ಕೊರೋನಾ ನಡುವೆ ದಾಖಲೆ ರಸಗೊಬ್ಬರ ಪೂರೈಕೆ: ಸದಾನಂದ ಗೌಡ
ಬಿತ್ತನೆ ಪ್ರದೇಶವೃದ್ಧಿಸಿ ರಸಗೊಬ್ಬರ ಬೇಡಿಕೆ ಹೆಚ್ಚಾದಾಗ ಅದಕ್ಕೆ ತಕ್ಕಂತೆ ಪೂರೈಕೆ ವ್ಯವಸ್ಥೆ ಮಾಡಿ ಎಲ್ಲೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಕೃಷಿವಲಯ ಶೇ. 3.7ರಷ್ಟು ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದ ಸಚಿವ ಡಿ.ವಿ.ಸದಾನಂದ ಗೌಡ
ನವದೆಹಲಿ(ಫೆ.13): ಕೊರೋನಾ ಸಂಕಷ್ಟದ ನಡುವೆಯೂ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರಸಗೊಬ್ಬರ ಪೂರೈಕೆ ಶೇ.25ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ರಾಜ್ಯ ಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ವೇಳೆ ಉತ್ತರಪ್ರದೇಶದ ಜಿ.ಬಿ.ಎಲ್. ನರಸಿಂಹರಾವ್ ಅವರು ಕೇಳಿದ ಪೂರಕ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡ, ಕೊರೋನಾ ಅವಧಿಯಲ್ಲಿ ರಸಗೊಬ್ಬರ ಉತ್ಪಾದನೆ ಮತ್ತು ಸಾಗಣೆ ಬಹುದೊಡ್ಡ ಸವಾಲಾಗಿತ್ತು. ಆದರೆ ಇವನ್ನೆಲ್ಲ ಸಮರ್ಪಕವಾಗಿ ನಿಭಾಯಿಸಲಾಯಿತು. ಬಿತ್ತನೆ ಪ್ರದೇಶವೃದ್ಧಿಸಿ ರಸಗೊಬ್ಬರ ಬೇಡಿಕೆ ಹೆಚ್ಚಾದಾಗ ಅದಕ್ಕೆ ತಕ್ಕಂತೆ ಪೂರೈಕೆ ವ್ಯವಸ್ಥೆ ಮಾಡಿ ಎಲ್ಲೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಕೃಷಿವಲಯ ಶೇ. 3.7ರಷ್ಟು ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು ಎಂದು ಸಚಿವರು ಮಾಹಿತಿ ನೀಡಿದರು.
ಅರ್ಹತೆ ಇಲ್ಲದವರು ಮೀಸಲಾತಿ ಕೇಳೋದು ರಾಜಕೀಯ ನಾಟಕ: ಸದಾನಂದ ಗೌಡ
ಉಪ ರಾಷ್ಟ್ರಪತಿ ಮೆಚ್ಚುಗೆ:
ಸಭಾಪತಿ ಪೀಠದಲ್ಲಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೊರೋನಾದ ನಡುವೆಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡದ್ದಕ್ಕೆ ಸಚಿವ ಡಿ.ವಿ. ಸದಾನಂದಗೌಡರನ್ನು ಅಭಿನಂದಿಸಿದರು.