Kannada Rider Piracy : ತಮಿಳು ವೆಬ್ಸೈಟ್ಲ್ಲಿ ಲಿಂಕ್ ಕಾಪಿ, ನಟ ನಿಖಿಲ್ ಅಸಮಾಧಾನ
- ಪೈರಸಿಯಿಂದ ಚಿತ್ರೋದ್ಯಮದ ಮೇಲೆ ಗಂಭೀರ ಪರಿಣಾಮ
- ತಮಿಳು ವೆಬ್ಸೈಟ್ಲ್ಲಿ ಲಿಂಕ್ ಕಾಪಿ : ನಿಖಿಲ್ ಅಸಮಾಧಾನ
- ಸಿನಿಮಾ ನಿರ್ಮಾಣ ಸುಲಭದ ಕೆಲಸವಲ್ಲ: ನಿಖಿಲ್
ಮಂಡ್ಯ (ಡಿ.27): ಕಷ್ಟ ಪಟ್ಟು ಸಾಲ (Loan) ಮಾಡಿ ಬಡ್ಡಿ ಕಟ್ಟಿಕೊಂಡು ಸಿನಿಮಾ (Movie) ಮಾಡುತ್ತಿದ್ದೇವೆ. ಆದರೆ ಕೆಲವು ಹ್ಯಾಕರ್ಸ್ಗಳು ಪೈರಸಿ ಮಾಡುತ್ತಿದ್ದಾರೆ. ಇದರಿಂದ ಚಿತ್ರೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಚಿತ್ರನಟ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಸಮಾಧಾನ ವ್ಯಕ್ತಪಡಿಸಿದರು. ನಗರದ ಗುರುಶ್ರೀ ಚಿತ್ರಮಂದಿರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳು ವೆಬ್ಸೈಟ್ನಲ್ಲಿ ನಮ್ಮ ಸಿನಿಮಾ ಲಿಂಕ್ ಕಾಪಿ ಮಾಡಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕೇಳಿ ಮನಸ್ಸಿಗೆ ತುಂಬಾ ಬೇಜಾರಾಗಿದೆ. ಚಿತ್ರ ನಿರ್ಮಾಣ ಮಾಡುವುದು ಸುಲಭದ ಕೆಲಸವಲ್ಲ. ಕಳೆದ ಎರಡು ವರ್ಷಗಳಿಂದಲೂ ನಾವು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೇವೆ. ಚಿತ್ರ ನಿರ್ಮಾಪಕರು ಕೋಟಿ ಗಟ್ಟಲೆ ಹಣ ಹೂಡಿಕೆ ಮಾಡಿ ಬಡ್ಡಿ ಕಟ್ಟುತ್ತಿದ್ದಾರೆ. ಇದರಿಂದ ಅವರಿಗೂ ಸಂಕಷ್ಟ ಎದುರಾಗಿದೆ. ಇಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದರು.
ಫೈರಸಿ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದೆವು. ಆದರೂ ಕೆಲವು ಹ್ಯಾಕರ್ಸ್ಗಳು ದುರುದ್ದೇಶ ಇಟ್ಟುಕೊಂಡು ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಚಿತ್ರರಂಗ ಉಳಿಯಬೇಕೆಂದರೆ ಫೈರೆಸಿ ಹಾವಳಿಯನ್ನು ತಡೆಯಬೇಕು. ಪೈರಸಿಗೆ ಯಾರೂ ಸಹಕಾರ ನೀಡಬಾರದು. ಎಲ್ಲರೂ ಚಿತ್ರಮಂದಿರಕ್ಕೆ (Theater) ಬಂದು ಚಿತ್ರವನ್ನು ವೀಕ್ಷಿಸಬೇಕು ಎಂದು ಮನವಿ ನೀಡಿದರು.
ನಮ್ಮ ಅಕ್ಕಪಕ್ಕದ ಉದ್ಯಮಗಳಲ್ಲಿ 250 ರಿಂದ 300 ಕೋಟಿ ರು. ಬಂಡವಾಳ ಹೂಡಿ ಸಿನಿಮಾ ಮಾಡುತ್ತಾರೆ. ನಮಗೆ ಒಂದು ಚೌಕಟ್ಟು ಇರುತ್ತೆ. ಅದರೊಳಗೆ ನಾವು ಎಲ್ಲವನ್ನೂ ಮಾಡಬೇಕಿದೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ:
ರೈಡರ್ (Rider) ಚಿತ್ರದ ಬಗ್ಗೆ ಅಭಿಮಾನಿಗಳು, ಪ್ರೇಕ್ಷಕರಿಂದ ಅಭಿಪ್ರಾಯ ಕೇಳಿ ತಿಳಿದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿನಿಮಾ (Cinema) ಮಾಡುವುದು ಅಷ್ಟುಸುಲಭವಲ್ಲ. ಕೋವಿಡ್ನಿಂದಾಗಿ (covid) ತುಂಬಾ ಸಂಕಷ್ಟ ಅನುಭವಿಸಿದ್ದೆವು. ಈಗಷ್ಟೇ ಮತ್ತೆ ಚೇತರಿಕೆ ಕಾಣುತ್ತಿದೆ. ಕೆಲವು ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ಈಗ ನಮ್ಮ ಸರದಿ ಎಂದರು.
