userpic
user icon
0 Min read

ಶೆಹನಾಜ್ ಪರವೀನ್ ಎಂಬ ಪಾಕಿಸ್ತಾನಿ ಮಹಿಳೆಯ ಸತ್ಯ ಕತೆಯನ್ನು ಆಧರಿಸಿದ ಚಿತ್ರವೇ ಕಾಫಿರ್

Kaafir Review The film is based on the true story of a Pakistani woman named Shehnaaz Parveen mrq
Kaafir

Synopsis

Kaafir Movie: ಶೆಹನಾಜ್ ಪರವೀನ್ ಅವರ ಸತ್ಯ ಕಥೆಯನ್ನು ಆಧರಿಸಿದ ಕಾಫಿರ್ ಸಿನಿಮಾವು, ಪಾಕಿಸ್ತಾನಿ ಮಹಿಳೆ ಕೈನಾಜ್ ಅಕ್ತರ್ಳ ಬದುಕಿನ ಕಥೆಯನ್ನು ಹೇಳುತ್ತದೆ. ಗಂಡನಿಂದ ತಿರಸ್ಕರಿಸಲ್ಪಟ್ಟು, ಭಾರತದ ಜೈಲಿನಲ್ಲಿ ಆಶ್ರಯ ಪಡೆಯುವ ಆಕೆಯ ಹೋರಾಟದ ಚಿತ್ರಣವಾಗಿದೆ.

ಚಿತ್ರ: ಕಾಫಿರ್
ತಾರಾಗಣ: ದಿಯಾಮಿರ್ಜಾ, ಮೋಹಿತ್ ರೈನಾ
ನಿರ್ದೇಶನ: ಸೋನಂ ನಾಯರ್
ಒಟಿಟಿ: ಝೀ 5

ಕೈನಾಜ್ ಅಕ್ತರ್ ಪಾಕಿಸ್ತಾನದ ಹೆಣ್ಣುಮಗಳು. ತಂದೆತಾಯಿ ನೋಡಿದ ಹುಡುಗನನ್ನು ಮದುವೆಯಾಗಿರುತ್ತಾಳೆ. ಗಂಡ ಹೆಂಡತಿ ಸುಖವಾಗಿದ್ದರೂ ಮಕ್ಕಳಾಗಿರುವುದಿಲ್ಲ. ಒಂದೂವರೆ ವರ್ಷವಾದರೂ ಮಕ್ಕಳಾಗದಾಗ ಇವಳ ತಂದೆತಾಯಿಯನ್ನು ಕರೆಸಿ ಅವಳನ್ನು ತವರಿಗೆ ಕಳಿಸಿಬಿಡುತ್ತಾರೆ. ಈ ಹುನ್ನಾರವನ್ನು ಅರಿಯದೆ ಖುಷಿಯಿಂದ ಒಂದೆರಡು ದಿನ ಇದ್ದು ಹೋಗಲು ಬಂದ ಕೈನಾಜ್ ಗೆ ತಾಯಿ ಇಂದ ವಿಷಯ ತಿಳಿದು ಅವಕ್ಕಾಗುತ್ತಾಳೆ. . ತಾನು ಗಂಡನ ಮನೆಗೆ ಮರಳಿ ಹೋಗುವೆನೆಂದು ವಾಪಸು ಬಂದ ಕೈನಾಜ್ ಗೆ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭ ಅಚ್ಚರಿಯಲ್ಲಿ ದೂಡುತ್ತದೆ. ಮನೆ ಒಳಗೆ ಕಾಲಿರಿಸಿದಾಗ ಗಂಡನ ಇನ್ನೊಂದು ಮದುವೆಯ ವಿಷಯ ತಿಳಿದು ಆಘಾತಕ್ಕೆ ಒಳಗಾಗುತ್ತಾಳೆ. ಅಲ್ಲೆ ಇದ್ದ ಗಂಡನನ್ನು ಕರೆದು ನಾನಾ ರೀತಿಯಲ್ಲಿ ಪ್ರಶ್ನಿಸಿದರೂ ಅವನಿಂದ ಸಮಾಧಾನಕರವಾದ ಉತ್ತರ ದೊರೆಯುವುದಿಲ್ಲ. 'ನಿನ್ನಿಂದ ನನಗೆ ಮಕ್ಕಳಾಗಿಲ್ಲ ನೀನು ಬಂಜೆ ಅದಕ್ಕೆ ನಾನು ಮರುಮದುವೆ ಆಗುತ್ತಿದ್ದೇನೆ ನೀನು ಇಲ್ಲಿಂದು ಹೋಗು ನಿನಗೆ ಇಲ್ಲಿ ಜಾಗವಿಲ್ಲ' ಎಂದು ಅವಳನ್ನು ಮನೆಯಿಂದ ಹೊರತಳ್ಳುತ್ತಾನೆ.

