ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯ ದೃಶ್ಯ 2 ಸಿನಿಮಾ ಹೇಗದೆ ಗೊತ್ತಾ? ರಾಜೇಂದ್ರ ಪೊನ್ನಪ್ಪನ ಜೀವನದ ಸೆಕೆಂಡ್‌ ಹಾಫ್‌ ಇದು. ಒಮ್ಮೆ ವಿಮರ್ಶೆ ಓದಿ...

ಆರ್‌. ಕೇಶವಮೂರ್ತಿ

ಎಂಟು ವರ್ಷಗಳ ಹಿಂದೆ ಒಂದು ಕೊಲೆ ಆಗಿತ್ತು. ಕೊಲೆ ಮಾಡಿದ್ದಾರೆ ಎನ್ನಲಾದ ರಾಜೇಂದ್ರ ಪೊನ್ನಪ್ಪನ ಕುಟುಂಬ ಈ ಪ್ರಕರಣದಿಂದ ಬಚಾವ್‌ ಆಗಿತ್ತು. ಸಾಕ್ಷಿಗಳನ್ನು ಸಂಗ್ರಹಿಸಿ ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ಪೊಲೀಸರು ಸೋತಿರುವುದು ಮಾತ್ರವಲ್ಲ, ಅವಮಾನಕ್ಕೊಳಗಾಗಿದ್ದರು. ಆದರೆ, ಎಂಟು ವರ್ಷಗಳ ಹಿಂದೆ ಈ ಕತೆಯನ್ನು ‘ದೃಶ್ಯ’ ಹೆಸರಿನಲ್ಲಿ ತೆರೆ ಮೇಲೆ ನೋಡಿದವರಿಗೆ ಹುಟ್ಟಿಕೊಂಡ ಪ್ರಶ್ನೆ ‘ಮುಂದೆ ರಾಜೇಂದ್ರ ಪೊನ್ನಪ್ಪನ ಕುಟುಂಬ ನೆಮ್ಮದಿಯಾಗಿರುತ್ತದೆಯೇ’ ಎಂಬುದು.

ಆ ಕುಟುಂಬ ನೆಮ್ಮದಿಯಾಗಿಲ್ಲ, ಕೊಲೆಯಾದ ವ್ಯಕ್ತಿಯ ದೇಹ ಅಸ್ಥಿಪಂಜರವಾಗಿದ್ದರೂ ಅಪರಾಧಿ ಮನೋಭಾವ ಮಾತ್ರ ದೂರವಾಗಿಲ್ಲ. ನಿತ್ಯ ಅದೇ ಭಯದಲ್ಲಿ ಬದುಕುತ್ತಿದ್ದಾರೆ ರಾಜೇಂದ್ರ ಪೊನ್ನಪ್ಪನ ಕುಟುಂಬ ಎನ್ನುತ್ತದೆ ‘ದೃಶ್ಯ 2’. ಹಾಗಾದರೆ ಈ ಭಯ ಎಲ್ಲಿಯವರೆಗೆ, ಈ ಪ್ರಕರಣಕ್ಕೆ ಅಂತ್ಯ ಇಲ್ಲವೆ ಎನ್ನುವ ಪ್ರೇಕ್ಷಕನ ಕೂಗಿಗೆ ರಾಜೇಂದ್ರ ಪೊನ್ನಪ್ಪ ಕಿವಿ ಕೊಟ್ಟರೋ ಏನೋ ‘ಈ ಕತೆಗೊಂದು ಅದ್ಭುತ ಕ್ಲೈಮ್ಯಾಕ್ಸ್‌ ಬೇಕು. ಇದುವರೆಗೂ ಅಂಥ ಕ್ಲೈಮ್ಯಾಕ್ಸ್‌ ನೋಡಿರಕೂಡದು’ ಎಂದು ರೈಟರ್‌ ಮುಂದೆ ಹೇಳುತ್ತಾರೆ ರಾಜೇಂದ್ರ ಪೊನ್ನಪ್ಪ. ರಾಜೇಂದ್ರ ಪೊನ್ನಪ್ಪನೇ ರೂಪಿಸುವ ಆ ಕ್ಲೈಮ್ಯಾಕ್ಸ್‌ ಏನು ಎನ್ನುವ ಕುತೂಹಲ ಇದ್ದರೆ ‘ದೃಶ್ಯ 2’ ಚಿತ್ರ ನೋಡಬೇಕು.

Drishya 2: ರಾಜೇಂದ್ರ ಪೊನ್ನಪ್ಪ ಕೌಶಲ್ಯತೆ ಮೈನವಿರೇಳಿಸುತ್ತದೆ ಎಂದ ಸಿಂಪಲ್ ಸುನಿ

ತಾರಾಗಣ: ಡಾ ರವಿಚಂದ್ರ ವಿ, ನವ್ಯಾ ನಾಯರ್‌, ಅನಂತ್‌ನಾಗ್‌, ಆರೋಹಿ ನಾರಾಯಣ್‌, ಪ್ರಮೋದ್‌ ಶೆಟ್ಟಿ, ಸಂಪತ್‌, ಸಾಧು ಕೋಕಿಲ, ಉನ್ನತಿ, ಆಶಾ ಶರತ್‌, ಶಿವಾಜಿ ಪ್ರಭು, ಶಿವರಾಮಣ್ಣ, ನಾರಾಯಣ ಸ್ವಾಮಿ, ಯತಿರಾಜ್‌, ಕೃಷ್ಣ ಹೆಬ್ಬಾಳೆ, ಕುರಿ ರಂಗ.

