ಸರ್ಕಾರ ಪತನ: ಅತೃಪ್ತರು ಫುಲ್ ಖುಶ್, ಕುತೂಹಲ ಕೆರಳಿಸಿದೆ ಮುಂದಿನ ನಡೆ
ಶೀಘ್ರದಲ್ಲೇ ಅತೃಪ್ತರ ಮುಂದಿನ ನಡೆ ಪ್ರಕಟ; ಮುಂಬೈಯಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರು
ಬೆಂಗಳೂರು (ಜು.23): ಸದನದಲ್ಲಿ ವಿಶ್ವಾಸ ಮತ ಗಳಿಸುವಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಫಲವಾಗಿದೆ. ಎಚ್ಡಿಕೆ ವಿಶ್ವಾಸ ಮತ ಪ್ರಸ್ತಾಪದ ಪರ 99 ಮತ್ತು ವಿರುದ್ಧ 105 ಮತಗಳು ಬಿದ್ದಿವೆ.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಭೇಟಿಗಾಗಿ ಸಮಯವನ್ನು ಕೋರಿರುವ ಎಚ್.ಡಿ. ಕುಮಾರಸ್ವಾಮಿ ಶೀಘ್ರದಲ್ಲೇ ರಾಜೀನಾಮೆ ಸಲ್ಲಿಸಲಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಬುಧವಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದು, ಸರ್ಕಾರ ರಚಿಸುವ ಹಕ್ಕನ್ನು ಮಂಡಿಸಲಿದ್ದಾರೆ.
ಇದನ್ನೂ ಓದಿ | ವಿಶ್ವಾಸ ಮತ ಕಳೆದುಕೊಂಡ HDK , 6 ಮತಗಳಿಂದ ದೋಸ್ತಿ ಸರ್ಕಾರ ಪತನ
ಅತ್ತ, ಸರ್ಕಾರ ಪತನಕ್ಕೆ ಕಾರಣವಾಗಿರುವ ಬಂಡಾಯ ಶಾಸಕರು ಮುಂಬೈಯಲ್ಲಿ ಬೀಡು ಬಿಟ್ಟಿದ್ದು, ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಹಿಂತಿರುಗುವ ನಿರೀಕ್ಷೆಯಿದೆ.
ಬಂಡಾಯ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರವಾಗದಿರುವ ಬೆನ್ನಲ್ಲಿ, ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ರಾಜೀನಾಮೆ ಅಂಗೀಕಾರವಾದ ಬಳಿಕ ಬಿಜೆಪಿ ಸೇರುವ ಬಗ್ಗೆ ಅಥವಾ ಮುಂದಿನ ನಡೆಯನ್ನು ಪ್ರಕಟಿಸಬಹುದು.