ಹಿಜಾಬ್ ಬ್ಯಾನ್ ಮಾಡುವ ಅಗತ್ಯ ಇರಲಿಲ್ಲ: ಹೇಮಾಮಾಲಿನಿ
- ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ
- ಹಿಜಾಬ್ ಬ್ಯಾನ್ ಮಾಡುವ ಅಗತ್ಯ ಇರಲಿಲ್ಲ
- ಹಿಜಾಬ್ ತೀರ್ಪಿಗೆ ನಟಿ ಹೇಮಾಮಾಲಿನಿ ಪ್ರತಿಕ್ರಿಯೆ
ಬೆಂಗಳೂರು(ಮಾ.16):ಕರ್ನಾಟಕ ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪು ಬಗ್ಗೆ ಬಾಲಿವುಡ್ ಅಭಿನೇತ್ರಿ ಹಾಗೂ ಭಾರತೀಯ ಜನತಾ ಪಾರ್ಟಿಯ ಸಂಸದೆಯೂ ಆಗಿರುವ ಹೇಮಾಮಾಲಿನಿ ಪ್ರತಿಕ್ರಿಯಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ಗೆ ಅನುಮತಿ ನಿರಾಕರಿಸುವ ಅಗತ್ಯವಿರಲಿಲ್ಲ. ಆದರೆ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ. ಕರ್ನಾಟಕ ಹೈಕೋರ್ಟ್ ನಿನ್ನೆ ಹಿಜಾಬ್ ಪ್ರಕರಣದ ತೀರ್ಪು ನೀಡಿತ್ತು. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಬಳಸಲು ಅನುಮತಿ ಇಲ್ಲ. ಅಗತ್ಯವಾಗಿ ಸಮವಸ್ತ್ರ ನಿಯಮವನ್ನು ಪಾಲಿಸಬೇಕು ಎಂದು ಕೋರ್ಟ್ ತೀರ್ಪು ನೀಡಿತ್ತು.
ಈ ಹಿಜಾಬ್ ಪ್ರಕರಣ ಭಾರಿ ವಿವಾದಕ್ಕೆ ಕಾರಣವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ನಿನ್ನೆ ತೀರ್ಪು ನೀಡಿದ ಹೈಕೋರ್ಟ್ ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದು ಹೇಳಿತ್ತು. ಅಲ್ಲದೇ ಶಾಲೆಗೆ ಕೇಸರಿ ಶಾಲು, ಹಿಜಾಬ್ ಆಗಲಿ ಯಾವುದೂ ಧರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ .
News Hour: ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗ ಅಲ್ಲ, ಯಾವ ಆಧಾರದಲ್ಲಿ ಹೈಕೋರ್ಟ್ ತೀರ್ಪು
ಈ ತೀರ್ಪು ಬರುತ್ತಿದ್ದಂತೆ ಶಾಲಾ-ಕಾಲೇಜುಗಳಿಗೆ (Schools And Colleges)ಹಿಜಾಬ್ ಧರಿಸಿಕೊಂಡು ಹೋಗಲು ಅವಕಾಶ ಕೊಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿ (Udupi) ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ 6 ಮುಸ್ಲಿಂ ವಿದ್ಯಾರ್ಥಿನಿಯರು (Muslim Students) ಸುದ್ದಿಗೋಷ್ಠಿ ನಡೆಸಿದ್ದರು. ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗೋದಿಲ್ಲ. ಕುರಾನ್ ಹೇಳಿದ್ದೇ ನಮಗೆ ಫೈನಲ್. ನಮ್ಮ ಹಕ್ಕು ಪಡೆಯೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ವಿದ್ಯಾರ್ಥಿನಿಯರು ಸ್ಪಷ್ಟಪಡಿಸಿದರು.
ಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸಾದಿ ಮಾತನಾಡಿ, ನಮಗೆ ಕೋರ್ಟ್ನಲ್ಲಿ ನ್ಯಾಯ ಸಿಗುವ ಭರವಸೆ ಇತ್ತು. ಆದರೆ ನಮ್ಮ ವಿರುದ್ಧ ತೀರ್ಪು ಬಂದಿದೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ಇಲ್ಲದೆ ಕಾಲೇಜಿಗೆ ಬರಲ್ಲ. ಹೆಣ್ಣುಮುಕ್ಕಳು ಮನೆಯಿಂದ ಹೊರಬರುವಾಗ ತಲೆ-ಎದೆಭಾಗವನ್ನು ಮುಚ್ಚಬೇಕು ಎಂದು ಕುರಾನ್ನಲ್ಲಿ ಬರೆದಿದೆ ಎಂದರು.