ಗಂಡನಿಂದ ಪರಿತ್ಯಕ್ತಳಾಗಿ ಹೊರಬರುವ ಕೈನಾಜ್ ಳಿಗೆ ಜೀವನವೇ ಕತ್ತಲಾದಂತೆ ಅನಿಸುತ್ತದೆ. ತನ್ನ ತಂದೆಯ ಮನೆಗೆ ಹೋದರೆ ಅಲ್ಲಿ ತಂದೆತಾಯಿ ಇಬ್ಬರೂ ಕೊರಗುತ್ತಾರೆ ಎಂದು ಅವಳು ಅಲ್ಲಿಗೆ ಹೋಗಬಯಸುವುದಿಲ್ಲ. ಹಾಗೆಯೇ ದಿಕ್ಕು ತೋಚದೆ ನಡೆದು ಬರುತ್ತಿದ್ದಾಗ ಅವಳಿಗೆ ತಾನು ಬದುಕಿದ್ದೂ ಪ್ರಯೋಜನವಿಲ್ಲ ಪ್ರಾಣ ಕಳೆದುಕೊಳ್ಳಬೇಕು ಎನಿಸುತ್ತದೆ. ಅಲ್ಲಿಯೇ ನದಿಯಲ್ಲಿ ಬೀಳುತ್ತಾಳೆ. ಆದರೆ ದುರದೃಷ್ಟವಶಾತ್ ಅವಳು ಸಾಯದೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಭಾರತದ ಗಡಿ ಪ್ರದೇಶದಲ್ಲಿ ಜ್ಞಾನವಿಲ್ಲದೆ ಬಿದ್ದಿರುತ್ತಾಳೆ. ಬಾರತದ ಗಡಿಯನ್ನು ಕಾಯುವ ಸೈನಿಕರ ಕಣ್ಣಿಗೆ ಬೀಳುವ ಅವಳನ್ನು ಬಂಧಿಸಿ ಅವಳೊಬ್ಬ ಉಗ್ರಗಾಮಿ ಇರಬಹುದೆಂದು ಅವಳನ್ನು ಜಮ್ಮು ಕಾಶ್ಮೀರದ ಸೆರೆಮನೆಗೆ ಕಳಿಸುತ್ತಾರೆ. ಅವಳು ಯಾರು ಏನು ಎಂಬ ಯಾವ ಸಾಕ್ಷಿಯೂ ಸಿಗದೆ ಅವಳಿಗೆ ಒಂದೂವರೆ ವರ್ಷ ಶಿಕ್ಷೆಯಾಗಿ ನಂತರವೂ ಅವಳ ಬಿಡುಗಡೆ ಆಗದೆ ಎಂಟು ವರ್ಷಗಳ ಕಾಲ ಕೈನಾಜ್ ಸೆರೆಮನೆಯಲ್ಲೇ ಇರಬೇಕಾಗುತ್ತದೆ.

ತಾನು ಬಂಜೆ ಅಲ್ಲವೆಂಬ ಸತ್ಯ:

ಅವಳು ಸೆರೆಮನೆಯಲ್ಲಿ ಇದ್ದಾಗ ತನ್ನ ತಂದೆತಾಯಿಗೆ ಪತ್ರ ಬರೆದು ಅದನ್ನು ಪೋಸ್ಟ್ ಮಾಡಲು ಅಲ್ಲಿನ ಕಾವಲುಗಾರನಿಗೆ ಕೊಡುತ್ತಿರುತ್ತಾಳೆ. ಅವನು ಪೋಸ್ಟ್ ಮಾಡುವ ಹಾಗೆ ಅವಳನ್ನು ನಂಬಿಸಿ ಅವಳ ಸ್ನೇಹ ಸಂಪಾದಿಸಿ ಅವಳನ್ನು ಬಲವಂತವಾಗಿ ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಾನೆ. ಇದರಿಂದ ಗರ್ಭಿಣಿಯಾಗುವ ಕೈನಾಜ್ ಗೆ ಜೈಲಿನ ಅಧಿಕಾರಿಗಳಿಂದ ತನ್ನ ಅತ್ಯಾಚಾರವಾಗಿದ್ದು ಯಾರಿಗೂ ಹೇಳಬಾರದೆಂಬ ಎಚ್ಚರಿಕೆ ಸಿಗುತ್ತದೆ. ಕೈನಾಜ್ ಒಂದು ಹೆಣ್ಣುಮಗುವಿನ ತಾಯಿಯಾಗುತ್ತಾಳೆ. ಅವಳಿಗೆ ಹೀಗೆ ಅತ್ಯಾಚಾರದಿಂದ ಮಗುವಾದದ್ದು ಬೇಸರವಾದರೂ ತಾನು ಬಂಜೆ ಅಲ್ಲವೆಂಬ ಸತ್ಯ ಎಷ್ಟೋ ಸಮಾಧಾನ ನೀಡುತ್ತದೆ. ಜೈಲಿನ ಏಕತಾನತೆಯ ಜೀವನದಲ್ಲಿ ಕೈನಾಜ್‌ಗೆ ಅವಳ ಮಗಳು ಒಂದು ಆಶಾಜ್ಯೋತಿಯಂತೆ ಕಾಣುತ್ತಾಳೆ. ತನ್ನ ನೀರಸ ಬದುಕಿನಲ್ಲಿ ಮಗಳ ಆಟಪಾಟ ನೋಡುತ್ತಾ ಕೊಂಚವಾದರೂ ಜೀವನಪ್ರೀತಿ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ವೇದಾಂತ್ ಕಾಶ್ಮೀರದಲ್ಲಿ ಒಬ್ಬ ಪತ್ರಕರ್ತ. ಅವನ ತಂದೆ ನಿವೃತ್ತ ಪೊಲೀಸ್ ಅಧಿಕಾರಿ. ವೇದಾಂತ್ ಅಣ್ಣ ವೀರ್ ನನ್ನು ಕಾಶ್ಮೀರದಲ್ಲಿ ಪಾಕಿಸ್ತಾನಿ ಉಗ್ರವಾದಿಗಳು ಕೊಂದುಹಾಕಿರುತ್ತಾರೆ. ಹಾಗಾಗಿ ವೇದಾಂತನ ತಂದೆಗೆ ವೇದಾಂತ್ ತನ್ನ ಪತ್ರಿಕೆಯಲ್ಲಿ ಬರೆದ ವರದಿಗಳಿಂದ ಉಗ್ರವಾದಿಗಳು ತನ್ನ ಹಿರಿಯ ಮಗನನ್ನು ಕೊಂದಿದ್ದಾರೆ ಎಂಬ ಕೋಪ ಇರುತ್ತದೆ. ಅದನ್ನು ಅವನು ಬಾರಿಬಾರಿಗೂ ವೇದಾಂತನ ಬಳಿ ಹೇಳುತ್ತಿರುತ್ತಾನೆ. ಇದರಿಂದ ವೇದಾಂತನಿಗೂ ತಪ್ಪಿತಸ್ಥ ಭಾವನೆ ಇರುತ್ತದೆ. ವೇದಾಂತನ ತಂದೆಗೆ ಪಾಕಿಸ್ತಾನಿಯವರನ್ನು ಕಂಡರೆ ಆಗುವುದಿಲ್ಲ. 'ಅವರೆಲ್ಲರೂ ಉಗ್ರವಾದಿಗಳೇ ಯಾರನ್ನೂ ನಂಬಬಾರದು' ಎಂದು ಬಲವಾಗಿ ವಾದಿಸುತ್ತಿರುತ್ತಾನೆ.

ಒಮ್ಮೆ ವೇದಾಂತ್ ಕಾಶ್ಮೀರದಲ್ಲಿ ಉಗ್ರರು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಒಂದಷ್ಟು ಮಂದಿ ಅಮಾಯಕರನ್ನು ಬಿಡಿಸಲು ಪೊಲೀಸರಿಗೆ ಸಹಾಯ ಮಾಡುತ್ತಾನೆ. ಇದು ಮಾರನೇ ದಿನ ದೊಡ್ಡ ಸುದ್ದಿಯಾಗಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗುತ್ತದೆ. ಇದರಿಂದ ಖುಷಿಯಾದ ಸಂಪಾದಕರು ವೇದಾಂತನಿಗೆ ಇನ್ನಷ್ಟು ಮಾನವಾಸಕ್ತಿ ವರದಿಗಳನ್ನು ಬರೆಯಲು ಪ್ರಚೋದಿಸುತ್ತಾರೆ. ಇದರಿಂದ ಉತ್ಸಾಹಿತನಾದ ವೇದಾಂತ್ ಸುದ್ದಿಗಾಗಿ ಹುಡುಕುತ್ತಿದ್ದಾಗ ಕೈನಾಜ್‌ಳ ಬಗ್ಗೆ ಓದುತ್ತಾನೆ. ಅವನಿಗೆ ಅಯ್ಯೋಪಾಪ ಎನಿಸುತ್ತದೆ. ತನ್ನ ಸೆರೆವಾಸದ ಅವಧಿ ಮುಗಿದಿದ್ದರೂ ಬಿಡುಗಡೆಯಾಗದ ಕೈನಾಜ್ ಬಗ್ಗೆ ಅವಳ ಮುಗ್ಧ ಮಗುವಿನ ಬಗ್ಗೆ ಅವನಿಗೆ ಮರುಕ ಮೂಡುತ್ತದೆ. ಕರುಣೆಯಿಂದ ದ್ರವಿಸಿಹೋಗುತ್ತಾನೆ. ಇವರಿಬ್ಬರನ್ನೂ ಹೇಗಾದರೂ ಬಿಡುಗಡೆ ಮಾಡಿಸ ಬೇಕೆಂದು ನಿರ್ಣಯಿಸುತ್ತಾನೆ.

ಏನೂ ತಪ್ಪು ಮಾಡದ ಮಗಳು:

ಸೆರೆಮನೆಗೆ ಹೋಗಿ ಕೈನಾಜಳನ್ನೂ ಅವಳ ಮಗುವನ್ನೂ ಭೇಟಿ ಮಾಡಿದಾಗ ಅವನಿಗೆ ಆಘಾತವಾಗುತ್ತದೆ. ಏಕೆಂದರೆ ಕೈನಾಜ್ ನದಿಯ ಬಳಿ ಸಿಕ್ಕಿದಾಗ ವೇದಾಂತ್ ಅಲ್ಲಿಯೇ ಇರುತ್ತಾನೆ. ಅರೆಬರೆ ಜ್ಞಾನದಲ್ಲಿ ಕೈನಾಜ್ ತಾನು ಸಾಯಬೇಕು ತನ್ನನ್ನು ಪುನಃ ನದಿಯಲ್ಲೇ ಹಾಕಿ ಎಂದು ಬಡಬಡಿಸುವುದನ್ನೂ ಕೇಳಿಯೂ ಇವಳು ಉಗ್ರಗಾಮಿ ಇರಬಹುದು ಇವಳ ಮಾತುಗಳನ್ನು ನಂಬಬೇಡಿ ಎಂದು ಹೇಳಿ ಪೊಲೀಸರಿಗೆ ಶಂಕೆ ಹುಟ್ಟಿಸಿ ಕೈನಾಜಳನ್ನು ಸೆರೆಮನೆಗೆ ಕಳಿಸಲು ವೇದಾಂತ್ ಕೂಡ ಪರೋಕ್ಷವಾಗಿ ಕಾರಣವಾಗಿರುತ್ತಾನೆ. ಈಗ ವೇದಾಂತನಿಗೆ ಕೈನಾಜ್ ಹಾಗೂ ಅವಳ ಏನೂ ತಪ್ಪು ಮಾಡದ ಮಗಳನ್ನು ಸೆರೆಯಿಂದ ಮುಕ್ತಗೊಳಿಸಿ ಅವರ ದೇಶಕ್ಕೆ ಕಳಿಸಬೇಕು ಹಾಗಾದರೂ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎನಿಸುತ್ತದೆ.