ರೈಡರ್ ಚಿತ್ರ ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಎರಡು ದಿನಗಳಿಂದ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ (Move) ನೋಡಿದ ಜನ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ನನಗೆ ಖುಷಿ ನೀಡಿದೆ. ಈಗಾಗಲೇ ಬಹಳಷ್ಟು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಇವತ್ತು ಮಂಡ್ಯ (Mandya), ರಾಮನಗರ, ಚನ್ನಪಟ್ಟಣದಲ್ಲಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದೇನೆ. ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ. ಇದು ನನಗೆ ಸಂತೋಷ ತಂದಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಇತರರಿದ್ದರು.
ಚಿತ್ರ ಮಾಡೋದಕ್ಕೆ ತುಂಬಾ ಶ್ರಮ ಪಡಬೇಕು
ಸಾಮಾನ್ಯವಾಗಿ ಕಥೆಯೇ ಹೀರೋ. ಒಳ್ಳೆಯ ಕಥೆ ಒಳ್ಳೆಯ ಪಾತ್ರಧಾರಿಯಾಗಬೇಕು. ಸಿನಿಮಾ ಯಾವ ರೀತಿ ಬಂದಿದೆ. ಯಾವ ಅಂಶ ಇಷ್ಟಆಗಿದೆ. ಮುಂದೆ ನಾವು ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಮಾಡುತ್ತೇವೆ. ಸಿನಿಮಾ ಮಾಡೋದಿಕ್ಕೆ ತುಂಬಾ ಶ್ರಮ ಪಡಬೇಕು. ಪ್ರೇಕ್ಷಕರು ಸಾಮಾನ್ಯವಾಗಿ ಚೆನ್ನಾಗಿದೆ, ಚೆನ್ನಾಗಿಲ್ಲ. ಪರವಾಗಿಲ್ಲ ಎಂದಷ್ಟೇ ಹೇಳುತ್ತಾರೆ. ಆದರೆ ಒಂದು ಚಿತ್ರ ನಿರ್ಮಿಸಬೇಕಾದರೆ ಎಲ್ಲರೂ ಎಷ್ಟೊಂದು ಕಷ್ಟ ಅನುಭವಿಸಿರುತ್ತಾರೆ ಎಂಬುದು ಅವರಿಗೆ ಮಾತ್ರ ಗೊತ್ತು ಎಂದು ಹೇಳಿದರು.
ಚಿತ್ರರಂಗದಲ್ಲಿ ಒಳ್ಳೆಯ ಕಲಾವಿದನಾಗಿ ಜನ ನನ್ನನ್ನು ಸ್ವೀಕರಿಸಿದ್ದಾರೆ. ಒಳ್ಳೆಯ ಚಿತ್ರಗಳನ್ನು ಕೊಡಬೇಕು. ನಾನು ಹಿಂತಿರುಗಿ ನೋಡಿದಾಗ ಒಳ್ಳೆಯ ಸಿನಿಮಾ ಕೊಟ್ಟಿದ್ದೇನೆ ಎಂದು ನನ್ನ ಮನಸ್ಸಿಗೆ ತೃಪ್ತಿ ಸಿಗಬೇಕು ಎಂದರು.
ರಾಜಕೀಯ (Politics) ಎಂದು ಬಂದಾಗ ಅದರದ್ದೇ ಆದ ಜವಾಬ್ದಾರಿಗಳಿವೆ. ರಾಜಕಾರಣದ ಬಗ್ಗೆ ರಾಜಕೀಯ (Politics) ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ತಮ್ಮ ರಾಜಕೀಯ ಕ್ಷೇತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕಾನೂನು ಹೋರಾಟ ನಡೆಸುತ್ತೇವೆ: ನಿಖಿಲ್
ತಮಿಳಿನ ವೆಬ್ಸೈಟ್ ಒಂದರಿಂದ ‘ರೈಡರ್’ ಚಲನಚಿತ್ರ ಪೈರಸಿಯಾಗಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಚಿತ್ರನಟ ನಿಖಿಲ್ ಕುಮಾರ್ಸ್ವಾಮಿ ತಿಳಿಸಿದ್ದಾರೆ. ಪೈರಸಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಇದರಿಂದ ಚಿತ್ರೋದ್ಯಮದ ಮೇಲೆ ಗಂಭೀರ ಪರಿಣಾಮಗಳಾಗುತ್ತಿದ್ದು, ಚಿತ್ರರಂಗ ಉಳಿಯಬೇಕೆಂದರೆ ಪೈರಸಿ ಹಾವಳಿಯನ್ನು ತಡೆಯಬೇಕು ಎಂದು ಹೇಳಿದ್ದಾರೆ.
ಜ. 18ಕ್ಕೆ ಮತ್ತೊಂದು ಚಿತ್ರ ಸೆಟ್ಟೇರಲಿದೆ. ಅದರ ಬಗ್ಗೆ ಈಗಲೇ ಹೇಳಿದರೆ ಕುತೂಹಲ ಇರುವುದಿಲ್ಲ. ಚಿತ್ರ ನಿರ್ಮಾಪಕರು, ನಿರ್ದೇಶಕರೂ ಬೇಸರ ಮಾಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಮಂಡ್ಯಕ್ಕೆ ಹತ್ತಿರವಾದ ಸಿನಿಮಾ ನಿರ್ಮಾಣವಾಗುತ್ತದೆ ಎಂದು ಚುಟುಕಾಗಿ ಉತ್ತರಿಸಿದರು.