* ಬಿ.ವೈ ವಿಜಯೇಂದ್ರ ಹೈಕಮಾಂಡ್ ಭೇಟಿಗೆ  ಕಾರಣ ಕೊಟ್ಟ ಯತ್ನಾಳ್* ವಿಜಯೇಂದ್ರಗೆ ಹೈಕಮಾಂಡ್ ಹೇಳಿದ್ದೇನು..?* ಯಡಿಯೂರಪ್ಪಗೆ ಮಹತ್ವದ ಸಲಹೆ ಕೊಟ್ಟ ಬಿಜೆಪಿ ಶಾಸಕ ಯತ್ನಾಳ್

ವಿಜಯಪುರ, (ಜೂನ್.05): ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದಿಲ್ಲಿಗೆ ಹೋಗಿ ಹೈಕಮಾಂಡ್ ನಾಯಕನ್ನು ಭೇಟಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಇತ್ತ ಇದಕ್ಕೆ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ಭೇಟಿಗೆ ಇಡಿ ತನಿಖೆ ಕಾರಣ. ತಮ್ಮ ವಿರುದ್ಧ ಮಾರಿಷಸ್ ಹಣಕಾಸಿನ ಹಗರಣದ ಕುರಿತು ಮೂರು ದಿನಗಳಿಂದ ಇಡಿ ನಡೆಸುತ್ತಿರುವ ತನಿಖೆಯಿಂದ ರಕ್ಷಣೆ ಪಡೆಯಲು ವಿಜಯೇಂದ್ರ ದೆಹಲಿ ನಾಯಕರ ದುಂಬಾಲು ಬಿದ್ದಿದ್ದಾರೆ ಎಂದು ಹೇಳಿದರು.

ನಡ್ಡಾ ಭೇಟಿಯಾದ ವಿಜಯೇಂದ್ರ: ರಾಜ್ಯ ಬಿಜೆಪಿಯಲ್ಲಿ ರಂಗೇರಿದ ರಾಜಕೀಯ 

ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ಕೋವಿಡ್ ನಿರ್ವಹಣೆ ಬಗ್ಗೆ ಹೈಕಮಾಂಡ್ ಶಹಬ್ಬಾಶ್ ಪಡೆಯಲು ದೆಹಲಿಗೆ ಹೋಗಿಲ್ಲ. ಬದಲಾಗಿ ಮಾರಿಷಸ್ ನಲ್ಲಿರುವ ಸಾವಿರಾರು ಕೋಟಿ ರೂ. ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಇಡಿ ತ‌ನಿಖೆ ನಡೆಸುತ್ತಿದೆ. ಮೂರು ದಿನಗಳಿಂದ ಇಡಿ ತನಿಖೆ ನಡೆಸುತ್ತಿದೆ‌. ಪಿಐ ಮೋಟರ್ಸ್ ಎನ್ನುವ ಕಂಪನಿಗೆ ಹಣ ಹೇಗೆ ವರ್ಗಾವಣೆ ಆಯಿತು ಎಂದು ತನಿಖೆ ನಡೆಯುತ್ತಿದೆ. ಈ ಕಾರಣಕ್ಕಾಗಿ ವಿಜಯೆಂದ್ರ ದೆಹಲಿಗೆ ಹೋಗಿದ್ದರು. ಆದರೆ ಮಾಧ್ಯಮಗಳು ಇಂಥ ಸತ್ಯದ ವರದಿಗಳ‌ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಕುಟುಕಿದರು.

ದೆಹಲಿಯಲ್ಲಿ ಜೆಪಿ ನಡ್ಡಾ ಜೊತೆ ವಿಜಯೇಂದ್ರ ಹತ್ತು ನಿಮಿಷ ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ ಎಂದು ನನಗೆ ಮಾಹಿತಿ ಬಂದಿದೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದರು.

ದಿಢೀರ್ ದಿಲ್ಲಿಗೆ ಹಾರಿದ ವಿಜಯೇಂದ್ರ: ಕಾರಣ ಇದೇ ಆಗಿರಬಹುದಾ..?

ಸಿಎಂ ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ಯಾಕೆ ಕರೆಯುತ್ತಿಲ್ಲ. ಶಾಸಕಾಂಗ ಪಕ್ಷದ ನಾಯಕರಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಮುಖ್ಯಮಂತ್ರಿಗಳಿಗೆ ಯಾಕೆ ಹೆದರಿಕೆ ಎಂದು ಪ್ರಶ್ನಿಸಿದ‌ ಯತ್ನಾಳ್, ಯಡಿಯೂರಪ್ಪ ತಾವು ಇರಿಸಿಕೊಂಡಿರುವ ಮೂವರು ಹೊಗಳು ಬಟ್ಟರಿಂದ ಭವಿಷ್ಯದಲ್ಲಿ ಭಾರಿ ದೊಡ್ಡ ಅಪಾಯವಿದೆ. ಅವಮಾನಕರ ರೀತಿಯಲ್ಲಿ ರಾಜಕೀಯ ನಿವೃತ್ತಿ ಆಗುವ ಸ್ಥಿತಿ ಎದುರಾಗಲಿದೆ‌ ಎಂದು ಎಚ್ವರಿಸಿದರು.

ಮುಂದೆ ನಡೆಯುವ ಅನಾಹುತಗಳಿಗೆ ಕಾರಣವಾಗದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು.