ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರು ಭರ್ಜರಿ ಮುನ್ನಡೆ ಸಾಧಿಸಿ ಗೆಲುವಿನ ಸನಿಹದಲ್ಲಿದ್ದಾರೆ. ಕೆಲವು ಇವಿಎಂಗಳಲ್ಲಿ ತಾಂತ್ರಿಕ ದೋಷ ಹಿನ್ನೆಲೆ ವಿವಿಪ್ಯಾಟ್ ಮತಗಲ ಎಣಿಕೆ ಮಾಡಲಾಗುತ್ತದೆ. ಬಿಜೆಪಿ ಹಣಬಲದ ಆರೋಪ ಮಾಡಿದೆ.
ದಾವಣಗೆರೆ (ಮೇ 04): ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರು ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ. 20ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸಮರ್ಥ ಶಾಮನೂರು ಅವರು ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನು ಉಳಿಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಮುನ್ನಡೆ ಮತ್ತು ಜೈಕಾರ:
19ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸಮರ್ಥ ಶಾಮನೂರು ಅವರು 5,826 ಮತಗಳ ಮುನ್ನಡೆ ಸಾಧಿಸಿದ್ದರು. ಆದರೆ 20ನೇ ಸುತ್ತು ಮುಕ್ತಾಯವಾಗುವಷ್ಟರಲ್ಲಿ ಈ ಮುನ್ನಡೆಯ ಅಂತರ 7,900ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 10,000 ಮತಗಳ ಎಣಿಕೆ ಬಾಕಿ ಇದ್ದು, ಸಮರ್ಥ ಶಾಮನೂರು ಅವರ ಗೆಲುವು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಏಜೆಂಟ್ಗಳು ಸಮರ್ಥ ಶಾಮನೂರು ಪರವಾಗಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸುತ್ತಿದ್ದಾರೆ.
ತಾಂತ್ರಿಕ ಸಮಸ್ಯೆ ಮತ್ತು ವಿವಿಪ್ಯಾಟ್ ಸ್ಲಿಪ್ ಎಣಿಕೆ:
ಮತ ಎಣಿಕೆಯ ನಡುವೆ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ನಾಲ್ಕು ಬೂತ್ಗಳ ಇವಿಎಂ (EVM) ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅವುಗಳ ಮತ ಎಣಿಕೆ ಬಾಕಿ ಉಳಿದಿದೆ. ಎಲ್ಲಾ ಸುತ್ತಿನ ಮತ ಎಣಿಕೆ ಮುಗಿದ ಬಳಿಕ ಈ ನಾಲ್ಕು ಬೂತ್ಗಳ ವಿವಿಪ್ಯಾಟ್ (VVPAT) ಸ್ಲಿಪ್ಗಳನ್ನು ಎಣಿಕೆ ಮಾಡಿ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬೆಂಬಲಿಗರಿಂದ ಕಣ್ಣೀರು ಮತ್ತು ಆರೋಪ:
ಇನ್ನೊಂದೆಡೆ, ಬಿಜೆಪಿಯ ಸೋಲು ಖಚಿತವಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಗಂಗಾಧರ ಅವರ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಗಂಗಾಧರಪ್ಪ, 'ಕಾಂಗ್ರೆಸ್ ಅಭ್ಯರ್ಥಿ ಮೋಸ ಮತ್ತು ಹಣಬಲದಿಂದ ಗೆಲುವು ಸಾಧಿಸಿದ್ದಾರೆ'ಎಂದು ಆರೋಪಿಸುತ್ತಾ ಭಾವುಕರಾದರು. ಅಲ್ಲದೆ, '2028ರ ಚುನಾವಣೆಯಲ್ಲಿ ಮತ್ತೊಮ್ಮೆ ಶ್ರೀನಿವಾಸ್ ದಾಸ್ ಕರಿಯಪ್ಪನವರನ್ನು ನಿಲ್ಲಿಸಿ, ಅವರನ್ನು ಭರ್ಜರಿಯಾಗಿ ಗೆಲ್ಲಿಸಿ ಮಂತ್ರಿಯನ್ನಾಗಿ ಮಾಡುತ್ತೇವೆ'ಎಂದು ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಶಪಥ ಮಾಡಿದರು.
ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಪ್ರತಿಕ್ರಿಯೆ:
ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಗಳಿಸಿದ ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರು 17 ಸಾವಿರಕ್ಕೂ ಹೆಚ್ಚು ಮತ ನೀಡಿದ ದಾವಣಗೆರೆ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. 'ಲ್ಕು ಬೂತ್ಗಳ ಎಣಿಕೆ ಬಾಕಿ ಇರುವುದು ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು. ನಾನು ಈಗ ದಾವಣಗೆರೆಗೆ ನನ್ನ ಮನೆಯನ್ನು ಶಿಫ್ಟ್ ಮಾಡಿದ್ದೇನೆ, ಈ ಭಾಗದ ಜನರ ಜೊತೆ ಸದಾ ಇರುತ್ತೇನೆ'ಎಂದು ತಿಳಿಸಿದರು.
ಒಟ್ಟಾರೆಯಾಗಿ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯೋತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದರೆ, ಬಿಜೆಪಿ ಸೋಲಿನ ಹತಾಶೆಯಲ್ಲಿದೆ. ಅಂತಿಮವಾಗಿ ವಿವಿಪ್ಯಾಟ್ ಎಣಿಕೆಯ ನಂತರ ಅಧಿಕೃತ ಗೆಲುವಿನ ಅಂತರ ಹೊರಬೀಳಲಿದೆ.


