ಆನೇಕಲ್‌ನ ಮಹಂತ ಲಿಂಗಾಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಮುತ್ತರಾಯಪ್ಪ ಮತ್ತು ಮುನಿರಾಜು ಕುಟುಂಬಗಳು ಹೊಲದಲ್ಲೇ ಪರಸ್ಪರ ಬಡಿದಾಡಿಕೊಂಡಿದ್ದು, ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಆನೇಕಲ್: ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉದ್ಭವಿಸಿದ ವಿವಾದ ಗಂಭೀರ ತಿರುವು ಪಡೆದು ಹೊಲದಲ್ಲೇ ಪರಸ್ಪರ ಮಾರಾಮಾರಿಗೆ ಕಾರಣವಾದ ಘಟನೆ ಆನೇಕಲ್ ತಾಲ್ಲೂಕಿನ ಮಹಂತ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಗ್ರಾಮದ ಸರ್ವೇ ನಂಬರ್ 48ಕ್ಕೆ ಸೇರಿದ ಜಮೀನಿನ ಮಾಲೀಕತ್ವದ ವಿಚಾರವಾಗಿ ಮುತ್ತರಾಯಪ್ಪ ಹಾಗೂ ಮುನಿರಾಜು ಕುಟುಂಬಗಳ ನಡುವೆ ಕೆಲಕಾಲದಿಂದಲೂ ತಕರಾರು ನಡೆಯುತ್ತಿತ್ತು. ಮುತ್ತರಾಯಪ್ಪ ಕುಟುಂಬದವರು ಈ ಜಮೀನು ತಮ್ಮ ಪೂರ್ವಜರಿಂದ ಬಂದ ಆಸ್ತಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದು, ಮುನಿರಾಜು ಎಂಬುವವರು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಜಮೀನಿನ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎರಡೂ ಕುಟುಂಬಗಳ ಸದಸ್ಯರು ಜಮೀನಿನ ಬಳಿ ಸೇರಿಕೊಂಡು ಗಲಾಟೆ

ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಎರಡೂ ಕುಟುಂಬಗಳ ಸದಸ್ಯರು ಜಮೀನಿನ ಬಳಿ ಸೇರಿಕೊಂಡಿದ್ದು, ಮಾತಿನ ಚಕಮಕಿಯಿಂದ ಆರಂಭವಾದ ವಿವಾದ ಕ್ಷಣಾರ್ಧದಲ್ಲೇ ತೀವ್ರಗೊಂಡು ಪರಸ್ಪರ ಬಡಿದಾಟಕ್ಕೆ ತಿರುಗಿದೆ. ಎರಡು ಗುಂಪಿನವರು ಹೊಲದಲ್ಲೇ ಪರಸ್ಪರ ಕೈಕೈ ಮಿಲಾಯಿಸಿ ಜಗಳ ಮಾಡಿಕೊಂಡಿದ್ದಾರೆ .

ಇದೇ ವೇಳೆ, ಜಮೀನಿನಲ್ಲಿದ್ದ ತಮ್ಮ ಹಿರಿಯರ ಸಮಾಧಿಯನ್ನು ಧ್ವಂಸ ಮಾಡಿ ಅಕ್ರಮವಾಗಿ ಜಮೀನಿಗೆ ಒಳನುಗ್ಗಿದ್ದಾರೆ ಎಂದು ಮುತ್ತರಾಯಪ್ಪ ಕುಟುಂಬದವರು ಮುನಿರಾಜು ಕುಟುಂಬದವರ ವಿರುದ್ಧ ಆರೋಪ ಮಾಡಿದ್ದಾರೆ. ಈ ಘಟನೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಯ್ತು.

ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ

ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಕ್ರಮ ಕೈಗೊಂಡಿದ್ದು, ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಒಟ್ಟಾರೆ, ಜಮೀನಿನ ವಿವಾದದಿಂದ ಆರಂಭವಾದ ಈ ಘಟನೆ ಎರಡು ಕುಟುಂಬಗಳ ನಡುವೆ ತೀವ್ರ ಘರ್ಷಣೆಗೆ ಕಾರಣವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.