ಕೈನಾಜಳನ್ನು ಭೇಟಿಮಾಡಿ ಅವಳ ವಿವರಗಳನ್ನು ಕೇಳಿ ಅವಳ ಫೈಲ್ ತಯಾರಿಸುತ್ತಾನೆ. ತನಗೆ ಗೊತ್ತಿರುವ ವಕೀಲರನ್ನೆಲ್ಲ ಭೇಟಿ ಮಾಡಿ ಕೈನಾಜಳಿಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಳ್ಳುತ್ತಾನೆ. ಯಾವ ಲಾಯರೂ ಆಸಕ್ತಿ ತೋರುವುದಿಲ್ಲ. ಕೊನೆಗೆ ತಾನೆ ವಕೀಲಿಕೆ ಓದಿದ್ದರಿಂದ ತಾನೇ ಇವರ ಕೇಸ್ ವಾದಿಸಬೇಕೆಂದು ನಿರ್ಧರಿಸಿ ತನ್ನ ಪತ್ರಿಕೋದ್ಯಮ ವೃತ್ತಿಗೆ ರಾಜಿನಾಮೆ ಕೊಟ್ಟು ಲಾಯರ್ ಆಗಿ ಕೈನಾಜಳ ಕೇಸು ದಾಖಲಿಸುತ್ತಾನೆ. ಕೈನಾಜಳು ಉಗ್ರಗಾಮಿ ಅಲ್ಲ ಅವಳು ಪಾಕಿಸ್ತಾನನದ ಪ್ರಜೆ. ಅಲ್ಲಿಂದ ಅರಿವಿಲ್ಲದೆ ಗಡಿರೇಖೆ ದಾಟಿ ಭಾರತಕ್ಕೆ ಬಂದವಳು ಅವಳ ತಪ್ಪಿಲ್ಲದೆ ಅವಳು ಎಂಟು ವರ್ಷ ಶಿಕ್ಷೆ ಅನುಭವಿಸಿದ್ದಾಳೆ. ಗಡಿರೇಖೆ ದಾಟಿದ್ದೇ ತಪ್ಪಾದರೆ ಏನೂ ತಪ್ಪು ಮಾಡದ ಅವಳ ಮಗುವಿಗೇಕೆ ಶಿಕ್ಷೆ ಎಂದು ವಾದಿಸುತ್ತಾನೆ. ಅವಳು ಸೆರೆವಾಸದಲ್ಲಿ ಇದ್ದಾಗ ಅವಳ ಮೇಲೆ ಅತ್ಯಾಚಾರ ಮಾಡಿದ ಕಾವಲುಗಾರನನ್ನೂ ಕರೆಸುತ್ತಾನೆ. ಕಾವಲುಗಾರ ತಾನು ಅತ್ಯಾಚಾರ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ.. ಅವನಿಗೆ ಶಿಕ್ಷೆಯಾಗುತ್ತದೆ. ಪ್ರಾಸಿಕ್ಯೂಷನ್ ವಕೀಲೆ ಕೈನಾಜ್ ಒಬ್ಬ ಉಗ್ರಗಾಮಿ ಎಂದು ಎಷ್ಟೇ ವಾದಿಸಿದರೂ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಸೋಲುತ್ತಾಳೆ. ಮಾನವೀಯತೆಯ ಆದಾರದ ಮೇಲೆ ವಾದ ಮಾಡಿದ ವೇದಾಂತ್ ಈ ಕೇಸ್ ಗೆಲ್ಲುವಲ್ಲಿ ಸಫಲನಾಗುತ್ತಾನೆ. ನ್ಯಾಯಾಧೀಶರು ಕೈನಾಜ್‌ಳನ್ನು ಗೌರವದಿಂದ ಅವಳ ದೇಶಕ್ಕೆ ಕಳುಹಿಸಿಕೊಡಬೇಕೆಂದು ತೀರ್ಮಾನ ಹೇಳುತ್ತಾರೆ.

