Asianet Suvarna News Asianet Suvarna News

ಕಾಂಗ್ರೆಸ್ಸಿನ ‘ಸುಳ್ಳು ಗ್ಯಾರಂಟಿ’ಯಿಂದ ಬಿಜೆಪಿಗೆ ಸೋಲು: ಹಾಲಪ್ಪ ಆಚಾರ್‌

ಕಾಂಗ್ರೆಸ್‌ ಬರೀ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜನರಿಗೆ ಗ್ಯಾರಂಟಿಗಳ ಭರವಸೆ ನೀಡಿದೆ. ವೈಜ್ಞಾನಿಕ ಆಲೋಚನೆಯಿಲ್ಲದೆ ಘೋಷಿಸಿರುವ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗುವುದಿಲ್ಲ ಎಂದ ಮಾಜಿ ಸಚಿವ ಹಾಲಪ್ಪ ಆಚಾರ್‌ 

Defeat to BJP due to Congress False Guarantee Says Former Minister Halappa Achar grg
Author
First Published May 27, 2023, 4:30 AM IST

ಬಳ್ಳಾರಿ(ಮೇ.27):  ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿಗಳ ಘೋಷಣೆಯಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲುವಂತಾಯಿತು. ಚುನಾವಣೆಗಳಲ್ಲಿ ಸೋಲು- ಗೆಲುವು ಸಹಜ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಂಘಟನೆಯಲ್ಲಿ ಸಕ್ರಿಯವಾಗಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್‌ ಸಲಹೆ ನೀಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಬರೀ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜನರಿಗೆ ಗ್ಯಾರಂಟಿಗಳ ಭರವಸೆ ನೀಡಿದೆ. ವೈಜ್ಞಾನಿಕ ಆಲೋಚನೆಯಿಲ್ಲದೆ ಘೋಷಿಸಿರುವ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗುವುದಿಲ್ಲ ಎಂದರು.

ಗೆಲುವಿನ ಹರಕೆ ತೀರಿಸಿದ ಶಾಸಕ ನಾಗೇಂದ್ರ: ರಾಜಸ್ಥಾನದ ಅಜ್ಮೀರ ದರ್ಗಾಕ್ಕೆ ಭೇಟಿ

ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಸೋಲಿನ ಭಯ ಕಾಡಿತು. ಹೇಗಾದರೂ ಮಾಡಿ ಈ ಬಾರಿ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಐದು ಗ್ಯಾರಂಟಿಗಳನ್ನು ನೀಡಿದರು. ಜನರು ಅದನ್ನೇ ನಂಬಿಕೊಂಡು ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಭರವಸೆಗಳನ್ನು ಈಡೇರಿಸುವ ಕುರಿತು ಸ್ಪಷ್ಟವಾಗಿ ಹೇಳುತ್ತಿಲ್ಲ. ಆ ಪಕ್ಷದ ನಾಯಕರೇ ಗ್ಯಾರಂಟಿಗಳ ಬಗ್ಗೆ ವಿವಿಧ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯದಲ್ಲಿ ಸಹ ಸುಳ್ಳುಗಳನ್ನು ಹೇಳಿಯೇ ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಚುನಾವಣೆಯಲ್ಲಿ ನೀಡಿದ ಭರವಸೆ, ಘೋಷಣೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರಲ್ಲದೆ, ಚುನಾವಣೆ ಫಲಿತಾಂಶದಿಂದ ಕಾರ್ಯಕರ್ತರು ಕಂಗೆಡದೆ ಲೋಕಸಭಾ ಚುನಾವಣೆಗೆ ತಯಾರಾಗಿ ಕೆಲಸ ಆರಂಭಿಸಬೇಕು. ಜನರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಕುರಿತು ಮತದಾರರಲ್ಲಿ ಮನವರಿಕೆ ಮಾಡುವ ಕೆಲಸ ನಿರಂತರವಾಗಿ ಮಾಡಬೇಕು ಎಂದರು.

ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ಕಾಂಗ್ರೆಸ್‌ ಚುನಾವಣೆ ವೇಳೆ ಘೋಷಣೆ ಮಾಡಿದ ಗ್ಯಾರಂಟಿಗಳಲ್ಲಿ ಯಾವುದೇ ಷರತ್ತುಗಳು ಇರಲಿಲ್ಲ. ಗೆದ್ದ ಮೇಲೆ ನಾನಾ ಷರತ್ತುಗಳನ್ನು ಹಾಕಿ ಜನರಿಗೆ ದ್ರೋಹ ಎಸಗುತ್ತಿದ್ದಾರೆ. ನಿಜಕ್ಕೂ ಕಾಂಗ್ರೆಸ್‌ಗೆ ಜನಪರ ಕಾಳಜಿಯಿದ್ದರೆ ತಾವೇ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಯಾವುದೇ ಕಂಡೀಷನ್‌ಗಳನ್ನು ಹಾಕದೆ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

Karnataka Election Result 2023: ಬಳ್ಳಾರಿಗೆ ಜನರಿಗೆ ಕೊಟ್ಟ ಮಾತು ಈಡೇರಿಸುತ್ತಾರಾ ರಾಹುಲ್ ಗಾಂಧಿ

ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್‌ ಮಾತನಾಡಿ, ಬಳ್ಳಾರಿ ನಗರ ಶಾಸಕರಾಗಿದ್ದ ಜಿ. ಸೋಮಶೇಖರ ರೆಡ್ಡಿ ಅವರು ಯಾವಾಗಲೂ ಜನರಿಗೆ ಸಿಗುತ್ತಿದ್ದರು. ನಗರ ನಿವಾಸಿಗಳ ಕಷ್ಟ- ಸುಖಗಳಿಗೆ ಸದಾ ಸ್ಪಂದಿಸುತ್ತಿದ್ದರು. ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದು ಸಾಕಷ್ಟು ಕೆಲಸ ಮಾಡಿದರು. ನಗರದ 19 ಸಾವಿರ ಮನೆಗಳಿಗೆ ಪಟ್ಟಾನೀಡಿದ ಸೋಮಶೇಖರ ರೆಡ್ಡಿ ಅವರು ಈ ಹಿಂದೆ ಯಾವ ಶಾಸಕರು ಮಾಡದ ದೊಡ್ಡ ಕೆಲಸ ಮಾಡಿ, ಬಡಜನರಿಗೆ ನೆರವಾಗಿದ್ದರು. ಇಷ್ಟಾಗಿಯೂ ಮತದಾರರು ಕಾಂಗ್ರೆಸ್‌ ಕಡೆ ವಾಲಿದ್ದು ಅತ್ಯಂತ ಬೇಸರ ಮೂಡಿಸಿದೆ ಎಂದರು.

ಪಕ್ಷದ ಜಿಲ್ಲಾ ಪ್ರಮುಖರಾದ ಸಾಧನಾ ಹಿರೇಮಠ, ಅನಿಲ್‌ನಾಯ್ಡು ಮೋಕಾ, ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುಗುಣಾ, ಉಪಾಧ್ಯಕ್ಷೆ ಪುಷ್ಪಾ, ಶಿವಕುಮಾರ್‌, ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್‌, ಇಬ್ರಾಹಿಂಬಾಬು, ಕೆ. ಹನುಮಂತಪ್ಪ, ಗೋವಿಂದರಾಜುಲು ಹಾಗೂ ಬಳ್ಳಾರಿ ಬಿಜೆಪಿ ಶಕ್ತಿ ಕೇಂದ್ರದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios