ವಿಜಯ್ ಪ್ರಸಾದ್ ನಿರ್ದೇಶಕ ಮಾಡಿರುವ ತೋತಾಪುರಿ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಅಭಿನಯಿಸಿರುವ ಸಿನಿಮಾ ಹೇಗಿದೆ?

ಪ್ರಿಯಾ ಕೆರ್ವಾಶೆ

‘ತೋತಾಪುರಿ’ ಮಾವಿನಲ್ಲೊಂದು ವಿಶಿಷ್ಟಗುಣ ಇದೆ. ಅದನ್ನು ಹಾಗೇ ತಿನ್ನೋದಕ್ಕಿಂತ ಉಪ್ಪು ಖಾರ ಸೇರಿಸಿ ತಿಂದರೆ ಮಜಾ. ‘ತೋತಾಪುರಿ’ ಸಿನಿಮಾವೂ ಹಾಗೆ. ಮಾತಿನ ಉಪ್ಪು ಖಾರದ ಜೊತೆಗೇ ಇದನ್ನು ಸವಿಯಬೇಕು. ಕಥೆಗೆ ಹುಡುಕಾಡಬಾರದು. ಒಮ್ಮೊಮ್ಮೆ ಮಾವಿಗಿಂತ ಉಪ್ಪು ಖಾರವೇ ಹೆಚ್ಚಾದರೂ ನೀರು ಕುಡಿದು ಸುಧಾರಿಸಿಕೊಳ್ಳಬೇಕು. ಕಥೆಗಾಗಿ ಮುಂದಿನ ಭಾಗ ಅಂದರೆ ತೋತಾಪುರಿ ಪಾರ್ಚ್‌ 2ಗೆ ಕಾಯಬೇಕು.

ಈರೇ ಗೌಡ ಒಬ್ಬ ಟೈಲರ್‌. ಈತನಿಗೆ ಶಕೀಲಾ ಬಾನು ಅನ್ನೋ ಹುಡುಗಿ ಮೇಲೆ ಪ್ರೀತಿ. ಹೊರಗೆ ಸುರೀತಿರುವ ಮಳೆಯ ಹಿನ್ನೆಲೆಯಲ್ಲಿ ಅಂಗಡಿ ಒಂದು ಮೂಲೆಯಲ್ಲಿ ಬಿಸಿ ಬಿಸಿ ಟೀ ಬನ್ನು ಸವೀತಿರೋ ಶಕೀಲಾ ಬಾನು, ಇನ್ನೊಂದು ಮೂಲೆ ಹಿಡಿದು ಚಕ್ಕುಲಿ ಕಡೀತಿರೋ ಈರೇ ಗೌಡ. ಮದುವೆ ಬಗ್ಗೆ , ಸೆಕ್ಸ್‌ ಬಗ್ಗೆ ಇವರ ಮಾತುಕತೆ. ಕಥೆ ಹೀಗೇ ಲವಲವಿಕೆಯಿಂದ ಮುಂದುವರಿಯಬಹುದು ಅನ್ನುವಾಗ ನಿರೂಪಣೆ ಮೀಸೆ ತೂರಿಸುತ್ತೆ. ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ವೇಷ ತೊಟ್ಟನಿರೂಪಕರು ಈ ಪ್ರೇಮಿಗಳ ಕಥೆಯ ಬದಲು ನಂಜಮ್ಮನ ನೋವಿನ ಕಥೆ, ದೊನ್ನೆ ರಂಗಮ್ಮನ ಗಟ್ಟಿತನದ ಕಥೆ, ಇನ್ನೂ ಏನೇನೋ ವಿಚಾರಗಳನ್ನು ಜೋರು ದನಿಯಲ್ಲಿ ಉದಾಹರಣೆ ಸಮೇತ ವಿವರಿಸುತ್ತಾರೆ. ಮನುಷ್ಯತ್ವದ ಗೋರಿಯ ಮೇಲೆ ನಿಂತಿರುವ ಜಾತಿ, ಧರ್ಮಗಳ ಬಗೆಗಿನ ಅಸಹನೆಯನ್ನು ತಮಗೆ ಅಸಹನೀಯ ಅನಿಸಿದಷ್ಟೇ ತೀವ್ರವಾಗಿ ನಿರ್ದೇಶಕರು ಪ್ರೇಕ್ಷಕರಿಗೂ ದಾಟಿಸಿದ್ದಾರೆ. ಮುಂದಿನ ಭಾಗಕ್ಕೆ ಜೋಶ್‌ ತುಂಬಲು ಬಾಗ್ಲು ತೆಗಿ ಮೇರಿ ಜಾನ್‌ ಹಾಡು.

