ಶಂಕರ್ ನಾಗ್ ನಮ್ಮನ್ನು ಅಗಲಿ ಇಂದಿಗೆ 29 ವರ್ಷ/ ಮಹಾನ್ ನಟನ ನೆನಪಿಗೆ ದಾವಣೆಗರೆಯಲ್ಲಿ ಒಂದು ಸ್ಮಾರಕವಾದರೂ ಆಗಲಿ/ ಮಿಂಚಿ ಮರೆಯಾದ ಚೇತನಕ್ಕೊಂದು ನಮನ

ದಾವಣಗೆರೆ[ಸೆ. 30]  ಶಂಕರ್ ನಾಗ್ ಹೆಸರು ಕೇಳಿದರೆ ಸಾಕು ಎಂಥವರಿಗೂ ಮೈ ರೋಮಾಂಚನವಾಗುತ್ತದೆ. ಕನ್ನಡ ಚಿತ್ರ ರಂಗದಲ್ಲಿ ಅಪರೂಪದ ವ್ಯಕ್ತಿತ್ವವುಳ್ಳವರು. ಶಂಕರ್ ನಾಗ್ ಬದುಕಿದ್ದು ಕಡಿಮೆ ವರ್ಷವಾದರೂ ಅವರ ಸಾಧನೆ ಮಾತ್ರ ಚಿರಸ್ಮರಣೀಯ. ಇಂಥ ಮೇರು ನಟ ನಿರ್ದೇಶಕ, ರಂಗಕರ್ಮಿ ನಮ್ಮನ್ನ ಅಗಲಿ ಇಂದಿಗೆ 29 ವರ್ಷಗಳೇ ಕಳೆದಿವೆ. ದಾವಣಗೆರೆ ಬಳಿ ಅಪಘಾತದಲ್ಲಿ ಅವರು ಈ ಲೋಕವನ್ನೇ ತ್ಯಜಿಸಿದರು. ಅವರು ಇಲ್ಲವಾದರೂ ಅವರು ಕನ್ನಡ ಚಿತ್ರರಂಕ್ಕೆ ಕೊಟ್ಟ ಕೊಡುಗೆ ಶಾಶ್ವತ

Add Asianetnews Kannada as a Preferred SourcegooglePreferred

ಶಂಕರ್ ನಾಗ್... 1954 ನವೆಂಬರ್ 9ರಂದು ಹೊನ್ನಾವರ ತಾಲ್ಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಜನ್ಮತಾಳಿದರು. ಗಿರೀಶ್ ಕಾರ್ನಾಡ್ ಅವರ “ಒಂದಾನೊಂದು ಕಾಲದಲ್ಲಿ” ಎಂಬ ಚಿತ್ರದಲ್ಲಿ ಗಂಡುಗಲಿ ಪಾತ್ರ ಮಾಡುವ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು. ಈ ಚಿತ್ರದ ಅಭಿನಯಕ್ಕೆ ರಾಷ್ಟ್ರಮಟ್ಟದ ಅತ್ಯುನತ್ತ ನಟ ಪ್ರಶಸ್ತಿ ಸಹ ಸಿಕ್ಕಿತು.

ಆಟೋರಾಜ ಶಂಕರ್‌ ನಾಗ್‌ ಚಿತ್ರಮಂದಿರಕ್ಕೆ ಮತ್ತೆ ಜೀವ!...

ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ ಎನಿಸಿಕೊಂಡವರು ಶಂಕರ್ ನಾಗ್. ಕ್ರಿಯಾಶೀಲ ನಿರ್ದೇಶಕ ಹಾಗೂ ನಟರಾದ ಅವರು ಕನ್ನಡ ಚಿತ್ರರಂಗವನ್ನ ಮುಂಚೂಣಿಯಲ್ಲಿ ಸಾಗುವಂತೆ ಮಾಡಿದರು. ಶಂಕರ್ ನಾಗ್ ನಮ್ಮೊಂದಿಗೆ ಇಲ್ಲ ಎಂಬುದನ್ನ ಜೀರ್ಣಿಸಿಕೊಳ್ಳಲು ಇಂದಿಗೂ ಕನ್ನಡ ಚಿತ್ರರಂಗಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಕಷ್ಟವಾಗುತ್ತದೆ.

12 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದ ಶಂಕರ್ ನಾಗ್ ಸುಮಾರು 90 ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಲನಚಿತ್ರಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಅವರು ನಾಟಕ ಮತ್ತು ರಂಗಭೂಮಿಯನ್ನ ಶ್ರೀಮಂತಗೊಳಿಸಿದ ಕೀರ್ತಿ ಶಂಕರ್ ಗೆ ಸಲ್ಲುತ್ತದೆ. ಆರ್.ಕೆ.ನಾರಾಯಣ ಅವರ ‘ಮಾಲ್ಗುಡಿ ಡೇಸ್’ ಧಾರವಾಹಿಯನ್ನ ನಿರ್ದೇಶಿಸಿ ಭಾರತೀಯ ದೂರದರ್ಶನದಲ್ಲೇ ಹೊಸ ದಾಖಲೆ ಇತಿಹಾಸ ಸೃಷ್ಟಿಸದ್ದರು ಶಂಕರ್. ಈ ಧಾರವಾಹಿ ಮೂಲಕ ದೇಶಾದ್ಯಂತ ಮನೆ ಮಾತಾಗಿದ್ದರು ಶಂಕರ್.

ಸಾಂಗ್ಲಿಯಾನ, ಆಟೋರಾಜ, ಮಿಂಚಿನ ಓಟ ಸೇರಿದಂತೆ ಹಲವು ಚಿತ್ರಗಳು ಶಂಕರ್ ನಾಗ್ ಅವರನ್ನ ಉತ್ತುಂಗಕ್ಕೇರಿದವು. 1990 ಸೆಪ್ಟಂಬರ್ 30 ರಂದು ದಾವಣಗೆರೆ ಬಳಿಯ ಆನಗೋಡು ಬಳಿ ಎನ್.ಎಚ್ -4 ರಲ್ಲಿ ಶಂಕರ್ ನಾಗ್ ಬರುತ್ತಿದ್ದ ಕಾರು-ಲಾರಿಗೆ ಡಿಕ್ಕಿ ಹೊಡೆದು ಅಲ್ಲೇ ಕೊನೆಯುಸಿರೆಳೆದರು. ಅವರ ಅಭಿಮಾನಿಗಳಲ್ಲಿ ಇಂದಿಗೂ ನೋವು ಕಾಡುತ್ತಿದ್ದು, ನೆನಪು ಮಾತ್ರ ಮಾಸಿಲ್ಲ. 

ಅಂದು ಕನ್ನಡ ಚಿತ್ರರಂಗಕ್ಕೆ ಕರಾಳ ದಿನ. ಹೌದು, ಸೂರ್ಯನ ಬಿಸಿಲು ನೆತ್ತಿಗೆ ಏರುತ್ತಿದ್ದಂತೆ ರಾಜ್ಯದೆಲ್ಲೆಡೆ ಮೌನ ಆವರಿಸಿತ್ತು. ಕನ್ನಡ ಚಿತ್ರರಂಗದ ಒಂದು ನಕ್ಷತ್ರ ಕಳಚಿ ಬಿದ್ದಿತ್ತು. ಸೆಪ್ಟೆಂಬರ್ 30- 1990 ಅಂದು ಭಾನುವಾರ ಸೂರ್ಯನ ಕಿರಣಗಳು ಭೂಮಿಗೆ ತಾಕುತ್ತಿದ್ದಂತೆ ಸಹಿಸಿಕೊಳ್ಳಲಾಗದ ಸುದ್ದಿ ಬಿತ್ತರಿಸಿತು.

ಜನರ ಬಾಯಿಂದ ಬಾಯಿಗೆ ಶಂಕರನಾಗ್ ರವರ ಸಾವಿನ ಸುದ್ದಿ ಹರಡಿತ್ತು. ದಾವಣಗೆರೆ ತಾಲ್ಲೂಕು ಆನಗೋಡು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮುಂಜಾನೆ 4.30ರ ಸುಮಾರಿಗೆ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಇಹಲೋಕ ತ್ಯಜಿಸಿದ್ದರು.

ಶಂಕರ್ ನಾಗ್ ಪುತ್ರಿ ಈಗೇನು ಮಾಡುತ್ತಿದ್ದಾರೆ? ಸಾಧನೆಯ ಹಾದಿಯಲ್ಲಿ

ಬೆಂಗಳೂರಿನಿಂದ ದಾವಣಗೆರೆ ಕಡೆಗೆ ಆಟೋರಾಜ ಕಾರಿನಲ್ಲಿ ಬರುತ್ತಿದ್ದ ವೇಳೆ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಕಾರಿನಲ್ಲಿ ಅವರ ಪತ್ನಿ ಅರುಂಧತಿನಾಗ್ ಮಗಳು ಕಾವ್ಯಾ ಮತ್ತು ಕಾರು ಚಾಲಕ ಲಿಂಗಯ್ಯ ಇದ್ದರು. 

ಶಂಕರ್ ಸಾವು ಸರ್ಕಾರಕ್ಕೆ ಸಾಮಾನ್ಯ ವ್ಯಕ್ತಿಯ ಸಾವಾಗಿ ಹೋಗಿದೆ. ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರಾಗಿದ್ದ ಕನ್ನಡ ಚಿತ್ರರಂಗವನ್ನೆ ಶ್ರೀಮಂತಗೊಳಿಸಿದ್ದವರ ನೆನಪಿಗೆ ಇಲ್ಲಿ ಒಂದು ಸ್ಮಾರಕವನ್ನಾದರೂ ಸ್ಥಾಪಿಸಲಿ, ಅವರ ನೆನಪು ಚಿರಸ್ಥಾಯಿಯಾಗಲಿ ಎಂಬುದು ಕನ್ನಡ ಕುಲಕೋಟಿ ಅಭಿಮಾನಿಗಳ ಆಶಯ.