ಎದೆಗವುಚಿಕೊಂಡು ಭಾರತಕ್ಕೆ ಬರ್ತಾಳೆ

ಕೈಣಾಜ್ ಇದು ನಿಜವೊ ಸುಳ್ಳೊ ಎಂದು ನಂಬಲು ಸಾಧ್ಯವಾಗದ ಒಂದು ಸಿಹಿ ಆಘಾತ. ತಾನು ತನ್ನ ದೇಶಕ್ಕೆ ಹೋಗಬಹುದು ತಂದೆ ತಂದೆತಾಯಿಯನ್ನು ನೋಡಬಹುದು ಎಂಬ ಯೋಚನೆಯೇ ಅವಳನ್ನು ಪುಳಕಿತಳನ್ನಾಗಿ ಮಾಡುತ್ತದೆ. ಸೆರೆಯಿಂದ ಬಿಡುಗಡೆಗೊಂಡ ಕೈನಾಜ್ ಮಗುವಿನೊಂದಿಗೆ  ಪೊಲೀಸ್ ಜೀಪಿನಲ್ಲಿ ವಾಘಾ ಗಡಿಗೆ ಬರುತ್ತಾಳೆ. ಜೊತೆಯಲ್ಲಿ ವೇದಾಂತ್ ಕೂಡಾ ಇರುತ್ತಾನೆ ಆದರೆ ತಾನೊಂದು ಬಗೆದರೆ ಎಂಬಂತೆ ವಾಘಾ ಗಡಿಯಲ್ಲಿ ಪಾಕಿಸ್ತಾನಿ ಮಿಲಿಟರಿಯವರು ನೀನು ಮಾತ್ರ ಬರಬಹುದು ಮಗು ಬರುವ ಹಾಗಿಲ್ಲ ಏಕೆಮದರೆ ಮಗು ಭಾರತದಲ್ಲಿ ಹುಟ್ಟಿದೆ ಅದು ಭಾರತದ ಪ್ರಜೆಯಾಗಿದೆ ಎನ್ನುತ್ತಾರೆ. ಕೈನಾಜ್ ಹಾಗೂ ವೇದಾಂತ್ ಗೆ ಆಘಾತವಾಗುತ್ತದೆ. ಮಗುವನ್ನು ತನ್ನ ಜೊತೆ ಕರೆದೊಯ್ಯಲು ಬಿಡಿ ಎಂದು ಗಡಿ ಭದ್ರತಾ ಪಡೆಯನ್ನು ಅಂಗಲಾಚಿ ಬೇಡಿಕೊಂಡರೂ ಅವರು ಒಪ್ಪುವುದಿಲ್ಲ. ವಿಧಿಯಿಲ್ಲದೆ ಕೈನಾಜ್ ತನ್ನ ಮಗುವನ್ನು ಎದೆಗವುಚಿಕೊಂಡು ಭಾರತದ ಗಡಿಗೇ ವಾಪಸ್ಸು ಬರುತ್ತಾಳೆ. ವೇದಾಂತ್ ಅವಳನ್ನು ಈ ಸಮಸ್ಯೆ ಪರಿಹಾರ ಆಗುವವರೆಗೂ ಒಂದು  ಮನೆಯಲ್ಲಿ ಇರಿಸುತ್ತಾನೆ.

ಇದನ್ನೂ ಓದಿ:  ಬೇರೆಯವಳು ಬಂದು ನಾನೇ ನಿನ್ನ ಹೆಂಡತಿ ಅಂದ್ಳು? ಮಗಳೂ ಒಪ್ಪಿ ಇವಳೇ ಅಮ್ಮ ಅಂದ್ಲು?  ಸೀಕ್ರೆಟ್ ಕಥೆಯ ಸಿನಿಮಾ

ಅವಳ ಕಡತ ತೆಗೆದುಕೊಂಡು ಪಾಕಿಸ್ತಾನ ರಾಯಭಾರ ಕಚೇರಿ ಮತ್ತು ಇನ್ನೂ ಬೇರೆಬೇರೆ ಕಡೆ ಅಲೆಯುತ್ತಾನೆ. ಎಲ್ಲಿಯೂ ಆಶಾದಾಯಕ ಉತ್ತರ ಸಿಗುವುದಿಲ್ಲ. ಕೊನೆಗೆ ಭಾರತದ ವಿಧೇಶಾಂಗ ಕಚೇರಿಯಲ್ಲಿ ಒಂದು ಸುಳಿವು ನೀಡುತ್ತಾರೆ. ಅದೆಂದರೆ ಪಾಕಿಸ್ತಾನಿ ವಿದೇಶಾಂಗ ಸಚಿವರು ಭಾರತಕ್ಕೆ ಬರುವವರಿದ್ದಾರೆ ಅವರ ಔತಣಕೂಟದಲ್ಲಿ ನೀವು ಅವರನ್ನು ಭೇಟಿ ಮಾಡುವ ಅವಕಾಶ ಮಾಡಿಕೊಡುತ್ತೇವೆ. ಅವರು ಒಪ್ಪಿದರೆ ಬಾಕಿ ಪ್ರಕ್ರಿಯೆಗಳು ಬೇಗನೆ ಪರಿಹಾರವಾಗಿ ಕೈನಾಜ್ ತನ್ನ ದೇಶ ಸೇರಿಕೊಳ್ಳಬಹುದು ಎನ್ನುತ್ತಾರೆ.

