Asianet Suvarna News Asianet Suvarna News

South Indian Hero Review ಇದು ಸಿನಿಮಾ ಕತೆ ಹೇಳುವ ಸಿನಿಮಾ

ಸಾರ್ಥಕ್‌, ಕಾಶಿಮಾ, ಊರ್ವಶಿ, ವಿಜಯ್‌ ಚೆಂಡೂರು, ಅಶ್ವಿನ್‌ ರಾವ್‌ ಪಲ್ಲಕ್ಕಿ, ಅಮಿತ್‌, ಗುರುದೇವ ನಾಗರಾಜ್‌ ಅಭಿನಯಿಸಿರುವ ಸೌತ್‌ ಇಂಡಿಯನ್‌ ಹೀರೋ ರಾಜ್ಯಾದ್ಯಂತ ಬಿಡುಗಡೆಯಾಗಿದೆ. 

Kannada film South Indian Hero review vcs
Author
First Published Feb 25, 2023, 9:30 AM IST

ಆರ್‌ ಕೇಶವಮೂರ್ತಿ

ದಕ್ಷಿಣ ಭಾರತದ ನಾಯಕ ನಟರು ಹೇಗಿರುತ್ತಾರೆ, ಅವರ ಸಿನಿಮಾಗಳು ಹುಟ್ಟಿಕೊಳ್ಳುವುದು ಹೇಗೆ, ತೆರೆ ಹಿಂದಿನ ಅವರ ಕತೆಗಳೇನು ಎಂಬಿತ್ಯಾದಿ ಕುತೂಹಲಕಾರಿ ಅಂಶಗಳ ಸುತ್ತ ಸಾಗುವ ಸಿನಿಮಾ ‘ಸೌತ್‌ ಇಂಡಿಯನ್‌ ಹೀರೋ’. ಹೆಸರು ನೋಡಿದಾಗಲೇ ಇದು ಸಿನಿಮಾದೊಳಗಿನ ಸಿನಿಮಾ ಕತೆ ಎಂಬುದು ನಿರೀಕ್ಷಿತವಾಗಿತ್ತು. ನಿರ್ದೇಶಕ ನರೇಶ್‌ಕುಮಾರ್‌ ಆ ನಿರೀಕ್ಷಿತ ಅಂಶಗಳನ್ನೇ ಕ್ರೋಢೀಕರಣ ಮಾಡಿಕೊಂಡು ಸಿನಿಮಾ ಕತೆ ಕಟ್ಟಿದ್ದಾರೆ. ಇದನ್ನು ಕತೆ ಎನ್ನುವುದಕ್ಕಿಂತ ಒಂದಿಷ್ಟುಕಟು ವಾಸ್ತವಗಳ ಚಿತ್ರಣ ಎನ್ನಬಹುದು. ಬೆಳೆದ ಹೀರೋಗಳ ಅಹಂ, ನಾನೇ ನಿಮ್ಮ ಹುಟ್ಟಿಗೆ ಕಾರಣ ಎನ್ನುವ ನಿರ್ದೇಶಕನ ಒದ್ದಾಟಗಳು, ದುಡ್ಡು ಮುಖ್ಯ ಎಂದುಕೊಳ್ಳುವ ನಿರ್ಮಾಪಕರು, ಹಿಂದೆ ಮುಂದೆ ಓಡಾಡುವ ಅಭಿಮಾನಿಗಳು, ಪರಸ್ಪರ ನಟರ ಮಧ್ಯೆ ವೈಮನಸ್ಸು, ಫ್ಯಾನ್ಸ್‌ ವಾರ್‌, ಸ್ಟಾರ್‌ಡಮ್‌... ಹೀಗೆ ಚಿತ್ರರಂದ ಒಳಗಿನ ಬಹಳಷ್ಟುವಿಷಯಗಳು ಬಂದು ಹೋಗುತ್ತವೆ. ಜತೆಗೆ ಪ್ರೇಮದ ಹೆಜ್ಜೆ ಗುರುತುಗಳನ್ನೂ ಕೂಡ ಸಿನಿಮಾ ಮೂಡಿಸುತ್ತದೆ.

