Maharashtra Political Crisis ನಡುವೆ ಶಿವಸೇನೆ ಸಂಜಯ್ ರಾವತ್ಗೆ ಇಡಿ ನೊಟೀಸ್
ED summons Sanjay Raut: ಶಿವಸೇನೆ ವಕ್ತಾರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವತ್ಗೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿಮಾಡಿದೆ. ಮಂಗಳವಾರ ಭೂಕಬಳಿಕೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾವತ್, ಬಂಡಾಯ ಶಾಸಕರ ವಿರುದ್ಧ ಹೋರಾಟವನ್ನು ತಡೆಯಲು ಪಿತೂರಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಮುಂಬೈ: ಮಹಾರಾಷ್ಟ್ರ ಶಿವಸೇನೆಯ ಟ್ರಬಲ್ ಶೂಟರ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವತ್ಗೆ ಭೂವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿ ಗೊಳಿಸಿದೆ. ಮಂಗಳವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ರಾವತ್ಗೆ ಸೂಚಿಸಲಾಗಿದ್ದು, ರಾಜಕೀಯ ಬಿಕ್ಕಟ್ಟಿನ ನಡುವೆ ರಾವತ್ರನ್ನು ಇ.ಡಿ. ಟಾರ್ಗೆಟ್ ಮಾಡಿದೆಯಾ ಎಂಬ ಚರ್ಚೆಗೆ ಇದು ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾವತ್, ನನ್ನ ತಲೆ ಕತ್ತರಿಸಿದರೂ ತೊಂದರೆಯಿಲ್ಲ, ಬೆದರಿಕೆಗೆ ಬಗ್ಗಿ ಗುವಾಹಟಿಗೆ ಓಡುವುದಿಲ್ಲ ಎಂದು ಉತ್ತರಿಸಿದ್ದಾರೆ. ಖಾಸಗಿ ಲೇವಾದೇವಿ ಪ್ರಕರಣ ಸಂಬಂಧ ಈ ಹಿಂದೆಯೇ ಸಂಜಯ್ ರಾವತ್ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಈಗ ವಿಚಾರಣೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ.
ಪತ್ರಾ ಚಾಲ್ ಭೂ ಕಬಳಿಕೆ ಪ್ರಕರಣ ಸಂಬಂಧ ವಿಚಾರಣೆಗೆ ಇಡಿ ನೊಟೀಸ್ ನೀಡಿದ್ದು, ಕಳೆದ ಏಪ್ರಿಲ್ ತಿಂಗಳಲ್ಲಿ ಸಂಜಯ್ ರಾವತ್ ಅವರ ಆಸ್ತಿಯನ್ನು ಜಪ್ತಿ ಮಾಡಿತ್ತು. ಇದರಿಂದ ಮಹಾ ವಿಕಾಸ್ ಅಗಾಢಿ ಸರ್ಕಾರದ ನಾಯಕರು ಸಿಟ್ಟಾಗಿದ್ದರು. ಕೇಂದ್ರ ಸರ್ಕಾರ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಲಾಗಿತ್ತು. ಮುಂಬೈನ ಗೋರೆಗಾಂವ್ನಲ್ಲಿನ ಸುಮಾರು ರೂ. 1,040 ಕೋಟಿ ಮೌಲ್ಯದ ಭೂಮಿಯನ್ನು ಸಂಜಯ್ ರಾವತ್ ಕಬಳಿಕೆ ಮಾಡಿಕೊಂಡಿದ್ದಾರೆ ಎಂದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಚಾರಣೆಗೆ ಹಾಜರಾಗುವಂತೆ ನೀಡಿರುವ ನೊಟೀಸಿಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ಸಂಜಯ್ ರಾವತ್, "ನನಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿರುವು ಈಗಷ್ಟೆ ತಿಳಿಯಿತು. ಒಳ್ಳೆಯದೇ ಆಯಿತು! ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬಳವಣಿಗೆಗಳು ಆರಂಭವಾಗಿದೆ. ಬಾಳಾ ಸಾಹೇಬರ ಶಿವ ಸೈನಿಕರು ನಾವು ದೊಡ್ಡ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ನನ್ನನ್ನು ಹೋರಾಟದಿಂದ ದೂರ ಸರಿಸಲು ಈ ಷಡ್ಯಂತ್ರ ಮಾಡಲಾಗಿದೆ. ನೀವು ನನ್ನ ತಲೆ ಕತ್ತರಿಸಿದರೂ ಗುವಾಹಟಿಯ ದಾರಿ ಹಿಡಿಯಲಾರೆ. ಬಂಧಿಸಿ! ಜೈ ಹಿಂದ್!," ಎಂದು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
ಏಕನಾಥ ಶಿಂಧೆ ಬೆಂಬಲಿಸುತ್ತಿರುವ ಬಂಡಾಯ ಶಾಸಕರು ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ, ಬೆದರಿಕೆಗೆ ತಲೆಬಾಗಿ ಉದ್ಧವ್ ಠಾಕ್ರೆಯವರಿಗೆ ವಂಚಿಸಿ ಗುವಾಹಟಿಗೆ ಹೋಗಲಾರೆ ಎಂಬರ್ಥದಲ್ಲಿ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ. ನಿನ್ನೆಯಷ್ಟೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ರಾವತ್, ಕಾನೂನು ಸಮರಕ್ಕೂ ಸಿದ್ಧ ಬೀದಿಗಿಳಿದು ಹೋರಾಡಲೂ ಸಿದ್ಧ ಎಂಬ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಇನ್ನೊಂದು ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದರು. "ಉದ್ಧವ್ ಠಾಕ್ರೆ ಅವರ ವಿರುದ್ಧ ಬಂಡಾಯವೆದ್ದು ಗುವಾಹಟಿಗೆ ಹೋಗಿರುವ ಎಲ್ಲಾ ಶಾಸಕರು ಬರುವುದು ಹೆಣವಾಗಿ," ಎಂಬ ಹೇಳಿಕೆ ನೀಡಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಇದನ್ನೂ ಓದಿ: ಶಿಂಧೆ ಬಣಕ್ಕೆ ಮತ್ತಷ್ಟು ಬಲ: ಸಂಜಯ್ ರಾವುತ್ ಸೋದರನಿಂದಲೂ ಬಂಡಾಯ?
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮ ಮುಂದುವರೆದಿದ್ದು, ಶಿವಸೇನೆಯ ವಿರುದ್ಧ ಬಂಡಾಯವೆದ್ದಿರುವ ಏಕನಾಥ ಶಿಂಧೆ ಸೇರಿದಂತೆ 40 ಶಾಸಕರು ಠಾಕ್ರೆ ಪಕ್ಷದ ನಿದ್ದೆಗೆಡಿಸಿದ್ದಾರೆ. ಹೀಗಿರುವಾಗಲೇ ಈಗ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವುತ್ '40 ಶಾಸಕರ ಮೃತದೇಹವಷ್ಟೇ ಗುವಾಹಟಿಯಿಂದ ರಾಜ್ಯಕ್ಕೆ ಬರಲಿದೆ. ಅವುಗಳನ್ನು ನೇರವಾಗಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗುತ್ತದೆ ಎಂದಿರುವ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಗುವಾಹಟಿಯಿಂದ 40 ಶಾಸಕರ ಶವ ತಲುಪುತ್ತೆ: ಬಂಡಾಯವೆದ್ದವರಿಗೆ ಶಿವಸೇನೆ ನಾಯಕನ ಬಹಿರಂಗ ಬೆದರಿಕೆ!
