ತಾಲೂಕು ಮಟ್ಟದ ಅಧಿಕಾರಿಗಳ ತಂಡ ಕಟ್ಟಿಕೊಂಡು, ಗ್ರಾಮಗಳಿಗೆ ತೆರಳಿ ಜನರ ಅಹವಾಲು ಆಲಿಸಿ, ಪರಿಹರಿಸುವ ಕಾರ್ಯ ಕೈಗೆತ್ತಿಕೊಂಡಿರುವ ಶಾಸಕ ಪ್ರದೀಪ್ ಈಶ್ವರ್‌ ಪ್ರಯತ್ನಕ್ಕೆ ಬೆನ್ನುತಟ್ಟಿ ಶುಭ ಹಾರೈಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ 

ಚಿಕ್ಕಬಳ್ಳಾಪುರ(ಡಿ.19):  ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಜನರ ಸಮಸ್ಯೆ ಆಲಿಸಿ, ಸ್ಥಳದಲ್ಲೇ ಸಮಸ್ಯೆ ಪರಿಹರಿಸಲು ಶಾಸಕ ಪ್ರದೀಪ್‌ ಈಶ್ವರ್ ಹಮ್ಮಿಕೊಂಡಿರುವ 'ನಮ್ಮ ಊರಿಗೆ ನಮ್ಮ ಶಾಸಕರು' ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಾಲೂಕು ಮಟ್ಟದ ಅಧಿಕಾರಿಗಳ ತಂಡ ಕಟ್ಟಿಕೊಂಡು, ಗ್ರಾಮಗಳಿಗೆ ತೆರಳಿ ಜನರ ಅಹವಾಲು ಆಲಿಸಿ, ಪರಿಹರಿಸುವ ಕಾರ್ಯ ಕೈಗೆತ್ತಿಕೊಂಡಿರುವ ಶಾಸಕ ಪ್ರದೀಪ್ ಈಶ್ವರ್‌ ಪ್ರಯತ್ನಕ್ಕೆ ಬೆನ್ನುತಟ್ಟಿ ಶುಭ ಹಾರೈಸಿದೆ. ಇಂತಹ ಜನಪರವಾದ ಕಾರ್ಯಕ್ಕೆ ನನ್ನ ಹಾಗೂ ನಮ್ಮ ಸರ್ಕಾರದ ಬೆಂಬಲ ಇರಲಿದೆ ಎಂಬ ವಿಶ್ವಾಸ ತುಂಬಿದ್ದೇನೆ. 50 ಹಳ್ಳಿಗಳಿಗೆ ತೆರಳಿ ರಸ್ತೆ, ಚರಂಡಿ, ಬಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಪಿಂಚಣಿ, ನಿವೇಶನ ಸಮಸ್ಯೆ ಆಲಿಸಿ, ಪರಿಹರಿಸಿದ್ದಾರೆ. ಈ ಕಾರ್ಯಕ್ರಮ ಇನ್ನಷ್ಟು ಜನರನ್ನು ತಲುಪುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ನೆರವಾಗಲೆಂದು ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಮಾಸ್ಟರ್‌ ಪ್ಲಾನ್‌: ಪ್ರದೀಪ್‌ ಈಶ್ವರ್‌

ಪರಿಶ್ರಮ ನೀಟ್ ಅಕಾಡೆಮಿ ಸ್ಥಾಪಿಸಿ ಯಶಸ್ಸು ಕಂಡಿರುವ ಪ್ರದೀಪ್ ಈಶ್ವರ್ ಶಾಸಕರಾಗಿ ಆಯ್ಕೆಯಾದ ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ್ದಾರೆ. ಸ್ವಂತ ಹಣದಿಂದ ಕ್ಷೇತ್ರದ ಜನತೆಗೆ ಮಾಸಿಕ ₹15 ಲಕ್ಷ ವೆಚ್ಚದಲ್ಲಿ 10 ಉಚಿತ ಆ್ಯಂಬ್ಯುಲೆನ್ಸ್ ಸೇವೆ, 70 ಸಾವಿರ ಮಹಿಳೆಯರಿಗೆ 2ನೇ ಬಾರಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರೆ ವಿತರಣೆ, ಕ್ಷೇತ್ರದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್, ಸಿಇಟಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ತರಬೇತಿ, ಪದವಿ ಪೊರೈಸಿದವರಿಗೆ ಕೆಎಎಸ್, ಐಎಎಸ್, ಐಪಿ ಎಸ್, ಐಆರ್‌ಎಸ್ ತರಬೇತಿ ವಸತಿ, ಊಟ ಸಹಿತ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ವಾರ್ಷಿಕ ವೆಚ್ಚವಾಗುವ ₹3 ರಿಂದ ₹4 ಕೋಟಿಯನ್ನು ಶಾಸಕರೇ ಭರಿಸುತ್ತಿದ್ದಾರೆ. ಕ್ಷೇತ್ರದ 20 ಸಾವಿರ ವಿದ್ಯಾರ್ಥಿಗಳಿಗೆ ದೀಪಾವಳಿ ಹಬ್ಬಕ್ಕೆ ಬಟ್ಟೆ, ಅಂಗನವಾಡಿ ಮಕ್ಕಳಿಗೆ ಬಟ್ಟೆ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗೆ ತಲಾ ಸಾವಿರ ರು. ವಿದ್ಯಾರ್ಥಿ ವೇತನ, ಎಂಜನೀಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರು. ವಿದ್ಯಾರ್ಥಿ ವೇತನ ನೀಡಿದ್ದಾರೆ. ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಒಂದು ಲಕ್ಷ ರು. ಆರ್ಥಿಕ ನೆರವು ನೀಡಿದಾರೆ.