ಸಂಬಂಧವೊಂದು ಹರಿದುಂಬಿಸಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ| UPSC ಟಾಪರ್ ಗೆಲುವಿನ ಶ್ರೇಯ ಅರ್ಪಿಸಿದ್ದು ಯಾರಿಗೆ ಗೊತ್ತಾ?| ಕನಿಷ್ಕ ಕಟಾರಿಯಾ ಯಶಸ್ಸಿನ ಹಿಂದಿದ್ದಾರೆ ಆದರ್ಶ ಗೆಳತಿ| ಯಶಸ್ಸನ್ನು ಆಪ್ತ ಗೆಳತಿಗೆ ಅರ್ಪಿಸಿದ UPSC ಟಾಪರ್| ಪೋಷಕರಿಗೂ ಗೆಲುವಿನ ಶ್ರೇಯ ಸಲ್ಲಿಸಿದ ಕನಿಷ್ಕ ಕಟಾರಿಯಾ|
ಮುಂಬೈ(ಏ.06): UPSC ಪರೀಕ್ಷೆ ಪಾಸಾಗೋದು ಅಷ್ಟು ಸುಲಭದ ಮಾತಲ್ಲ ಬಿಡಿ. ಭಾರತದ ಅತ್ಯಂತ ಪ್ರತಿಭಾವಂತ ಮೆದುಳುಗಳ ಹುಟುಕಾಟದಲ್ಲಿ ನಿರತವಾಗಿರುವ UPSC, ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.
ಅದರಂತೆ UPSC ಪರೀಕ್ಷೆ ಎಂಬ ಚಾಲೆಂಜ್ ಸ್ವೀಕರಿಸುವ ಅಭ್ಯರ್ಥಿ, ಹಗಲು ರಾತ್ರಿಗಳನ್ನು ಒಂದು ಮಾಡಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ.
ಅದರಲ್ಲೂ UPSC ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನ ಗಳಿಸುವ ಅಭ್ಯರ್ಥಿಯ ಪರಿಶ್ರಮಕ್ಕೆ ಸರಿಸಮಾನ ಯಾವುದಿದೆ ಹೇಳಿ?. ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನಗಳಿಸಿರುವ ಕನಿಷ್ಕ ಕಟಾರಿಯಾ, ಇಡೀ ದೇಶದ ಗಮನಸೆಳೆದಿದ್ದಾರೆ. ಭವಿಷ್ಯದ ಲೋಕಸೇವಾ ಅಭ್ಯರ್ಥಿಗಳ ಆದರ್ಶವಾಗಿ ಹೊರಹೊಮ್ಮಿದ್ದಾರೆ.
ಇನ್ನು ತಮ್ಮ ಯಶಸ್ಸಿನ ಶ್ರೇಯಸ್ಸನ್ನು ತಂದೆ-ತಾಯಿ ಮತ್ತು ಸಹೋದರಿಗೆ ಅರ್ಪಿಸಿರುವ ಕನಿಷ್ಕ, ಮತ್ತೊಂದು ವಿಶೇಷ ಹೆಸರನ್ನು ಉಲ್ಲೇಖಿಸಿದ್ದಾರೆ.
ತಮ್ಮ ಯಶಸ್ಸಿಗೆ ಬೆಂಬಲವಾಗಿ ನಿಂತ ತಮ್ಮ ಗೆಳತಿಗೂ ಕನಿಷ್ಕ ಶ್ರೇಯ ನೀಡಿದ್ದಾರೆ. ಫಲಿತಾಂಶ ಹೊರ ಬರುತ್ತಿದ್ದಂತೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಕನಿಷ್ಕ, ಈ ಕಠಿಣ ಹಾದಿಯಲ್ಲಿ ತಮಗೆ ಸದಾ ಬೆಂಬಲವಾಗಿ ನಿಂತ ತಮ್ಮ ಆಪ್ತ ಗೆಳತಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸಂಬಂಧ ಅದೇನೆ ಇರಲಿ, ಇರೋ ಸಂಬಂಧವನ್ನೂ ನೆಟ್ಟಗಿಟ್ಟುಕೊಳ್ಳದೇ ಕ್ಷುಲ್ಲಕ ಕಾರಣಕ್ಕೆ ನಿತ್ಯವೂ ಕಿತ್ತಾಡುವ, ಶಾಪಿಂಗ್, ಸಿನಿಮಾ, ಹೊಟೇಲ್ ಅಂತಾ ನಿತ್ಯವೂ ಬಡಿದಾಡುವ ಸಂಬಂಧಕ್ಕಿಂತ ಈ ಸಂಬಂಧ ಶ್ರೇಷ್ಠವಾದುದು.
ಆಪ್ತನೋರ್ವ ಕಠಿಣ ಪರಿಶ್ರಮದ ಹಾದಿಯಲ್ಲಿದ್ದಾಗ ಆತನ ಬೆಂಬಲಕ್ಕೆ ನಿಂತು ಹುರಿದುಂಬಿಸಿದ ಕನಿಷ್ಕ ಅವರ ಗೆಳತಿ ನಿಜಕ್ಕೂ ಅಭಿನಂದನಾರ್ಹರು.