ನಿರ್ದೇಶನ: ಪಿ ವಾಸು

ರೇಟಿಂಗ್‌: 4

ಪೊಲೀಸರ ಪ್ರತಿಷ್ಠೆ, ತನ್ನ ಕುಟುಂಬವನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಮನೆಯ ಯಜಮಾನನ ಶಪಥÜ, ಒಬ್ಬ ರೈಟರ್‌, ಅಪರಾಧಿ ಮನೋಭಾವನೆ... ಇವಿಷ್ಟು ಅಂಶಗಳು ಚಿತ್ರಕಥೆಯಲ್ಲಿ ಮುಖಾಮುಖಿ ಆಗುತ್ತಾ ‘ದೃಶ್ಯ 2’ ಚಿತ್ರವನ್ನು ಹೊತ್ತು ಸಾಗುತ್ತವೆ. ಎಂದಿನಂತೆ ಇಲ್ಲೂ ರಾಜೇಂದ್ರ ಪೊನ್ನಪ್ಪನೇ ಕೇಂದ್ರಬಿಂದು. ಪೊಲೀಸರು ಒಂದಿಷ್ಟುಸಾಕ್ಷ್ಯಗಳನ್ನು ಸಂಗ್ರಹಿಸಿ, ಕಾನೂನು ಅನುಮತಿ ಪಡೆದು ಕೊಲೆಯಾದವನ ದೇಹ ಪತ್ತೆ ಮಾಡಲು ಮುಂದಾಗುತ್ತಾರೆ. ಆ ನಿರ್ಮಾಣದ ಹಂತದಲ್ಲಿದ್ದ, ಈಗ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಠಾಣೆಯಲ್ಲೇ ಮೃತ ದೇಹವನ್ನು ಹೂತಿರುವುದಾಗಿ ಸ್ವತಃ ರಾಜೇಂದ್ರ ಪೊನ್ನಪ್ಪನೇ ಒಪ್ಪಿಕೊಳ್ಳುತ್ತಾನೆ. ಇಲ್ಲಿಗೆ ಕತೆ ಮುಗಿಯಿತೇ ಎಂದರೆ ಇಲ್ಲ ಎನ್ನುತ್ತ ಹೊಸ ಟ್ವಿಸ್ಟ್‌ ಕೊಡುತ್ತಾನೇ ರಾಜೇಂದ್ರ ಪೊನ್ನಪ್ಪ.

Film Review: ಸಖತ್‌

ಒಂದು ಕ್ರೈಮ್‌ ಕತೆಗೆ ಬೇಕಾದ ಎಲ್ಲಾ ಥ್ರಿಲ್ಲಿಂಗ್‌ ಅಂಶಗಳನ್ನು ಅಗತ್ಯಕ್ಕೆ ತಕ್ಕಂತೆ ಜೋಡಿಸಿಕೊಂಡು ಪಿ ವಾಸು ಅವರು ‘ದೃಶ್ಯ 2’ ಚಿತ್ರವನ್ನು ಕಟ್ಟುತ್ತಾ ಹೋಗುತ್ತಾರೆ. ಮೂಲ ಚಿತ್ರಕ್ಕೂ ಧಕ್ಕೆ ಆಗಬಾರದು ಎನ್ನುವ ಎಚ್ಚರಿಕೆಯಲ್ಲೇ ಅವರು ಇಡೀ ಸಿನಿಮಾ ರೂಪಿಸಿದ್ದಾರೆ. ರೈಟರ್‌ ಪಾತ್ರಧಾರಿ ಅನಂತ್‌ನಾಗ್‌, ಕ್ರಿಮಿನಲ್‌ ಪಾತ್ರಧಾರಿ ಸಂಪತ್‌, ಆಸ್ಪತ್ರೆ ಸಿಬ್ಬಂದಿ ಯತಿರಾಜ್‌... ಹೀಗೆ ಯಾವ ಪಾತ್ರ ಕತೆಗೆ ಅನಗತ್ಯ, ಹೆಚ್ಚುವರಿ ವಿಕೆಟ್‌ಗಳು ಎಂದು ಭಾವಿಸಿರುತ್ತೇವೋ ಅವರೇ ಕತೆಗೆ ಮೇಜರ್‌ ತಿರುವು ಕೊಡುತ್ತಾರೆ. ಯಾಕೆಂದರೆ ರಾಜೇಂದ್ರ ಪೊನ್ನಪ್ಪ ರೂಪಿಸಿರುವ ಆ ಹೊಸ ಕ್ಲೈಮ್ಯಾಕ್ಸ್‌ನ ನಿಜವಾದ ಪಾತ್ರಧಾರಿಗಳೇ ಇವರು! ಹೀಗಾಗಿ ಚಿತ್ರದ ನಾಯಕ ಡಾ ರವಿಚಂದ್ರ ವಿ ಅವರ ಜತೆಗೆ ಈ ಎಲ್ಲ ಸಣ್ಣಪುಟ್ಟಪಾತ್ರಧಾರಿಗಳು ಕತೆಯ ಭಾಗವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ. ಪೊಲೀಸ್‌ ಅಧಿಕಾರಿ ಪ್ರಮೋದ್‌ ಶೆಟ್ಟಿ, ತಾಯಿ ಪಾತ್ರದಲ್ಲಿ ನವ್ಯಾ ನಾಯರ್‌, ಮಕ್ಕಳಾಗಿ ಆರೋಹಿ ನಾರಾಯಣ್‌, ಉನ್ನತಿ ಅವರವರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಡಾ ರವಿಚಂದ್ರ ವಿ ಅವರ ನಟನೆ, ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್‌.