* ಬಿಜೆಪಿ ಯುವ ಕಾರ್ಯಕರ್ತರ ಅಸಮಾಧಾನ * ಕಾಲಹರಣ ಮಾಡಿ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ * ಜೆಡಿಎಸ್ಗೆ ಸಂಗಪ್ಪ ಕದಂಗಲ್ ರಾಜೀನಾಮೆ
ಸಿ.ಎಂ.ಜೋಶಿ
ಗುಳೇದಗುಡ್ಡ(ಫೆ.27): ರಾಜ್ಯ ಹಾಗೂ ಕೇಂದ್ರದಲ್ಲಿ ತಮ್ಮದೇ ಸರ್ಕಾರವಿದ್ದರೂ ಮತಕ್ಷೇತ್ರದಲ್ಲಿ ಯುವ ಕಾರ್ಯಕರ್ತರನ್ನು ಕಡೆಗಣಿಸುವ, ಹತ್ತಾರು ವರ್ಷ ಪಕ್ಷದಲ್ಲಿ ದುಡಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಇಲ್ಲಿನ ಬಿಜೆಪಿ(BJP) ಯುವ ಕಾರ್ಯಕರ್ತರು(Activists) ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಭಾಗವಾಗಿ ಅವರು ಇತರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಇದಕ್ಕಾಗಿ ತೆರೆಮರೆಯ ತಯಾರಿ ಕೂಡ ಕೆಲ ದಿನಗಳಿಂದ ನಡೆಸಿರುವುದು ರಾಜಕೀಯ(Politics) ಬದಲಾವಣೆ ಗಾಳಿ ಬೀಸುತ್ತಿದೆ ಎಂದೇ ಹೇಳಲಾಗುತ್ತಿದೆ.
ಕಳೆದ ವರ್ಷದಲ್ಲಿ ಇದೇ ರೀತಿ ಬಿಜೆಪಿ ಮತ್ತು ಕಾಂಗ್ರೆಸ್(Congress) ಪಕ್ಷದಿಂದ ಅದೆಷ್ಟೋ ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್(JDS) ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಸಮ್ಮುಖದಲ್ಲಿ ಪಕ್ಷ ಸೇರಿದ್ದನ್ನು ಮರೆಯುವ ಮುನ್ನವೇ, ಮತ್ತೇ ಪಕ್ಷ ತೊರೆಯುವ ಪರ್ವ ಇಲ್ಲಿನ ಬಿಜೆಪಿ ಪಾಳೆಯದಲ್ಲಿ ಮತ್ತೆ ಪ್ರತಿಧ್ವನಿಸುತ್ತಿದೆ.
Flag Row: ಈಶ್ವರಪ್ಪ ಸಚಿವರಾಗಿರೋದಕ್ಕೆ ನಾಲಾಯಕ್: ಎಚ್.ಎಂ. ರೇವಣ್ಣ
ಪಕ್ಷದ ವಿರುದ್ಧವೇ ಅಸಮಾಧಾನ?:
ಬಾದಾಮಿ(Badami) ಮತಕ್ಷೇತ್ರದ ಗುಳೇದಗುಡ್ಡ ತಾಲೂಕು ವ್ಯಾಪ್ತಿಯ 38 ಗ್ರಾಮಗಳಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ(Siddaramaiah) ಅಭಿವೃದ್ಧಿ ಪರ್ವ ಕಳೆದ 3 ವರ್ಷಗಳಿಂದ ಸಾಗರೋಪಾದಿಯಲ್ಲಿ ನಡೆದಿದೆ. ರಾಜ್ಯದ(Karnataka) ಗಮನ ಮತಕ್ಷೇತ್ರದ ಕಡೆಗೆ ಸೆಳೆಯುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಮುಂಬರುವ 2023 ರ ಚುನಾವಣೆಗೆ(2023 Karnataka Assembly Elections) ಜೆಡಿಎಸ್ ಪಕ್ಷದ ಹನಮಂತ ಮಾವಿನಮರದ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದರೇ ಬಿಜೆಪಿ ಇದರ ಕಡೆಗೆ ಗಮನವನ್ನೂ ಕೊಡದೇ ಕೇವಲ ಕಾಲಹರಣ ಮಾಡಿ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದೆ ಎಂದು ಪಕ್ಷದ ಹಿರಿಯರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಘಟನೆ ಕೊರತೆಯಿಂದ ಮತ್ತೆ ತಾಲೂಕಿನ ಸುಮಾರು 300ರಷ್ಟು ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್ ಹಾಗೂ ಕಾಂಗ್ರೆಸ್ ಬಾಗಿಲು ತಟ್ಟುವ ತೆರೆಮರೆಯ ಚಟುವಟಿಕೆ ಕಳೆದ ತಿಂಗಳಿಂದ ನಡೆದಿದೆ. ಇಷ್ಟರಲ್ಲಿಯೇ ಅದಕ್ಕಾಗಿ ವೇದಿಕೆಯೂ ಸಿದ್ಧಗೊಳ್ಳುತ್ತಿದೆ. ನಾಯಕತ್ವದ ಕೊರತೆಯಿಂದ ಗುಳೇದಗುಡ್ಡದಲ್ಲಿ(Guledagudda) ಕಾರ್ಯಕರ್ತರ ವಿಶ್ವಾಸ ಪಡೆಯುವಲ್ಲಿ ಬಿಜೆಪಿ ಎಡವುತ್ತಿದೆ. ನಮ್ಮದೇ ಪಕ್ಷ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಡಳಿತದಲ್ಲಿ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಹೆಸರಿನ ಮೇಲೆ ಜನ ಬಿಜೆಪಿ ಬೆನ್ನಿಗೆ ಇದ್ದೇ ಇರುತ್ತಾರೆಂಬ ಅತಿಯಾದ ವಿಶ್ವಾಸ ಇಲ್ಲಿನ ಬಿಜೆಪಿ ಮುಖಂಡರಲ್ಲಿದೆ. ಹೀಗಾಗಿ ಪಕ್ಷ ಸಂಘಟನೆಯತ್ತ ಯಾರೂ ಗಮನಿಸುತ್ತಿಲ್ಲ ಎನ್ನುವುದು ಬಿಜೆಪಿ ಹಿರಿಯ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರದಲ್ಲಿ ಪಕ್ಷ ತೊರೆಯುವ ಸಂಭವ:
ಮೂಲಗಳ ಪ್ರಕಾರ ಗುಳೇದಗುಡ್ಡ ಭಾಗದ ಸುಮಾರು 200 ರಿಂದ 300 ಜನ ಬಿಜೆಪಿ ಕಾರ್ಯಕರ್ತರು ಸದ್ಯದಲ್ಲಿ ಪಕ್ಷ ತೊರೆದು ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರ್ಪಡೆಯಾಗುವ ವಿಷಯ ಬಹುತೇಕ ಖಚಿತವಾಗಿದ್ದು, ಈ ಸಂಬಂಧ ಇಲ್ಲಿನ ಮುಖಂಡರೊಂದಿಗೆ 2-3 ಬಾರಿ ಗುಪ್ತ ಸ್ಥಳಗಳಲ್ಲಿ ಚರ್ಚೆಗಳೂ ನಡೆದಿವೆ.
ವಾರದಲ್ಲಿ ಇದಕ್ಕೆ ವೇದಿಕೆ ಸಹ ಸಿದ್ಧವಾಗಲಿದೆ ಎನ್ನುವುದು ಇಲ್ಲಿ ಬಿಸಿ ಬಿಸಿ ಚರ್ಚೆ. ಸಣ್ಣಪುಟ್ಟ ವಿಷಯಕ್ಕೆ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಛಾಟಿಸುವ, ಚುನಾವಣೆ ಬಂದಾಗ ಕಾರ್ಯಕರ್ತರನ್ನು ಹುಡುಕಿ ಕರೆತರುವ ಸಂಪ್ರದಾಯ ಇಲ್ಲಿನ ಬಿಜೆಪಿಯಲ್ಲಿದ್ದರೇ ನಿರಂತರ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉಳಿದೆರಡು ಪಕ್ಷಗಳ ಮುಖಂಡರ ಕಾರ್ಯವೈಖರಿ ಈ ಸೆಳೆತಕ್ಕೆ ಕಾರಣವೂ ಆಗಿದೆ ಎನ್ನುತ್ತಾರೆ ಅಸಮಧಾನಿತ ನೊಂದ ಬಿಜೆಪಿ ಕಾರ್ಯಕರ್ತರು. ಸದ್ಯದಲ್ಲಿಯೇ ಬಿಜೆಪಿಯಿಂದ ನೂರಾರು ಯುವಕ ಕಾರ್ಯಕರ್ತರು ಪಕ್ಷ ತೊರೆಯುವ ದಿನಗಳು ಸಮೀಪದಲ್ಲಿರುವುದನ್ನು ಕಾದು ನೋಡಬೇಕಷ್ಟೆ.