ಈ ಮಧ್ಯೆ ವೇದಾಂತ್ ಪಾಕಿಸ್ತಾನದಲ್ಲಿ  ಇರುವ ಕೈನಾಜ್‌ಳ ಪೋಷಕರ ಮನೆಯ ಫೋನ್ ನಂಬರನ್ನು ಕಂಡುಹಿಡಿದು  ಅವಳಿಂದ ಫೋನ್ ಮಾಡಿಸುತ್ತಾನೆ. ಕೈನಾಜಳ ತಾಯಿ ಮಾತನಾಡಿ ಸಂತೋಷ ವ್ಯಕ್ತಪಡಿಸುತ್ತಾರೆ. 'ಆದಷ್ಟು ಬೇಗನೇ ಮನೆಗೆ ಬಾ ಮಗಳೇ' ಎನ್ನುತ್ತಾರೆ. ಅದೊಂದು ಭಾವುಕ ಸನ್ನಿವೇಶ. ನೋಡುವ ನಮ್ಮ ಕಣ್ಣೂ ಒದ್ದೆಯಾಗುತ್ತದೆ. ಕೈನಾಜಳ ಜೊತೆ ಒಡನಾಡುತ್ತಾ ನಿಧಾನವಾಗಿ ವೇದಾಂತ್ ಮನಸಿನಲ್ಲೇ ಅವಳನ್ನು ಪ್ರೀತಿಸಲು ಶುರು ಮಾಡುತ್ತಾನೆ. ಕೈನಾಜಳಿಗೆ ಇದರ ಅರಿವಾದರೂ ಅವಳಿಗೆ ತನ್ನ ದೇಶಕ್ಕೆ ತನ್ನ ಪೋಷಕರ ಬಳಿ ಹೋಗುವುದೇ ಮುಖ್ಯವಾಗುತ್ತದೆ. ತಪ್ಪೇ ಮಾಡದೆ ಖೈದಿಯಾಗಿ ಲೈಂಗಿಕ ದೌರ್ಜನ್ಯೆಕ್ಕೆ ಒಳಗಾಗಿ ಎಂಟು ವರ್ಷ ಸೆರೆವಾಸ ಅನುಭವಿಸಿದ ಅವಳಿಗೆ ಭಾರತದಲ್ಲಿ ಇರುವ ಮನಸ್ಸಿಲ್ಲ. ಅದೂ ಅಲ್ಲದೆ ಅವಳು ಹಾಗೆ ಭಾರತದಲ್ಲಿ ಇದ್ದು ಬಿಟ್ಟರೆ ವೇದಾಂತ್ ಹೋರಾಟ ಮಾಡಿ ಅವಳನ್ನು ಜೈಲಿನಿಂದ ಬಿಡಿಸಿದ್ದಕ್ಕೆ ಫಲವೇನು? ಕಾನೂನು ಪ್ರಕಾರವಾಗಿಯೂ ಅವಳು ಇಲ್ಲಿರುವ ಹಾಗಿಲ್ಲ ಭಾರತದಿಂದ ಹೋಗಲೇಬೇಕು. ಇದರ ಅರಿವಿದ್ದ ಕೈನಾಜ್ ತನ್ನ ಭಾವನೆಗಳನ್ನು ನಿಗ್ರಹಿಸಿಕೊಳ್ಳುತ್ತಾಳೆ. 