ತಾರಾಗಣ: ಸಾರ್ಥಕ್‌, ಕಾಶಿಮಾ, ಊರ್ವಶಿ, ವಿಜಯ್‌ ಚೆಂಡೂರು, ಅಶ್ವಿನ್‌ ರಾವ್‌ ಪಲ್ಲಕ್ಕಿ, ಅಮಿತ್‌, ಗುರುದೇವ ನಾಗರಾಜ್‌

ನಿರ್ದೇಶನ: ನರೇಶ್‌ ಕುಮಾರ್‌

ರೇಟಿಂಗ್‌: 3

GOWLI REVIEW: ತಾಂತ್ರಿಕವಾಗಿ ಘರ್ಜಿಸುವ ಶ್ರೀನಗರ ಕಿಟ್ಟಿ 'ಗೌಳಿ'

ಸಿನಿಮಾ ನೋಡುತ್ತಿದ್ದಾಗ ಈಗಾಗಲೇ ತೆರೆ ಮೇಲೆ ಮಿಂಚಿದ, ಮಿಂಚುತ್ತಿರುವ ಸ್ಟಾರ್‌ ನಟರ ಆರಂಭದ ದಿನಗಳ ಅಥವಾ ಅವರಿಗೆ ಸಕ್ಸಸ್‌ ಕೊಟ್ಟಚಿತ್ರಗಳ- ತಿರುವುಗಳನ್ನು ನೆನಪಿಸುವ ದೃಶ್ಯಗಳನ್ನು ಹೇರಳವಾಗಿ ನೋಡಬಹುದು. ಕೆಲವು ಕಡೆಯಂತೂ ಹೀರೋ ಪಾತ್ರದ ಮೂಲಕ ಥೇಟು ಸ್ಟಾರ್‌ ಹೀರೋಗಳನ್ನು ಭಟ್ಟಿಇಳಿಸುವ ಮೂಲಕ ಸ್ಟಾರ್‌ಡಮ್‌ ಒಳಗೆ ಕೂತಿರುವ ಕತ್ತಲಿನ ಕಾಲು ಎಳೆದಿದ್ದಾರೆ ನಿರ್ದೇಶಕರು. ಸ್ಟಾರ್‌ಗಳಾಗಿ ಬೆಳದ ನಟರನ್ನು ರಾಜಕಾರಣಿಗಳು ಹೇಗೆ ಬಳಸಿಕೊಳ್ಳುತ್ತಾರೆ, ಇಂತ ಸ್ಟಾರ್‌ಗಳ ಹಿಂದೆ ಮಾಧ್ಯಮಗಳು ಹೇಗೆ ಸುದ್ದಿಯ ಸದ್ದು ಮಾಡುತ್ತವೆ ಎಂಬುದನ್ನೂ ಕೂಡ ಹೇಳಲಾಗಿದೆ. ಜತೆಗೆ ದೊಡ್ಡ ತಾರೆಗಳ ಪ್ರೇಮ ಕತೆಗಳು ಬೀದಿಗೆ ಬಂದರೆ ಏನಾಗುತ್ತದೆ ಎಂಬುದನ್ನೂ ತೆರೆ ಮೇಲೆ ನೋಡುವ ಅವಕಾಶವನ್ನು ನಿರ್ದೇಶಕರು ಕೊಟ್ಟಿದ್ದಾರೆ. ಹಾಗೆ ನೋಡಿದರೆ ಚಿತ್ರದಲ್ಲಿ ಹೇಳಿರುವ ಈ ಯಾವ ವಿಷಯಗಳು ಹೊಸದಲ್ಲ. ಚಿತ್ರರಂಗ- ನಟರು, ತಂತ್ರಜ್ಞರ ಸುತ್ತ ಕೇಳಿರುವ ಮತ್ತು ನೋಡಿರುವ ವಿಷಯಗಳೇ ಈ ಚಿತ್ರವಾಗಿದೆ ಎಂಬುದು ಸಿನಿಮಾದ ಪ್ಲಸ್‌ ಪಾಯಿಂಟ್‌.

Tanuja Movie Review: ಸಿಕ್ಕಷ್ಟುಸ್ಫೂರ್ತಿ, ಹೊಳೆದಷ್ಟುಪಾಠ

ನಾಯಕ ಸಾರ್ಥಕ್‌, ನಾಯಕಿ ಕಾಶಿಮಾ, ವಿಜಯ್‌ ಚೆಂಡೂರು ಪಾತ್ರಗಳು ಚಿತ್ರದಲ್ಲಿ ಮಿಂಚಿವೆ. ಆದರೆ, ಕೊನೆಗೆ ಚಿತ್ರರಂಗದೊಳಗಿನ ಎಲ್ಲ ಸಂಕಷ್ಟಗಳಿಗೂ ಅಭಿಮಾನಿಗಳೇ ಕಾರಣ ಎನ್ನುವಂತೆ ಕತೆ ಮುಗಿಸುವುದು ಅಷ್ಟುಸಮಂಜಸ ಅಲ್ಲ ಅನಿಸುತ್ತದೆ. ಉಳಿದಂತೆ ನಿರ್ದೇಶಕರು ಒಳ್ಳೆಯ ಕತೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

Follow Us:
Download App:
  • android
  • ios