ಪ್ರಪಂಚಾದ್ಯಂತ ಸಿನಿಪ್ರಿಯರ ಮನಸೂರೆಗೊಂಡ ಕನ್ನಡದ ಕಾಂತಾರ ಚಿತ್ರದ ಎರಡನೆಯ ಭಾಗ ಯಾವಾಗ ಬರುತ್ತದೆ ಎಂದು ಜನರು ಕಾದುಕುಳಿತಿರುವ ನಡುವೆಯೇ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ ರಿಷಬ್​ ಶೆಟ್ಟಿ  

ಕಾಂತಾರ... (Kantara) ಈ ಚಿತ್ರದ ಹೆಸರು ಕೇಳಿದರೆ ಹಲವರಿಗೆ ಚಳಿಜ್ವರ ಬರುವುದೂ ಉಂಟು. ಅಂಥದ್ದೊಂದು ಅದ್ಭುತ ಸೃಷ್ಟಿಸಿರುವ ಚಿತ್ರವಿದು. ಹಿಂದೆಂದೂ ಕೇಳಿರದ ರೀತಿಯಲ್ಲಿ ಜನಮೆಚ್ಚುಗೆ ಗಳಿಸಿ ಪ್ರತಿಯೊಬ್ಬರ ಬಾಯಲ್ಲೂ ಕಾಂತಾರ, ಕಾಂತಾರ ಎನ್ನುವಷ್ಟರ ಮಟ್ಟಿಗೆ ಸಿನಿ ಜಗತ್ತನ್ನು ಆಳಿರುವ, ಈಗಲೂ ಆಳುತ್ತಿರುವ ಚಿತ್ರವಿದು. ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಬ್ಲಾಕ್​ಬಸ್ಟರ್​ (Blockbuster) ಸಿನಿಮಾ ಎನಿಸಿಕೊಂಡಿರುವ ಕಾಂತಾರದ ಬಗ್ಗೆ ಅಸೂಯೆ ಪಟ್ಟವರೂ ಅದೆಷ್ಟೋ ಮಂದಿ. ಈ ಅಸೂಯೆಯಿಂದಲೇ ಈ ಚಿತ್ರ ಎಷ್ಟರಮಟ್ಟಿಗೆ ಸಕ್ಸಸ್​ ಆಗುತ್ತಿದೆ ಎನ್ನುವುದಕ್ಕೆ ಉದಾಹರಣೆ. ಒಟ್ಟಿನಲ್ಲಿ ನಟ/ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಕಾಂಬಿನೆಷನ್‌ನಲ್ಲಿ ಮೂಡಿಬಂದ 'ಕಾಂತಾರ'ದ ಮಹಿಮೆಯೇ ಅಂಥದ್ದು. ನೂರಾರು ಕೋಟಿ ಹಣ ಸುರಿದು ವಾಸ್ತವಕ್ಕೆ ಹತ್ತಿರವಲ್ಲದ ಚಿತ್ರಗಳೇ ಭಾರಿ ಸಕ್ಸಸ್​ ಕಾಣುತ್ತಿರುವ ಈ ದಿನಗಳಲ್ಲಿ ಚಿಕ್ಕ ಬಜೆಟ್​ನಲ್ಲಿಯೂ ಜನರ ಮನಮುಟ್ಟಬಹುದು, ಪ್ರಪಂಚದಾದ್ಯಂತ ಸಕ್ಸಸ್​ (success) ಕಾಣಬಹುದು ಎಂಬುದನ್ನು ಈ ಚಿತ್ರ ತೋರಿಸಿಕೊಟ್ಟಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಗಳಿಕೆ ಮಾಡಿದ ಕಾಂತಾರದ ಪಾರ್ಟ್​-2 ಯಾವಾಗ ಬರುತ್ತದೆ ಎಂಬ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

Add Asianetnews Kannada as a Preferred SourcegooglePreferred

ಈ ಹಿಂದೆ ಕೂಡ ಕಾಂತಾರ-2 ಭಾರಿ ಸದ್ದು ಮಾಡಿತ್ತು. ರಿಷಬ್​ ಶೆಟ್ಟಿ (Rishab Shetty) ಅವರು ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೇ ಕೇಳಿದವರು, ಕೇಳುತ್ತಿರುವವರೇ ಎಲ್ಲ. ಇತ್ತೀಚಿಗೆ ಸಿಕ್ಕಿದ್ದ ಮಾಹಿತಿ ಪ್ರಕಾರ, 'ಕಾಂತಾರ 2' ಸಿನಿಮಾಗೆ ಸ್ಕ್ರಿಪ್ಟ್‌ ಬರೆಯುವ ಕೆಲಸ ಶುರುವಾಗಿದೆ ಎಂಬುದು. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕೂಡ ಚಿಕ್ಕದೊಂದು ಹಿಂಟ್​ ನೀಡಿದ್ದರು. ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು, 'ರಿಷಬ್ ಶೆಟ್ಟಿ ಅವರು ಈಗಾಗಲೇ ಕಾಂತಾರ 2ಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ತಮ್ಮ ಬರಹಗಾರರ ಟೀಮ್‌ ಜೊತೆಗೆ ಕರ್ನಾಟಕದ ಕರಾವಳಿ ಭಾಗದ ಕಾಡಿನಲ್ಲಿ ಸಂಶೋಧನೆ ಮಾಡುತ್ತಿದ್ದು, ಸ್ಕ್ರಿಪ್ಟ್ (script) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಚಿತ್ರೀಕರಣ ಮಳೆಗಾಲದಲ್ಲಿ ಆಗಬೇಕಿರುವ ಕಾರಣದಿಂದ ಜೂನ್ ತಿಂಗಳಿನಲ್ಲಿ ಶೂಟಿಂಗ್ ಆರಂಭಿಸುವ ಯೋಜನೆ ಇದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರರಸಿಕರು ಕಾಂತಾರ-2 ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

ಅದೇ ಇನ್ನೊಂದೆಡೆ, 'ಬ್ಯಾಚುಲರ್‌ ಪಾರ್ಟಿ' ಸಿನಿಮಾದಲ್ಲಿ ನಟಿಸಬೇಕಿದ್ದ ರಿಷಬ್​ ಶೆಟ್ಟಿ ಅವರು ಅದರಿಂದ ಹೊರಬಂದಿರುವಾಗಿ ವರದಿಯಾಗಿತ್ತು. ಅವರ ಜಾಗಕ್ಕೆ ಲೂಸ್ ಮಾದ ಯೋಗಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬೆಳವಣಿಗೆ ನೋಡಿದ್ದರೂ ರಿಷಬ್​ ಶೆಟ್ಟಿ ಅವರು ತಮ್ಮ ಎಲ್ಲ ಪ್ರಾಜೆಕ್ಟ್‌ಗಳನ್ನು (Project) ಬದಿಗಿರಿಸಿ, 'ಕಾಂತಾರ 2' ಬಗ್ಗೆ ಮಾತ್ರವೇ ಜಾಸ್ತಿ ಗಮನ ನೀಡುತ್ತಿದ್ದಾರೆ ಎನ್ನಲಾಗಿತ್ತು. ಈ ಸಿನಿಮಾದಲ್ಲಿ ‘ಕಾಂತಾರ’ ಸಿನಿಮಾದಲ್ಲಿ ಆರಂಭದಲ್ಲಿ ಬರುವ ಶಿವನ ತಂದೆಯ ಪಾತ್ರದ ಮೇಲೆ ಹೆಚ್ಚು ಕಥೆ ಇರಲಿದೆ. ಶಿವನ ತಂದೆ ಕೋಲ ಕಟ್ಟಿಕೊಂಡು ಕಾಡಿನೊಳಗೆ ಹೋಗಿ ಕಾಣೆಯಾಗುವುದು ಎಲ್ಲಿಗೆ ಎಂಬ ಬಗ್ಗೆ ಕಥೆ ಇರುತ್ತದೆ ಎಂದೂ ವಿಷಯ ಒಂದಿಷ್ಟು ಹೊರಬಂದಿತ್ತು.

ಆದರೆ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ (Pressmeet) ರಿಷಬ್​ ಶೆಟ್ಟಿ ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಕಾಂತಾರ ಸಿನಿಮಾದ 100 ದಿನದ ಸಂಭ್ರಮದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಎಲ್ಲರೂ ನಿಬ್ಬೆರಗಾಗುವ ಹೇಳಿಕೆಯೊಂದನ್ನು ರಿಷಬ್​ ಶೆಟ್ಟಿ ನೀಡಿದ್ದಾರೆ. ಅದೇನೆಂದರೆ, ಕಾಂತಾರ 2 ಯಾವಾಗ ಬರುತ್ತೆ ಎಂದು ಹೋದಲ್ಲಿ, ಬಂದಲ್ಲಿ ಜನ ಕೇಳುತ್ತಿದ್ದಾರೆ. ಸಿನಿಮಾ ನೋಡಲು ತುದಿ ಕಾಲಿಯಲ್ಲಿ ಕಾಯುತ್ತಿದ್ದಾರೆ. ಆದರೆ ಅಸಲಿಗೆ ಈಗ ಬರುವುದು ಕಾಂತಾರ-2 ಅಲ್ಲ ಬದಲಿಗೆ ಕಾಂತಾರ-1 ಎಂದಿದ್ದಾರೆ. ಅಂದರೆ ಈಗ ಬಿಡುಗಡೆಯಾಗಿ ಎಲ್ಲರೂ ನೋಡಿರುವ ಚಿತ್ರ ಕಾಂತಾರ-2 ಆಗಿದ್ದು, ಮುಂದೆ ಬಿಡುಗಡೆಯಾಗಲಿರುವುದು ಅದರ ಪಾರ್ಟ್​ 1 ಎಂದಿದ್ದಾರೆ! ಶೀಘ್ರದಲ್ಲೇ ಕಾಂತಾರ ಪಾರ್ಟ್ 1 ಸಿನಿಮಾ ಕೆಲಸ ಶುರು ಆಗಲಿದೆ ಎಂದಿದ್ದಾರೆ. ಇದೇನಿದು ವಿಚಿತ್ರ ಎಂದಿರುವ ಸಿನಿಪ್ರಿಯರು ಇನ್ನಷ್ಟು ಕಾತರದಿಂದ ಕಾಂತಾರ-1ಗೆ (Kantara-1) ಕಾಯುತ್ತಿದ್ದಾರೆ. 

Zeenat Aman: ಮೊದಲ ಪತಿ ದವಡೆ ಮುರಿದ, 3ನೇಯವ ರೇಪ್​ ಮಾಡಿದ, ಬಾಲಿವುಡ್​ ಸೆಕ್ಸಿಯ ಭಯಾನಕ ಸ್ಟೋರಿ!