ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ನಿಧನರಾದರು. ನಾಸ್ತಿಕರಾದ ಪ್ರಕಾಶ್ ರಾಜ್, ತಾಯಿಯ ಅಂತ್ಯಕ್ರಿಯೆಯನ್ನು ಅವರ ನಂಬಿಕೆಯಂತೆ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ನಡೆಸಿದ್ದಕ್ಕೆ ಟ್ರೋಲ್‌ಗೆ ಒಳಗಾದರು.

ಬೆಂಗಳೂರು (ಏ.2): ದಕ್ಷಿಣ ಭಾರತ ಮತ್ತು ಬಾಲಿವುಡ್‌ನ ಖ್ಯಾತ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (86) ಇತ್ತೀಚೆಗೆ ನಿಧನರಾದರು. ಕಳೆದ ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದು, ಪ್ರಕಾಶ್ ರಾಜ್ ಕುಟುಂಬಕ್ಕೆ ಭಾರಿ ನೋವು ತಂದಿದೆ. ಆದರೆ, ಈ ದುಃಖದ ನಡುವೆಯೂ, ತಾಯಿಯ ಅಂತ್ಯಕ್ರಿಯೆಯನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಸಿದ ಕಾರಣಕ್ಕಾಗಿ ನಟನನ್ನು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಪ್ರಕಾಶ್ ರಾಜ್ ಖಡಕ್ ಉತ್ತರ ನೀಡಿದ್ದಾರೆ.

ಪ್ರಕಾಶ್ ರಾಜ್ ಸ್ವತಃ ತಾವು 'ನಾಸ್ತಿಕ' ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಯಾವುದೇ ದೇವರನ್ನು ತಾನು ನಂಬೋದಿಲ್ಲ ಎಂದಿದ್ದಾರೆ. ಹೀಗಿರುವ ವ್ಯಕ್ತಿ ತಮ್ಮ ತಾಯಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿದ್ದೇಕೆ ಎಂದು ನೆಟ್ಟಿಗನೊಬ್ಬ ಪ್ರಶ್ನಿಸಿದ್ದಾನೆ. ಪ್ರಕಾಶ್ ರಾಜ್ ಅವರ ಹಳೆಯ ಸಂದರ್ಶನದ ತುಣುಕೊಂದನ್ನು ಎಕ್ಸ್‌ನಲ್ಲಿ ಹಂಚಿಕೊಂಡು, "ದೇವರ ಮೇಲೆ ನಂಬಿಕೆ ಇಲ್ಲದ ಪ್ರಕಾಶ್ ರಾಜ್, ತಾಯಿಯ ಅಂತ್ಯಕ್ರಿಯೆಯನ್ನು ಕ್ರಿಶ್ಚಿಯನ್ ಪದ್ಧತಿಯಲ್ಲಿ ಏಕೆ ಮಾಡಿದರು?" ಎಂದು ವ್ಯಂಗ್ಯವಾಡಿದ್ದಾನೆ. ಆ ಸಂದರ್ಶನದಲ್ಲಿ ಪ್ರಕಾಶ್ ರಾಜ್, "ನನಗೆ ದೇವರ ಮೇಲೆ ನಂಬಿಕೆಯಿಲ್ಲ, ಅಂತಹ ವಿಚಾರಗಳಿಗೆ ತಲೆಕೆಡಿಸಿಕೊಳ್ಳಲು ನನ್ನ ಬಳಿ ಸಮಯವಿಲ್ಲ" ಎಂದು ಹೇಳಿದ್ದರು.

ಟ್ರೋಲಿಗರಿಗೆ ಪ್ರಕಾಶ್ ರಾಜ್ ನೀಡಿದ ಉತ್ತರ

ಈ ಟ್ರೋಲ್‌ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, "ಹೌದು, ನನಗೆ ದೇವರ ಮೇಲೆ ನಂಬಿಕೆಯಿಲ್ಲ. ಆದರೆ ನನ್ನ ತಾಯಿಗೆ ದೇವರ ಮೇಲೆ ನಂಬಿಕೆಯಿತ್ತು. ನನ್ನ ತಾಯಿಯ ನಂಬಿಕೆಯಂತೆ ಅವರಿಗೆ ಅಂತ್ಯಕ್ರಿಯೆ ನಡೆಸುವ ಹಕ್ಕನ್ನು ಕಸಿದುಕೊಳ್ಳಲು ನಾನು ಯಾರು? ಇದು ನಾವು ಪರಸ್ಪರ ಒಬ್ಬರಿಗೊಬ್ಬರು ಕೊಡಬೇಕಾದ ಮೂಲಭೂತ ಗೌರವ. ದ್ವೇಷವನ್ನೇ ಹರಡುವ ರಾಕ್ಷಸರಾದ ನೀವು, ಈ ಸರಳ ವಿಚಾರವನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತೀರಿ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

Scroll to load tweet…

ಪ್ರಕಾಶ್ ರಾಜ್ ಅವರ ತಾಯಿ ಬಾಲ್ಯದಲ್ಲಿ ಅನಾಥಾಶ್ರಮದಲ್ಲಿ ಬೆಳೆದವರು. ಅಲ್ಲಿ ಅವರು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದರು ಮತ್ತು ನಂತರ ನರ್ಸ್ ಆಗಿ ಕೆಲಸ ಮಾಡಿ ತಮ್ಮ ಕುಟುಂಬವನ್ನು ಕಷ್ಟಪಟ್ಟು ಸಾಕಿದ್ದರು. ತಾಯಿಯ ಇಷ್ಟದಂತೆಯೇ ಅವರ ಅಂತ್ಯಕ್ರಿಯೆ ನಡೆಸಿರುವುದು ನಿಜವಾದ ಮಾನವೀಯತೆ ಎಂದು ಹಲವು ಅಭಿಮಾನಿಗಳು ಪ್ರಕಾಶ್ ರಾಜ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ನಂಬಿಕೆಗಳಿಗಿಂತ ತಾಯಿಯ ಇಚ್ಛೆಗೆ ಗೌರವ ನೀಡುವುದು ಮುಖ್ಯ ಎಂದು ನೆಟ್ಟಿಗರು ನಟನ ಬೆಂಬಲಕ್ಕೆ ನಿಂತಿದ್ದಾರೆ.