ಕುರಾನ್ ಹೇಳಿದ ಮೇಲೆ ನಮಗೆ ಅದೇ ಫೈನಲ್, ಅದೇ ನಮ್ಮ ಸಂವಿಧಾನ. ನಮ್ಮ ಹಕ್ಕು ಪಡೆಯೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ. ನಮಗೆ ಹಿಜಾಬ್ ಅತ್ಯವಶ್ಯಕ. ಅದಕ್ಕಾಗಿಯೇ ಈ ಹೋರಾಟ. ರಾಜಕೀಯ ಉದ್ದೇಶಕ್ಕಾಗಿ ಇದನ್ನು ದೊಡ್ಡದು ಮಾಡಲಾಯಿತು. ಕಾಲೇಜಿನ ಕಾಂಪೌಂಡಿನ ಒಳಗೆ ಈ ಸಮಸ್ಯೆಯನ್ನ ಬಗೆಹರಿಸಬಹುದಿತ್ತು ಎಂದು ಹೇಳಿದರು. ಕಾಲೇಜಿಗೆ ಗೈರಾಗಿದ್ದರೂ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೇವೆ. ನಾವು ಹಿಜಾಬ್ ತೆಗೆಯುವುದಿಲ್ಲ, ನಮಗೆ ಶಿಕ್ಷಣ ಕೂಡ ಮುಖ್ಯ. ಸರ್ಕಾರ ಕೋರ್ಟ್ ಮೇಲೆ ಒತ್ತಡ ಹಾಕಿದೆ. ಒತ್ತಡ ಇದ್ದದ್ದಕ್ಕೆ ಇಂದು ಹಿಜಾಬ್ ವಿರುದ್ಧ ತೀರ್ಪು ಬಂದಿದೆ. ಇದು ಅಸಂವಿಧಾನಿಕವಾದ ತೀರ್ಪು ಎಂದು ಆಲಿಯಾ ಅಸಾದಿ ಆರೋಪಿಸಿದರು.
ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ
ಇನ್ನು ವಿದ್ಯಾರ್ಥಿನಿ ಅಲ್ಮಾಸ್ ಮಾತನಾಡಿ, ನಮಗಿಲ್ಲಿ ನ್ಯಾಯ ಇಲ್ಲ ಅನ್ನಿಸುತ್ತಿದೆ. ಎರಡು ತಿಂಗಳು ಸಮಸ್ಯೆ ಅನುಭವಿಸಿದೆವು. ನಮ್ಮನ್ನು ಬೇರೆಯೇ ರೀತಿಯಲ್ಲಿ ನೋಡುತ್ತಿದ್ದಾರೆ. ನಾವು ಡಿಸಿ, ಡಿಡಿಪಿಐ ಭೇಟಿ ಮಾಡಿದರೂ ನ್ಯಾಯ ಸಿಗಲಿಲ್ಲ. ನಮಗೆ ನಮ್ಮ ನ್ಯಾಯ ಸಿಗಲಿಲ್ಲ. ನಾವು ಜಾತ್ಯಾತೀತ ದೇಶದಲ್ಲಿದ್ದೇವೆ. ಎಲ್ಲಾ ಧರ್ಮಕ್ಕೆ ಎಲ್ಲರೂ ಗೌರವ ಕೊಡಬೇಕು ಎಂದರು.
ಒಟ್ಟಿನಲ್ಲಿ ಉಡುಪಿ ಕಾಲೇಜಿನಿಂದ ಆರಂಭವಾದ ಹಿಜಾಬ್(Hijab) ವಿವಾದ ಹೈಕೋರ್ಟ್ (Karnataka High Court) ವರೆಗೆ ಬಂದು ನಿಂತಿದ್ದು ಈಗ ಸುಪ್ರೀಂ ಕೋರ್ಟ್ (Supreme Court) ಕಡೆ ತೆರಳಿದೆ. ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಮಹಿಳೆಯರ ಧಾರ್ಮಿಕ ಹಕ್ಕು ಎಲ್ಲಿಯೂ ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.