ಸಿಎಂ ಸಿದ್ದರಾಮಯ್ಯರ 'ಅಧಿಕಾರ ಶಾಶ್ವತವಲ್ಲ' ಹೇಳಿಕೆ, ಕೆ.ಸಿ. ವೇಣುಗೋಪಾಲ್ ಮಂಗಳೂರು ಭೇಟಿ ಹಾಗೂ 'ಡಿ.ಕೆ...ಡಿ.ಕೆ...' ಘೋಷಣೆಗಳ ಕುರಿತು ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಗಳಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದರು.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳೂರು ಭೇಟಿ ಹಾಗೂ ವಿಮಾನ ನಿಲ್ದಾಣದಲ್ಲಿ ಏಕಾಏಕಿ ಮೊಳಗಿದ “ಡಿ.ಕೆ… ಡಿ.ಕೆ…” ಘೋಷಣೆ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

“ಅಧಿಕಾರ ಶಾಶ್ವತವಲ್ಲ ಎಂದ ಸಿಎಂ ಹೇಳಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ “ಅಧಿಕಾರ ಶಾಶ್ವತವಲ್ಲ” ಎಂಬ ಹೇಳಿಕೆಗೆ , ಅದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಡಿ.ಕೆ. ಸುರೇಶ್ “ಸಿಎಂ ಅವರು ಸಹಜವಾಗಿ ಮಾತನಾಡಿದ್ದಾರೆ. ಅದಕ್ಕೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ವಿಶ್ಲೇಷಣೆ ಮಾಡೋದೂ ಬೇಡ.” ಸಿಎಂ ಹೇಳಿಕೆಗೆ ಅತಿಯಾಗಿ ರಾಜಕೀಯ ಬಣ್ಣ ನೀಡಬಾರದು ಎಂದು ಅವರು ತಿಳಿಸಿದರು.

ವೇಣುಗೋಪಾಲ್ ಮಂಗಳೂರು ಭೇಟಿ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳೂರು ಭೇಟಿ ಹಿನ್ನೆಲೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದರೂ, ಡಿ.ಕೆ. ಸುರೇಶ್ ಅವರು ಈ ಭೇಟಿಗೆ ಯಾವುದೇ ರಾಜಕೀಯ ಮಹತ್ವ ನೀಡಬಾರದು ಎಂದು ಹೇಳಿದರು. ವೇಣುಗೋಪಾಲ್ ಮಂಗಳೂರಿನಲ್ಲಿ ಕಾರ್ಯಕ್ರಮ ಇರುವುದರಿಂದ ಆಗಮಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಅವರು ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಕೆಲಸಕ್ಕೆ ತೆರಳುತ್ತಾರೆ ಎಂದರು.

ಮಂಗಳೂರಿನಲ್ಲಿ ವೇಣುಗೋಪಾಲ್ ಕಾರಿಗೆ ಡಿಕೆ ಪರ ಕಾರ್ಯಕರ್ತರು "ಡಿ.ಕೆ… ಡಿ.ಕೆ…" ಘೋಷಣೆ ಕೂಗಿ ವಾಹನದತ್ತ ಧಾವಿಸಿದ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು ಯಾರು ಸಹ ಕಾರಿಗೆ ಮುತ್ತಿಗೆ ಹಾಕಿರಲಿಲ್ಲ. ಅಭಿಮಾನದಿಂದ ಕೂಗಿರಬಹುದು ಅಷ್ಟೇ. ಕಾರ್ಯಕರ್ತರ ವರ್ತನೆಗೆ ಅತಿಯಾಗಿ ರಾಜಕೀಯ ಅರ್ಥ ಹುಡುಕಬೇಡಿ ಎಂದು ಅವರು ಮನವಿ ಮಾಡಿದರು. ಇನ್ನು ಮಂಗಳೂರು ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡದಿರುವ ವಿಚಾರ ಪ್ರಶ್ನಿಸಿದಾಗ, ಡಿ.ಕೆ. ಸುರೇಶ್ ಅವರು ಕೆಲವು ಕ್ಷಣ ಮೌನವಾಗಿದ್ದು, ನಂತರ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾದರು.