ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ KFCCಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿರುವ ಅವರು, ಕನ್ನಡ ಭಾಷೆ ಮತ್ತು ಜನರ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜೂ.3): ನನಗೆ ಕನ್ನಡ ಭಾಷೆ, ಜನರ ಮೇಲೆ ನಿಜವಾದ ಪ್ರೀತಿ ಇದೆ. ಆದರೆ, ಥಗ್ ಲೈಫ್ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದ ವೇಳೆ ಕನ್ನಡ ಭಾಷೆಯ ಒಂದೇ ಕುಟುಂಬದ ಭಾಷೆ ಎನ್ನುವ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಹೀಗಾಗಿ, ಇದನ್ನು ಇಲ್ಲಿಗೆ ಬಿಟ್ಟು ಪರಸ್ಪರ ಗೌರವದಿಂದ ನಡೆದುಕೊಳ್ಳೋಣ' ಎಂದು ನಟ ಕಮಲ್ ಹಾಸನ್ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (KFCC)ಗೆ ಖುದ್ದಾಗಿ ಪತ್ರ ಬರೆದಿದ್ದಾರೆ. ಈ ಮೂಲಕ ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ತಪ್ಪಾದ ಹೇಳಿಕೆಗೆ ಕ್ಷಮೆ ಕೇಳದೇ ತನ್ನ ತಪ್ಪಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.
ಥಗ್ ಲೈಫ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡ ತಮಿಳು ಭಾಷೆಯಿಂದ ಹುಟ್ಟಿದ್ದು ಎಂಬ ಹೇಳಿಕೆಗೆ ಸಂಬಂಧಿಸಿದ ವಿವಾದದ ನಡುವೆ ನಟ ಕಮಲ್ ಹಾಸನ್ ಅವರು ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (KFCC)ಗೆ ಖುದ್ದಾಗಿ ಪತ್ರ ಬರೆದಿದ್ದಾರೆ. ಮೇ 30ರಂದು KFCC ಅಧ್ಯಕ್ಷ ನರಸಿಂಹಲು ಅವರಿಗೆ ಕಳುಹಿಸಿರುವ ಈ ಪತ್ರದಲ್ಲಿ ಅವರು ತಮ್ಮ ಹೇಳಿಕೆಯನ್ನು ವಿವರಣೆಗೊಳಿಸಿ, ಯಾವುದೇ ರೀತಿಯ ದುರಾಶಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಹೇಳಿಕೆಯ ಉದ್ದೇಶ ಭಿನ್ನ – ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ
'ಡಾ. ರಾಜ್ ಕುಮಾರ್ ಅವರ ಕುಟುಂಬದ, ವಿಶೇಷವಾಗಿ ಶಿವರಾಜ್ ಕುಮಾರ್ ಅವರ ಮೇಲಿರುವ ನನ್ನ ಆತ್ಮೀಯತೆಯಿಂದ ಮಾಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ' ಎಂದು ಕಮಲ್ ಹಾಸನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 'ನಾನು ಹೇಳಿದ್ದು ನಾವೆಲ್ಲ ಒಂದೇ ಕುಟುಂಬದವರೆಂದು. ಇದರಿಂದ ಕನ್ನಡ ಭಾಷೆಯ ವಿರುದ್ಧವಾಗಿ ಮಾತನಾಡುವಂತಹ ಯಾವುದೇ ಅರ್ಥವೂ ಇರಲಿಲ್ಲ' ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕನ್ನಡದ ಬಗ್ಗೆ ಹಾಸನ್ ಅಭಿಮಾನ ವ್ಯಕ್ತಪಡಿಸಿದಂತೆ:
'ಕನ್ನಡ ಭಾಷೆಯ ಶ್ರೀಮಂತ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಮೇಲೆ ನನಗೆ ಸದಾ ಗೌರವವಿದೆ. ನನ್ನ ವೃತ್ತಿಜೀವನದಾದ್ಯಂತ ಕನ್ನಡಿಗರಿಂದ ನನಗೆ ಅಪಾರ ಪ್ರೀತಿ ಮತ್ತು ಬೆಂಬಲ ದೊರೆತಿದೆ. ನನ್ನ ಮನಸ್ಸಿನಿಂದಲೂ, ನಂಬಿಕೆಯಿಂದಲೂ ನಾನು ಹೇಳುತ್ತೇನೆ. ನನಗೆ ಕನ್ನಡ ಭಾಷೆ, ಜನರ ಮೇಲೆ ನಿಜವಾದ ಪ್ರೀತಿ ಇದೆ' ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಭಾಷಾ ಸಮಾನತೆಗೆ ಹಾಸನ್ ಗೌರವ:
ಪತ್ರದಲ್ಲಿ ಅವರು ಎಲ್ಲ ಭಾರತೀಯ ಭಾಷೆಗಳ ಸಮಾನ ಗೌರವವನ್ನು ಹೊಂದಿರುವ ವ್ಯಕ್ತಿಯಾಗಿ ನಾನು ಸದಾ ನಿಲ್ಲುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಭಾಷೆಯ ಪ್ರಾಬಲ್ಯವನ್ನೂ ನಾನು ವಿರೋಧ ಮಾಡುವುದಿಲ್ಲ. 'ಅದು ಭಾರತದ ಭಾಷಾ ಏಕತೆಗೆ ಧಕ್ಕೆ ತರುತ್ತದೆ. ನಾನು ಸಿನಿಮಾರಂಗದ ಭಾಷೆ ಮಾತನಾಡುತ್ತೇನೆ. ಅದು ಪ್ರೀತಿಯ, ಬಾಂಧವ್ಯದ ಭಾಷೆ. ನನ್ನ ಹೇಳಿಕೆಯ ಉದ್ದೇಶ ಕೂಡ ಆ ಬಾಂಧವ್ಯವನ್ನು ಒತ್ತಿಹೇಳುವುದು ಮಾತ್ರ' ಎಂದು ಅವರು ಹೇಳಿದ್ದಾರೆ. ಇನ್ನು 'ಶಿವಣ್ಣ ಅವರು ಆ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಬಂದಿದ್ದರು. ಆದರೆ, ನನ್ನ ಹೇಳಿಕೆಯ ಕಾರಣದಿಂದಾಗಿ ಅವರನ್ನು ಕೂಡ ವಿರೋಧ ಮಾಡುತ್ತಿವ ಘಟನೆ ನಡೆದಿರುವುದರಿಂದ ನನಗೆ ಬೇಸರವಾಗಿದೆ. ಆದರೆ ನಮ್ಮ ನಡುವಿನ ನಿಜವಾದ ಪ್ರೀತಿ ಮತ್ತು ಗೌರವ ಇದಕ್ಕಿಂತ ಬಲವಾದದ್ದಾಗಿದೆ.
ಪತ್ರದ ಅಂತಿಮ ಸ್ಪಷ್ಟನೆ:
ಪತ್ರದ ಕೊನೆಯಲ್ಲಿ, 'ನನ್ನ ಮಾತುಗಳು ನಿಮಗೆ ಹೇಗೆ ತಲುಪಿದ್ದರೂ, ನನ್ನ ಮನಸ್ಸಿನಲ್ಲಿರುವ ಕನ್ನಡದ ಬಗೆಗಿನ ಒಳ್ಳೆಯ ಉದ್ದೇಶವನ್ನು ಅರಿಯಬೇಕೆಂದು ನಾನು ಮನವಿ ಮಾಡುತ್ತೇನೆ. ನನ್ನಲ್ಲಿರುವ ಕರ್ನಾಟಕದ ಜನರ ಮೇಲಿರುವ ಪ್ರೀತಿ ಮತ್ತು ಗೌರವವನ್ನು ಗುರುತಿಸಲು ಮನವಿ ಮಾಡುತ್ತೇನೆ. ಇದು ತಾತ್ಕಾಲಿಕ ತಪ್ಪು ಅರ್ಥಮಾಡಿಕೊಳ್ಳುವಿಕೆಯಾಗಿದೆ. ಈ ಸಂದರ್ಭವನ್ನು ನಾವು ಪರಸ್ಪರದ ಗೌರವವನ್ನು ಕಾಪಾಡಿಕೊಳ್ಳೋಣ ಎಂದು ಕಮಲ್ ಹಾಸನ್ ಮನವಿ ಮಾಡಿದ್ದಾರೆ.
