Hisaab Barabar: ಬ್ಯಾಂಕ್‌ಗಳು ಗ್ರಾಹಕರನ್ನು ಹೇಗೆ ಲೂಟಿ ಮಾಡುತ್ತವೆ ಎಂಬುದನ್ನು 'ಹಿಸಾಬ್ ಬರಾಬರ್' ಸಿನಿಮಾ ತೋರಿಸುತ್ತದೆ. ಸಣ್ಣ ಮೊತ್ತದ ಕಡಿತಗಳು ಮತ್ತು ತಡವಾದ ಬಡ್ಡಿ ಪಾವತಿಗಳ ಮೂಲಕ ಬ್ಯಾಂಕ್‌ಗಳು ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತವೆ.

ಬೆಂಗಳೂರು: 1 ಲಕ್ಷಕ್ಕೆ ಶೇ.5ರಷ್ಟು ಬಡ್ಡಿ, 1ರಿಂದ 10 ಲಕ್ಷಕ್ಕೆ 5.5% ಬಡ್ಡಿ. ಬ್ಯಾಂಕ್‌ನಲ್ಲಿ 95,650 ಸಾವಿರ ರೂ. ಬ್ಯಾಲೆನ್ಸ್‌ ಇದೆ. ಎಲ್‌ಐಸಿ ದುಡ್ಡು 45 ಸಾವಿರ ಅಕೌಂಟ್‌ಗೆ ಬಂದು ಬೀಳುತ್ತದೆ. ನಿಮ್ಮ ಬ್ಯಾಲೆನ್ಸ್‌ 1, 40, 650 ಲಕ್ಷ ರೂ. ಆಯ್ತು. ಆಗ ಬಡ್ಡಿ ದರ ಶೇ.5.5ಕ್ಕೆ ಏರುತ್ತದೆ. ಮೂರು ತಿಂಗಳಿಗೊಮ್ಮೆ ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತೆ. ಆದ್ರೆ, ಬ್ಯಾಂಕ್‌ ನವರು ಶೇ.5.5 ಬದಲು ಶೇ.5ರಷ್ಟು ಬಡ್ಡಿಯನ್ನೇ ಕೊಟ್ಟಿರ್ತಾನೆ ಮತ್ತು ಠೇವಣಿ ಹಣಕ್ಕೆ ಒಂದು ದಿನ ಲೇಟಾಗಿ ಬಡ್ಡಿ ಹಾಕ್ತಾನೆ. ಪ್ರತಿ ತಿಂಗಳ 7ನೇ ತಾರೀಕಿನ ಬದಲು 9ನೇ ಡೇಟ್‌ಗೆ ಬಡ್ಡಿ ಹಣ ಜಮೆ ಮಾಡ್ತಾನೆ. ಇದರಿಂದ ದಿನಕ್ಕೆ 21.198 ರೂ. ನಷ್ಟ. ಒಂದು ದಿನ ತಡವಾಗಿ ಬಡ್ಡಿ ಹಣ ಹಾಕಿದ್ದರಿಂದ ಬ್ಯಾಂಕ್ ಜೇಬಿಗೆಷ್ಟು ಹಣ ಬಿತ್ತು‌ ಗೊತ್ತಾ. ಅದರ‌ ಲೆಕ್ಕಾಚಾರ ನೋಡೊಣ.

