ಸಂಪುಟ ವಿಸ್ತರಣೆ: ನಡ್ಡಾ-ಬಿಎಸ್ವೈ ಭೇಟಿ ಅಂತ್ಯ, ಸಿಎಂ ಫಸ್ಟ್ ರಿಯಾಕ್ಷನ್
ರಾಜ್ಯ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿ ತೆರಳಿದ್ದು, ಹೈಕಮಾಂಡ್ ಜತೆ ಚರ್ಚಿಸಿದರು. ಹಾಗಾದ್ರೆ, ಏನೆಲ್ಲಾ ಆಯ್ತು ಎನ್ನುವುದನ್ನು ಅವರೇ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ, (ಸೆ.18): ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನ ಭೇಟಿ ಮಾಡಿದರು.
ಇಂದು (ಶುಕ್ರವಾರ ನವದೆಹಲಿಯಲ್ಲಿ ನಡ್ಡಾ ಅವರನ್ನ ಯಡಿಯೂರಪ್ಪ ಭೇಟಿ ಮಾಡಿ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಿದರು. ಆದ್ರೆ, ಸಂಪುಟ ವಿಸ್ತರಣೆ ಮುಹೂರ್ತ ಕೂಡಿಬಂದಂತಿಲ್ಲ.
ನಡ್ಡಾ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ವೈ, ನಡ್ಡಾ ಅವರ ಜೊತೆ ಸುದೀರ್ಘ ವಾಗಿ ಸಂಪುಟದ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಧಾನಿ, ತಾವು ಕೂತು ತೀರ್ಮಾನ ತೆಗೆದುಕೊಳ್ತವೆ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ಭೇಟಿಯಾದ ಬಿಎಸ್ವೈ, 15 ನಿಮಿಷ ಮಹತ್ವದ ಚರ್ಚೆ..!
ಅಧಿವೇಶನಕ್ಕೆ ಮುನ್ನ ವಿಸ್ತರಣೆ ಆಗಬೇಕು ಅನ್ನೋದು ನನ್ನ ಆಪೇಕ್ಷೆ. ವಿಸ್ತರಣೆಯೋ, ಪುನರ್ ರಚನೆಯೋ, ಎಷ್ಟು ಮಂದಿ ಅನ್ನೋದು ಹೈಕಮಾಂಡ್ ತಿಳಿಸಲಿದೆ ಎಂದು ಹೇಳಿದರು.
ನಡ್ಡಾ ಅವರು ಪ್ರಧಾನಿಯವರ ಜತೆ ಮಾತನಾಡುತ್ತೇನೆ ಎಂದರೆ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿಲ್ಲ. ಇನ್ನು ಸಿಎಂ ಮಾತುಗಳನ್ನ ಗಮನಿಸಿದ್ರೆ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಒಪ್ಪಿಗೆ ನೀಡುವುದು ಅನುಮಾನವಾಗಿದೆ.
ಭಾರೀ ಆಸೆಯೊಂದಿಗೆ ತೆರಳಿದ್ದ ಬಿಎಸ್ವೈಗೆ ನಡ್ಡಾ ಜೊತೆಗಿನ ಸಭೆ ಫಲ ನೀಡಿಲ್ಲ. ಇದೇ ಸೆಪ್ಟೆಂಬರ್ 21ರಿಂದ ಅಧಿವೇಶ ನಡೆಯುವುದರಿಂದ ಅದರೊಳಗೆ ಸಂಪುಟ ವಿಸ್ತರಣೆ ಮಾಡಬೇಕೆನ್ನುವುದು ಯಡಿಯೂರಪ್ಪ ಆಸೆಯಾಗಿದೆ.
ಆದ್ರೆ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಧಾನಿಗಳ ಜತೆ ಚರ್ಚೆ ಮಾಡುತ್ತೇನೆ ಎಂದಿದ್ದು, ಸಂಪುಟ ವಿಸ್ತರಣೆ ಇನ್ನಷ್ಟು ದಿನ ವಿಳಬಂವಾಗುವ ಸಾಧ್ಯತೆಗಳು ಹೆಚ್ಚಿವೆ. ಯಾಕಂದ್ರೆ ಸದ್ಯ ಪ್ರಧಾನಿ ಮೋದಿ ಅವರು ಸಂಸತ್ ಅಧಿವೇಶನದಲ್ಲಿ ಬ್ಯುಸಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನದ ಬಳಕವೇ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದರಿಂದ ಬಿಎಸ್ ಯಡಿಯೂರಪ್ಪಗೆ ತೀವ್ರ ನಿರಾಸೆಯಾಗಿದೆ. ಅಲ್ಲದೇ ಅಧಿವೇಶನಕ್ಕೆ ಸಚಿವರಾಗಿ ಹೋಗುತ್ತೇವೆ ಎಂದುಕೊಂದ್ದ ಆಕಾಂಕ್ಷಿಗಳ ಕನಸು ಕನಸಾಗಿಯೇ ಉಳಿದಿದೆ.