ತಾರಾಗಣ: ಜಗ್ಗೇಶ್‌, ಅದಿತಿ ಪ್ರಭುದೇವ, ವೀಣಾ ಸುಂದರ್‌, ಹೇಮಾದತ್‌್ತ

ನಿರ್ದೇಶನ: ವಿಜಯಪ್ರಸಾದ್‌

ರೇಟಿಂಗ್‌: 3

KANTARA REVIEW: ಕಾಂತಾರ ಒಂದು ವಿಶಿಷ್ಟ ಅನುಭೂತಿ

ಇಂಟರ್‌ವಲ್‌ ನಂತರ ಚಿತ್ರದ ಫೆä್ಲೕ ಸ್ವಲ್ಪ ವೇಗ ಪಡೆಯುತ್ತೆ. ಶಕೀಲಾ ಪಾತ್ರದ ವಿವರಗಳು ತೆರೆದುಕೊಳ್ಳುತ್ತದೆ. ಆದರೂ ಈರೇಗೌಡ ದೊನ್ನೆ ರಂಗಮ್ಮನಿಗೆ ತೋತಾಪುರಿ ಹೊಲಿಗೆಯ ಬ್ಲೌಸ್‌ ಅಳತೆ ತಗೊಳ್ಳೋ ದೃಶ್ಯದಲ್ಲಿ ಸಂಕಲನಕಾರರ ಉದಾರತೆಯನ್ನು ಉಲ್ಲೇಖಿಸಲೇ ಬೇಕು. ಇಡೀ ಚಿತ್ರ ಸಂಭಾಷಣೆಯಲ್ಲಿ, ಏರುಗತಿಯ ಮಾತಿನಲ್ಲಿ ಸಾಗುತ್ತಿರುವಾಗ ಹಾಯಾದ ತಂಗಾಳಿಯಂತೆ ಹಾಡುಗಳು ಬರುತ್ತವೆ. ಅದರಲ್ಲೂ ವಾರಿಜಾಶ್ರೀ ಹಾಡುವ ‘ನಿಲ್ಲೇ ಕಣ್ಣೀರ’ ಅನ್ನೋ ಹಾಡು ಮನಸ್ಸಿಗೆ ತಟ್ಟುತ್ತದೆ. ನಟನೆಯ ವಿಚಾರಕ್ಕೆ ಬಂದರೆ ನಿರೂಪಕರ ಪಾತ್ರಗಳಲ್ಲಿ ಸಹಜತೆಗಿಂತ ನಾಟಕೀಯತೆ ಎದ್ದು ಕಾಣುತ್ತೆ. ಜಗ್ಗೇಶ್‌ ಅವರದು ಎಂದಿನಂತೆ ಪಳಗಿದ ನಟನೆ, ನಾಯಕಿ ಅದಿತಿಯದು ಸಹಜ, ತಾಜಾತನದ ಅಭಿನಯ. ಹೇಮಾ, ವೀಣಾ ಸುಂದರ್‌ ನಟನೆ ಮಸ್‌್ತ.

ಥಿಯೇಟರಿನಿಂದ ಹೊರಬರುವಾಗ ಅನಿಸಿದ್ದು: ನಿರ್ದೇಶಕರು ಹೆಚ್ಚಿನ ಕಥಾಹಂದರವನ್ನು ಎರಡನೇ ಭಾಗಕ್ಕೆ ಕಟ್ಟಿಟ್ಟು, ಇಲ್ಲಿ ಬರೀ ಮಸಾಲೆ ಡೈಲಾಗ್‌ಗಳನ್ನೇ ಹರಿಯಬಿಡುವ ಬದಲು ಪ್ರೇಕ್ಷಕರ ಬಗ್ಗೆ ಕೊಂಚ ಕರುಣೆ ತೋರಿಸಬಹುದಿತ್ತು.