ಪೊಗರು ಚಿತ್ರದ ವಿರುದ್ಧ ಇದೀಗ ಗಂಭೀರ ಆರೋಪ ಮಾಡಲಾಗಿದೆ. ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ಬೆಂಗಳೂರು (ಫೆ.22): ಬಾಕ್ಸಾಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡುತ್ತಿರುವ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಸಚ್ಚಿದಾನಂದ ಮೂರ್ತಿ, ‘ಆಕ್ಷೇಪಾರ್ಹ ಮಾತುಗಳನ್ನು ತೆಗೆಯದೇ ಹೋದಲ್ಲಿ ಮಂಗಳವಾರ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುತ್ತೇವೆ. ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಜಿಎಫ್‌ ನಂತರ ತೆಲುಗು, ತಮಿಳಿನಲ್ಲಿ ಹಿಟ್ ಆಗಿದ್ದು ಪೊಗರು ಚಿತ್ರನೇ! ...

‘ಯಾವುದೇ ಜಾತಿ ಧರ್ಮವನ್ನು ಅವಹೇಳನಕಾರಿಯಾಗಿ ತೋರಿಸುವುದು ಸರಿಯಾದ ಕ್ರಮ ಅಲ್ಲ. ಅದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದಂತಾಗುತ್ತದೆ. ಚಿತ್ರದಲ್ಲಿರುವ ಈ ದೃಶ್ಯದಿಂದ ರಾಜ್ಯಾದ್ಯಂತ ಇರುವ ಅರ್ಚಕರು, ಪುರೋಹಿತರು ಬೇಸರಗೊಂಡಿದ್ದಾರೆ. ಸನಾತನ ಧರ್ಮದ ರಕ್ಷಕರಾದ ಇವರನ್ನು ಅವಮಾನಕರವಾಗಿ ಚಿತ್ರೀಕರಿಸಿರುವುದು ಸರಿಯಲ್ಲ. ತಕ್ಷಣವೇ ಆ ದೃಶ್ಯ ತೆಗೆದುಹಾಕಬೇಕು. ಚಿತ್ರತಂಡ ಕ್ಷಮೆ ಕೋರಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೂ ಬ್ರಾಹ್ಮಣರ ಕುರಿತಾಗಿ ಆಡಿದ್ದ ಅವಹೇಳನಕಾರಿ ಮಾತಿಗೆ ಕ್ಷಮೆ ಕೋರಿದ್ದರು. ಉನ್ನತ ಸ್ಥಾನದಲ್ಲಿರುವ ನೀವು ಈ ರೀತಿ ಮಾಡುವುದು ಶೋಭೆಯಲ್ಲ’ ಎಂದೂ ಅವರು ಹೇಳಿದ್ದಾರೆ.