ಉದಾ : ತಿಂಗಳಿಗೆ 10 ರೂ. ನಂತೆ 12 ತಿಂಗಳೀಗೆ 120 ರೂ. ಆಯ್ತು. ವರ್ಷಕ್ಕೆ 120 ರೂ. ರಂತೆ 10 ವರ್ಷಕ್ಕೆ 1200 ರೂ. ಇದು ಒಬ್ಬ ಗ್ರಾಹಕನಿಂದ ಬ್ಯಾಂಕ್‌ ಕಬಳಿಸಿದ ದುಡ್ಡು. ಹೀಗೇ ಕನಿಷ್ಟ 2 ಕೋಟಿ ಗ್ರಾಹಕರಿಂದ ವರ್ಷಕ್ಕೆ 1200 ರೂ. ರಂತೆ ಬ್ಯಾಂಕ್‌ ಮಾಲೀಕನ ಜೇಬಿಗೆ ಅನಾಯಾಸವಾಗಿ ಬಿದ್ದಿದ್ದು 240 ಕೋಟಿ. ಅದೇ 10 ವರ್ಷಕ್ಕಾದ್ರೆ 24000000000. ಅಂದ್ರೆ 24 ಸಾವಿರ ಕೋಟಿ. ಬೆವರು ಸುರಿಸಿಲ್ಲ, ಕತ್ತೆ ಥರ ದುಡಿಯಲಿಲ್ಲ. ಜಂಟಲ್ ಬ್ಯುಸಿನೆಸ್. ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ ಅಷ್ಟೇ. ಬ್ಯಾಂಕ್‌ಗಳು ಮಗುಮ್ಮಾಗಿ ಮಾಡೋ ಈ ಲೂಟಿ ಕಥೆ ಸ್ಪಷ್ಟವಾಗಿ ಅರ್ಥವಾಗಬೇಕಂದ್ರೆ, ನಟ ಮಾಧವನ್‌ ನಟಿಸಿರೋ ಹಿಸಾಬ್ ಬರಾಬರ್‌ ( Hisaab barabar ) ಹಿಂದಿ ಫಿಲ್ಮ್‌ ನೋಡಲೇ ಬೇಕು.

ಸಾಮಾನ್ಯ ಗ್ರಾಹಕನ ಹಣವನ್ನು ಬ್ಯಾಂಕ್‌ಗಳು ಹೇಗೆಲ್ಲ ಲೂಟಿ ಹೊಡೆಯುತ್ತವೆ ಅನ್ನೋದನ್ನು ಸರಳವಾಗಿ, ಅರ್ಥ ಮಾಡಿಸಿದ್ದಾನೆ ನಿರ್ದೇಶಕ. ನಮ್ಮ ಖಾತೆಯಿಂದ 10, 20, 30 ರೂ. ಯಾಕೆ ಕಟ್‌ ಆಗ್ತಿದೆ ಅಂತ ಗೊತ್ತೇ ಆಗದ ಕೋಟ್ಯಂತರ ಗ್ರಾಹಕರಿದ್ದಾರೆ. ಯಾಕೆಂದರೆ, ಬ್ಯಾಂಕ್‌ಗೆ ಹೋಗಿ ಕೇಳುವಷ್ಟು ವ್ಯವಧಾನ, ತಾಳ್ಮೆ, ಸಮಯ ಎರಡೂ ಇಲ್ಲ. ಈರುಳ್ಳಿ, ಟೊಮೋಟ ರೇಟ್‌ಕೇಳಿ ವ್ಯಾಪಾರಿ ಜತೆ ಜಗಳಕ್ಕಿಳಿಯೋ ಜನರು, ಬ್ಯಾಂಕ್‌ಗಳ ಲೂಟಿ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳೋದೇ‌‌ ಇಲ್ಲ. ಜನರಿಗೆ ಬ್ಯಾಂಕ್‌ಗಳ ಲೆಕ್ಕಾಚಾರಕ್ಕಿಂತ ಇಂಟರ್‌ನೆಟ್‌ ಡೇಟಾ ಬಗ್ಗೆಯೇ ಚಿಂತೆ. ಇಂಥ ಹತ್ತಾರು ಡೈಲಾಗ್‌ ಮೂಲಕ ಜನರನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ ನಿರ್ದೇಶಕ ಅ‍ಶ್ವಿನ್‌ ಧೀರ್‌.

