಷ್ಟ್ರೀಯತಾವಾದಿ ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ನಡ್ಡಾ, ನರೇಂದ್ರ ಮೋದಿ, ಅಮಿತ್ ಶಾ ಅವರಿಗಿಂತ ಯತ್ನಾಳ್ ದೊಡ್ಡವರಲ್ಲ. ಅವರಿಗೆ ಅಸಮಾಧಾನ ಇರುವುದು ನಿಜ. ಅದಕ್ಕಾಗಿ ಪಕ್ಷದ ಸಭೆಗೂ ಹೋಗದೇ ಇರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಅವರನ್ನು ತಿದ್ದಬೇಕು. ಆ ಕೆಲಸವನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ ಎಂದರು.

ತಾಕತ್ತಿದ್ರೆ ಫೊಟೋ ತೆಗೀಲಿ: ಸ್ವಾತಂತ್ರ್ಯ ಹೋರಾಟಗಾರರಿಗೂ ಪ್ರಿಯಾಂಕ್‌ ಖರ್ಗೆಗೂ ಏನೂ ಸಂಬಂಧವಿಲ್ಲ. ಅವರು ತಾಕತ್ತಿದ್ದರೆ ವೀರ ಸಾವರ್ಕರ್ ಪೋಟೋ ಮುಟ್ಟಲಿ, ಅವತ್ತೇ ಈ ಸರ್ಕಾರ ಇರಲ್ಲ. ಸರ್ವಪಕ್ಷಗಳ ಒಪ್ಪಿಗೆ ಪಡೆದುಕೊಂಡೇ ಬಿಜೆಪಿ ಸರ್ಕಾರ ವಿಧಾನಸೌಧದಲ್ಲಿ ಸಾರ್ವಕರ್‌ ಪೋಟೋ ಹಾಕಿದೆ. ಬಾಯಿಗೆ ಬಂದಂಗೆ ಮಾತನಾಡಿದರೆ ಬಾಕ್ಸ್‌ನಲ್ಲಿ ನ್ಯೂಸ್‌ ಆಗತ್ತೆ ಅಂತ ಪ್ರಿಯಾಂಕ್‌ ಮಾತನಾಡುತ್ತಾರೆ, ಅವರು ‘ಬಾಕ್ಸ್ ನ್ಯೂಸ್ ನಾಯಕ’ ಎಂದು ಲೇವಡಿ ಮಾಡಿದರು.

ಶಾಸಕ ಯತ್ನಾಳ್‌ಗೆ ನೋಟಿಸ್‌ ನೀಡಬೇಕು: ರೇಣುಕಾಚಾರ್ಯ

ಗೂಂಡಾರಾಜ್ಯ: ಇನ್ನು, ಶಾಲೆಗಳಿಗೆ, ರಾಜಭವನಕ್ಕೆ ಬಾಂಬ್ ಬೆದರಿಕೆ ಹಾಕಿದರೂ ಸರ್ಕಾರ ಇದನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಶಾಂತಪ್ರಿಯವಾಗಿದ್ದ ಕರ್ನಾ ಟಕ ಈಗ ಭಯೋತ್ಪಾದಕರು, ಕೊಲೆಗಡುಕರು, ಗೂಂಡಾಗಳ ರಾಜ್ಯವಾಗುತ್ತಿದೆ‌. ಅವರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಡುತ್ತಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.