ಇದನ್ನೂ ಓದಿ: ವಿಚ್ಛೇದನ ಬಯಸಿದ್ದ ಜೋಡಿ ಮತ್ತೆ ಒಂದಾದಾಗ: ದೋ ಔರ್ ದೋ ಪ್ಯಾರ್ ರಿವ್ಯೂ

ಪಾಕಿಸ್ತಾನದ ವಿದೇಶಾಂಗ ಸಚಿವರು ಬಂದಾಗ ವೇದಾಂತ್ ಮತ್ತು ಕೈನಾಜ್ ಅವರನ್ನು ಸರ್ಕಾರದ ಔತಣಕೂಟದಲ್ಲಿ ಭೇಟಿ ಮಾಡುತ್ತಾರೆ. ಅವರ ಅಹವಾಲು ಎಲ್ಲವನ್ನು ಕೇಳಿಸಿಕೊಳ್ಳುವ ಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. 'ನಾನು ಪಾಕಿಸ್ತಾನದಳಾದರೂ ನೀವು ನನಗೆ ಸಹಾಯ ಮಾಡುವುದಿಲ್ಲವೇ ನಾನೇನು ತಪ್ಪು ಮಾಡಿದ್ದೇನೆ? ನಮ್ಮ ದೇಶವೇ ನಮಗೆ ಸಹಾಯ ಮಾಡಿದಿದ್ರೆ ನಮ್ಮ ದೇಶಕ್ಕೆ ನನ್ನವರನ್ನು ಸೇರಲು ನಾನು ಹೇಗೆ ಹೋಗುವುದು' ಎಂದು ನೋವಿನಿಂದ ನುಡಿದ ಕೈನಾಜ್ ಮಾತುಗಳನ್ನು ಟಿವಿಯವರು ರೆಕಾರ‍್ಡ್ ಮಾಡಿ ಟೆಲಿಕಾಸ್ಟ್ ಮಾಡಿಬಿಡುತ್ತಾರೆ. ಈಗ ಪಾಕಿಸ್ತಾನದ ವಿದೇಶಾಂಗ ಕಚೇರಿಯವರು ಕೈನಾಜಳಿಗೆ ಸಹಾಯ ಮಾಡಲೇ ಬೇಕಾಗುತ್ತದೆ. ಹೀಗೆ ತಾನು ಹಾಗೂ ತನ್ನ ಮಗಳು ಇಬ್ಬರಿಗೂ ಪಾಕಿಸ್ತಾನಕ್ಕೆ ಹೋಗುವ ಪರವಾನಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವ  ಕೈನಾಜ್ ಅಂತಿಮವಾಗಿ ಭಾರತದ ಗಡಿದಾಟಿ ತನ್ನ ದೇಶವಾದ ಪಾಕಿಸ್ತಾನಕ್ಕೆ ಕಾಲಿಡುತ್ತಾಳೆ. ಅವಳಿಗೆ ಬೈಬೈ ಹೇಳುವ ವೇದಾಂತ್ ವಿಷಾದಭಾವದಲ್ಲಿ ಅವಳು ತವರು ದೇಶಕ್ಕೆ ಮರಳುವುದನ್ನು ನೋಡುತ್ತಾ ನಿಂತುಬಿಡುತ್ತಾನೆ.

ಇದು ಸತ್ಯಕತೆಯನ್ನು ಆಧರಿಸಿದ ಚಿತ್ರ. ಚಿತ್ರ ನೋಡುವಾಗ ಗಡಿ ಪ್ರದೇಶಗಳಲ್ಲಿ ವಾಸಿಸುವುದು ಎಷ್ಟು ಅಪಾಯ ಎಂದು ಅನಿಸುತ್ತದೆ. ಅನಿವಾರ್ಯವೋ ಅಜ್ಞಾನವೋ ಅಥವಾ ಆಕಸ್ಮಿಕವೋ ನಡೆದು ಪರದೇಶದ ಗಡಿಯನ್ನು ತುಳಿದುಬಿಟ್ಟರೆ ನಮ್ಮ ಜೀವನ ಎಷ್ಟು ದುರ್ಭರವಾಗುತ್ತದೆ ಎಂದು ಭಯವಾಗುತ್ತದೆ. ಗಡಿ ಪ್ರದೇಶದ ರಾಜ್ಯಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ವಾಘಾ ಗಡಿಯನ್ನು ನೋಡುವಾಗ ಮೈ ನವಿರೇಳುತ್ತದೆ. ಮಾನವೀಯ ಮೌಲ್ಯಗಳನ್ನು ಉದ್ದೀಪಿಸುವ ಈ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ. ಸೋನಂ ನಾಯರ್ ಅವರ ಬಿಗಿ ನಿರ್ದೇಶನ, ದಿಯಾಮಿರ್ಜಾ ಹಾಗೂ ಮೋಹಿತ್ ರೈನಾ ಅವರ ಪ್ರೌಢ ಅಭಿನಯ ಮನದಲ್ಲಿ ಬಹುಕಾಲ ನಿಲ್ಲುತ್ತದೆ.

ಇದನ್ನೂ ಓದಿ:  Sikandar Ka Muqaddar: ವಜ್ರಗಳ ಕಳ್ಳತನದ ವಿಷಯದಲ್ಲಿ ಪೊಲೀಸ್ ಅಧಿಕಾರಿಯ ಆರನೇ ಇಂದ್ರಿಯ ಕೆಲಸ ಮಾಡಿದ್ದೇಗೆ?

Download App

Latest Videos