ಹೌದು ಕಳೆದೊಂದು ವಾರದಿಂದಮ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಇಡೀ ದೇಶದಲ್ಲೇ ಸದ್ದು ಮಾಡುತ್ತಿದೆ. ಹೀಗಿರುವಾಗ ಅಧಿಕಾರ ಕಳೆದುಕೊಳ್ಳುವ ಹಂತದಲ್ಲಿರುವ ಶಿವಸೇನೆ ಸರ್ಕಾರ ಉಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಅತ್ತ ಸಿಎಂ ಉದ್ಧವ್ ಠಾಕ್ರೆ ಕುರ್ಚಿ ಉಳಿಸಿಕೊಳ್ಳಲು, ಬಿಜೆಪಿಗೆ ಅಧಿಕಾರ ನೀಡದಿರಲು ಎಲ್ಲಾ ಯತ್ನಗಳನ್ನು ಮಾಡಿದ್ದಾರೆ. ಭಾವನಾತ್ಮಕವಾಗಿ ಮಾತನಾಡಿ ಬಂಡಾಯ ಶಾಸಕರ ಮನವೊಲಿಸಲು ಯತ್ನಿಸಿದ್ದು, ಅದರಲ್ಲಿ ವಿಫಲವಾದಾಗ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ಹೀಗಿದ್ದರೂ ಬಂಡಾಯ ಶಾಸಕರು ಮಾತ್ರ ಯಾವುದಕ್ಕೂ ಜಗ್ಗಿಲ್ಲ. ಹೀಗಿರುವಾಗ ಈ ವಿಚಾರವಾಗಿ ಹಿರಿಯ ನಾಯಕ ಸಂಜಯ್ ರಾವತ್ ಕೂಡಾ ಭಾರೀ ಸದ್ದು ಮಾಡುತ್ತಿದ್ದಾರೆ. ಒಂದಾದ ಬಳಿಕ ಮತ್ತೊಂದರಂತೆ ಅವರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳೇ ಶಿವಸೇನೆಗೆ ಮತ್ತಷ್ಟು ಕಂಟಕವಾಗುತ್ತಿವೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರವನ್ನು ಅಲುಗಾಡಿಸಿದ ಆಟೋರಾಜ!
40 ಶಾಸಕರ ಶವ ಬರಲಿದೆ:
ಸದ್ಯ ರಾವತ್ ನೀಡಿರುವ ಭಾಷಣವೊಂದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದರಲ್ಲಿ ರಾವತ್ ಸರ್ಕಾರ ಹಾಗೂ ಶಿವಸೇನೆ ವಿರುದ್ಧ ಬಂಡಾಯವೆದ್ದು ಗುವಾಹಟಿಯ ಹೋಟೆಲ್ ಸೇರಿರುವ ಶಿಂಧೆ ಸೇರಿ ನಲ್ವತ್ತು ಶಾಸಕರಿಗೆ ಬಹಿರಂಗ ಬೆದರಿಕೆಯೊಡ್ಡಿದ್ದಾರೆ. ಹೌದು ಕಾರ್ಯಕರ್ತರನ್ನುದ್ದೇಶಿಸಿ ಉದ್ರಿಕ್ತ ಭಾಷಣ ಮಾಡಿರುವ ಸಂಜಯ್ ರಾವತ್ ನಾವು ಗುವಾಹಟಿಯಿಂದ 40 ಬಂಡಾಯ ಶಾಸಕರ ಶವಗಳನ್ನು ನೇರವಾಗಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸುತ್ತೇವೆ ಎಂದಿದ್ದಾರೆ. ಬಿಜೆಪಿ ನಾಯಕರು ಸೇರಿದಂತೆ ಅನೇಕ ಮಂದಿ ಈ ವಿಡಿಯೋ ತುಣುಕನ್ನು ಶೇರ್ ಮಾಡಿಕೊಳ್ಳುತ್ತಿದ್ದು, ರಾವತ್ ವರ್ತನೆ ಸರಿಯಲ್ಲ, ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.