ಇಂಥ ಮಳೆಯನ್ನು ನೋಡೇ ಇಲ್ಲ: ಸಿಎಂ ಯಡಿಯೂರಪ್ಪ
ಇಂಥ ಮಳೆಯನ್ನು ನೋಡೇ ಇಲ್ಲ: ಬಿಎಸ್ವೈ| ಬೆಳಗಾವಿಯಲ್ಲೇ 106 ಗ್ರಾಮಗಳು ಜಲಾವೃತ| 22 ಸಾವಿರದಷ್ಟು ಜನರ ಸ್ಥಳಾಂತರ| ಮೃತರಿಗೆ 5 ಲಕ್ಷ ಪರಿಹಾರ ಘೋಷಣೆ| ಇಂದು ನಾಲ್ಕು ಎನ್ಡಿಆರ್ಎಫ್ ಮತ್ತು ಎರಡು ಸೇನಾ ತುಕಡಿಗಳು ಆಗಮಿಸಲಿವೆ| ಬೆಳಗಾವಿಯಲ್ಲಿ ಸಂತ್ರಸ್ತರ ಕೇಂದ್ರಕ್ಕೆ ಸಿಎಂ
ಬೆಳಗಾವಿ[ಆ.08]: ಕಳೆದ 40-50 ವರ್ಷಗಳಲ್ಲಿ ಇಂತಹ ಭಾರೀ ಪ್ರಮಾಣದ ಮಳೆಯನ್ನು ನಾನು ನೋಡಿಲ್ಲ. ಪ್ರವಾಹದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಜನ, ಜಾನುವಾರುಗಳ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 106 ಗ್ರಾಮಗಳು ಜಲಾವೃತಗೊಂಡಿವೆ. 22682 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈವರೆಗೆ ಆರು ಜನ ಮೃತಪಟ್ಟಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಮೃತರಾದವರಿಗೆ ತಕ್ಷಣವೇ .5 ಲಕ್ಷ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪ್ರವಾಹಪೀಡಿತ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಲು ದೆಹಲಿಯಿಂದ ಬೆಂಗಳೂರಿಗೆ ಬಂದು ನೇರವಾಗಿ ಬೆಳಗಾವಿಗೆ ಆಗಮಿಸಿದ್ದೇನೆ. ಎರಡು ದಿನಗಳ ಕಾಲ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಅಗತ್ಯ ಬಿದ್ದರೆ ಮತ್ತೊಂದು ದಿನ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಮಳೆಯಬ್ಬರಕ್ಕೆ ತತ್ತರಿಸಿದ ಕರ್ನಾಟಕ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ದ್ರ ಗೃಹ ಸಚಿವ ಅಮಿತ ಶಾ ಅವರ ಸೂಚನೆ ಮೇರೆಗೆ ನಾನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನ, ಜಾನುವಾರುಗಳ ಸಂರಕ್ಷಣೆಗೆ ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ಮತ್ತಿತರ ತಂಡಗಳು ಕಾರ್ಯಪ್ರವೃತ್ತವಾಗಿವೆ. ಇದಕ್ಕಾಗಿ ಕೇಂದ್ರ ಸರ್ಕಾರದ ನೆರವನ್ನು ಕೂಡ ಪಡೆಯಲಾಗುತ್ತಿದೆ. ಹೆಚ್ಚಿನ ರಕ್ಷಣಾ ತಂಡಗಳನ್ನು ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಕ್ಷಣಾ ಕಾರ್ಯಕ್ಕೆ ಎರಡು ಹೆಲಿಕಾಪ್ಟರ್ಗಳನ್ನು ಕಾಯ್ದಿರಿಸಲಾಗಿದೆ. ಗುರುವಾರ ಮತ್ತೆ ನಾಲ್ಕು ಎನ್ಡಿಆರ್ಎಫ್ ಮತ್ತು ಎರಡು ಸೇನಾ ತುಕಡಿಗಳು ಆಗಮಿಸಲಿವೆ ಎಂದು ಹೇಳಿದರು.
ಲಠ್ಠೆ ಕುಟುಂಬಕ್ಕೆ 50 ಲಕ್ಷ ಪರಿಹಾರ:
ಕರ್ತವ್ಯದ್ದ ಮೇಲಿದ್ದ ವೇಳೆ ವಾಹನ ಅಪಘಾತದಲ್ಲಿ ಮೃತಪಟ್ಟಿರುವ ಕಿತ್ತೂರು ಪೊಲೀಸ್ ಇನ್ಸ್ಪೆಕ್ಟರ್ ಈರಣ್ಣಾ ಲಠ್ಠೆ ಅವರ ಕುಟುಂಬಕ್ಕೆ ನಮ್ಮ ಇಲಾಖೆ ವತಿಯಿಂದ .30 ಲಕ್ಷ ರು. ಮತ್ತು ವಿಪತ್ತು ಪರಿಹಾರ ನಿಧಿಯಿಂದ .20 ಲಕ್ಷ ಹೀಗೆ ಒಟ್ಟು .50 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು. ಲಠ್ಠೆ ಅವರು ಸಾವಿಗೀಡಾಗಿರುವುದು ದುಃಖದ ಸಂಗತಿಯಾಗಿದೆ. ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿಯನ್ನು ಕೂಡ ಒದಗಿಸಲಾಗುವುದು ಎಂದು ಹೇಳಿದರು.
ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದ ಬಳಿ ಬಳ್ಳಾರಿ ನಾಲೆಯ ಪ್ರವಾಹದಲ್ಲಿ ವೃದ್ಧ ದಂಪತಿ ಸಿಕ್ಕಿಹಾಕಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅವರನ್ನು ರಕ್ಷಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಸತತವಾಗಿ ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅಲ್ಲಿ ಪ್ರವಾಹದ ತೀವ್ರ ರಭಸವಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಪ್ರವಾಹ ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.