Karnataka Politics: ರಾಷ್ಟ್ರವಾದಿ ಮುಸ್ಲಿಮರನ್ನು ಮಾತ್ರ ಬಿಜೆಪಿಗೆ ಸೇರಿಸಿಕೊಳ್ತೇವೆ: ಈಶ್ವರಪ್ಪ
ಸಣ್ಣಪುಟ್ಟ ವಿಷಯಕ್ಕೆ ಉಚ್ಚಾಟಿಸುವ, ಚುನಾವಣೆ ಬಂದಾಗ ಹುಡುಕಿ ಕರೆತರುವ ಸಂಪ್ರದಾಯಕ್ಕೆ ಬೇಸತ್ತ ಯುವಪ ಸ್ಥಳೀಯವಾಗಿ ನಮ್ಮ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಅದನ್ನೇ ಒಂದು ಸಮಸ್ಯೆ ಮಾಡಿಕೊಂಡು ಪಕ್ಷಾಂತರ ಮಾಡುವುದೇ ಪರಿಹಾರವಲ್ಲ. ಏನಾದರೂ ಸಮಸ್ಯೆಗಳಿದ್ದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದು. ಇರುವ ಪಕ್ಷದಲ್ಲಿಯೇ ಮುಂದುವರೆದರೆ ಅವರಿಗೂ ಭವಿಷ್ಯ ಇರುತ್ತದೆ. ಎಲ್ಲರೂ ಒಟ್ಟಾಗಿ ಇರುವುದರಿಂದ ಪಕ್ಷಕ್ಕೂ ಒಂದು ಶಕ್ತಿ ಬರುತ್ತದೆ. ದುಡುಕಿನ ನಿರ್ಧಾರದಿಂದ ಅವರ ಭವಿಷ್ಯಕ್ಕೆ ಹಾಗೂ ಅದರಿಂದ ಪಕ್ಷಕ್ಕೂ ನಷ್ಟ ಉಂಟಾಗುತ್ತದೆ. ಪ್ರತಿಯೊಬ್ಬ ಕಾರ್ಯಕರ್ತನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಪಕ್ಷದ ಜವಾಬ್ದಾರಿಯೂ ಹೌದು. ಈ ವಿಷಯವಾಗಿ ಸ್ವತಃ ನಾನೇ ಮುತುವರ್ಜಿ ವಹಿಸಿ ಸ್ಥಳೀಯ ಮುಖಂಡರ ವಿಶ್ವಾಸ ತೆಗೆದುಕೊಂಡು ಪಕ್ಷ ತೊರೆಯುತ್ತಿರುವ ಕಾರ್ಯಕರ್ತರೊಂದಿಗೆ ಚರ್ಚಿಸಿ ಸರಿಪಡಿಸುವೆ ಅಂತ ಬಾಗಲಕೋಟೆ(Bagalkot) ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದ್ದಾರೆ.
ಜೆಡಿಎಸ್ಗೆ ಸಂಗಪ್ಪ ಕದಂಗಲ್ ರಾಜೀನಾಮೆ
ಬೀಳಗಿ: ಕಳೆದ ಭಾರಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನಿಂದ ಬೀಳಗಿ ಮತಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸಂಗಪ್ಪ ಕದಂಗಲ್ ಅವರು ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಗಪ್ಪ ಕದಂಗಲ್ ಅವರು, ಕಳೆದ ಬಾರಿ ವಿಧಾನಸಭೆಯಲ್ಲಿ ಬೀಳಗಿ ಮತಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪಕ್ಷ ಸಂಘಟನೆಗಾಗಿ ಕೆಲಸ ಮಾಡಿದೆ. ನನ್ನ ಸೋಲಿಗೆ ಪಕ್ಷ ತೆಗೆದುಕೊಂಡ ಕೆಲವೊಂದು ತಪ್ಪು ತಿರ್ಮಾನಗಳಿಂದ ಸೋಲು ಅನುಭವಿಸಬೇಕಾಯಿತು. ಆದರೂ ಸಹಿತ ಪಕ್ಷದಲ್ಲಿ ನಿರಂತರವಾಗಿ ಇದ್ದೆ. ಇಂದಿನ ದಿನಮಾನಗಳ ಲ್ಲಿ ಜೆಡಿಎಸ್ ಪಕ್ಷ ಉತ್ತರ ಕರ್ನಾಟಕದಲ್ಲಿ(North Karnataka) ಪ್ರಬಲ ಸಂಘಟನೆ ಮಾಡುವಲ್ಲಿ ವಿಫಲವಾಗಿದೆ. ಅಲ್ಲದೆ ಪಕ್ಷ ಸಂಘಟನೆಗೆ ಬೇಕಿರುವ ಕೆಲಸಗಳು ನಡೆಯುತ್ತಿಲ್ಲ. ಅದಕ್ಕಾಗಿ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷರಾದ ಹಣಮಂತ ಮಾವಿನಮರದ ಕೇವಲ ತಮ್ಮ ಮತಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಲ್ಲಿ ಪಕ್ಷದ ಯಾವ ಕೆಲಸಗಳು ನಡೆಯುತ್ತಿಲ್ಲ. ಅದಕ್ಕಾಗಿ ನಮಗೆ ಪಕ್ಷ ಬಿಡುವ ಅನಿವಾರ್ಯತೆಯಾಗಿದ್ದು ರಾಜ್ಯಾಧ್ಯಕ್ಷರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಸಲ್ಲಿಕೆ ಮಾಡುತ್ತೇನೆ ಎಂದರು. ಬರುವ ದಿನಮಾನಗಳಲ್ಲಿ ಯಾವ ಪಕ್ಷದಲ್ಲಿದ್ದು ಕೆಲಸ ಮಾಡಬೇಕು? ಸ್ವತಂತ್ರವಾಗಿ ರಾಜಕಾರಣ ಮಾಡಬೇಕೇ ಎನ್ನುವುದನ್ನು ನಮ್ಮ ಕಾರ್ಯಕರ್ತರು ಹಿರಿಯರೊಂದಿಗೆ ಚರ್ಚೆ ಮಾಡಿ ತಿಳಿಸುತ್ತೇವೆ ಎಂದರು.