ಸಿಎ ಓದಿ, ಅಕೌಂಟ್‌ ಆಗಬೇಕೆಂಬ ಕನಸು ಹೊತ್ತಿದ್ದ ನಾಯಕ ರಾಧೆ ಮಾಧವ ಶರ್ಮಾ ಮಾಧವನ್‌, ಅನಿವಾರ್ಯತೆಗೆ ಸಿಲುಕಿ ರೈಲ್ವೆಯಲ್ಲಿ ಟಿಟಿ ಆಗುತ್ತಾನೆ. ಲೆಕ್ಕದಲ್ಲಿ ಬಲು ಪಕ್ಕಾ. ಒಂದೊಂದು ರೂಪಾಯಿಗೂ ಲೆಕ್ಕ ಇಡುವ, ಲೆಕ್ಕ ಮಾಡುವ, ಗುಣಿಸಿ, ಬಾಗಿಸಿ, ಗಣಿತ ಅರೆದು ಕುಡಿದವನು. ಲೆಕ್ಕದಲ್ಲಿ ಎಂದೂ ದಾರಿ ತಪ್ಪವನು. ಪ್ರತಿ ರೂಪಾಯಿಗೂ ಲೆಕ್ಕ ಇಟ್ಟವನು. ಅಂಥ‍ ರಾಧೆ ಶರ್ಮಾಗೆ ತನ್ನ ಅಕೌಂಟ್‌ನಲ್ಲಿ 27 ರೂ. ಕಟ್‌ ಆಗಿದ್ದು ಯಾಕೆ ಎಂಬುದರ ಪತ್ತೆ ಗಿಳಿಯುತ್ತಾನೆ. ಖಾಸಗಿ ಬ್ಯಾಂಕ್‌ ಬೆನ್ನು ಬೀಳುತ್ತಾನೆ. ಅಲ್ಲಿಂದ ಬಿಚ್ಚಿಕೊಳ್ಳುತ್ತದೆ ಬ್ಯಾಂಕ್‌ಗಳ ಲೂಟಿ ಕಥೆ. ಪ್ರಾಮಾಣಿಕ ಗ್ರಾಹಕನನ್ನು ತನ್ನ ಹಣಬಲದಿಂದ ಬೀದಿಗೆ ನಿಲ್ಲಿಸುತ್ತದೆ ಬ್ಯಾಂಕ್‌. ಆಮೇಲಿನದ್ದೆಲ್ಲ ಪಕ್ಕಾ ಕಮರ್ಷಿಯಲ್‌ ಸಿನಿಮಾ. ಆದ್ರೆ, ಖಾಸಗಿ ಬ್ಯಾಂಕ್‌ಗಳು ಚೆಕ್‌, ಎಟಿಎಂ ಚಾರ್ಜ್‌ ಅಂತ ಎಷ್ಟು ದುಡ್ಡು ಪೀಕುತ್ತವೆ ಎಂಬುದೇ ಸಾಮಾನ್ಯರಿಗೆ ಗೊತ್ತಿಲ್ಲ. ತಮ್ಮ ಅಕೌಂಟ್‌ನಿಂದ ಪ್ರತಿ ತಿಂಗಳು, ಯಾವೆಲ್ಲ ಕಾರಣಕ್ಕೆ ದುಡ್ಡು ಕಟ್ ಆಗ್ತಿದೆ ಅನ್ನೋದನ್ನು ಒಬ್ಬ ಗ್ರಾಹಕರನೂ ಪರಿಶೀಲನೆ ಮಾಡೋದಿಲ್ಲ, ಯಾಕೆ ದುಡ್ಡು ಕಟ್‌ ಮಾಡಿದ್ರಿ ಅಂತ ಕೇಳೋದಿಲ್ಲ. ಹೀಗೆ, ಕೇಳದೇ ಇರುವ ಕೋಟ್ಯಂತರ ಗ್ರಾಹಕರಿಂದಾಗಿ, ಖಾಸಗಿ ಬ್ಯಾಂಕ್‌ಗಳು, ಸಾಮ್ರಾಜ್ಯ ಕಟ್ಟಿಕೊಂಡು ಮಜಾ ಮಾಡುತ್ತಿವೆ ಎಂಬ ಸತ್ಯ ಬಿಚ್ಚಿಡುತ್ತಾನೆ ನಿರ್ದೇಶಕ.

ಇದನ್ನೂ ಓದಿ:  ಕಣ್ಣೀರಾಗಿಸುವ ‘ಮೇಯಗಳನ್’ ನೋಡಿದ್ರೆ ಊರಿಗೆ ಮರಳುವಂತಾಗುತ್ತೆ!

ಒಂದು ದಿನ ಇಎಂಐ ಕಟ್ಟುವುದು ಲೇಟಾದ್ರೆ 750 ರಿಂದ 1000 ಸಾವಿರ ರೂ. ದಂಡ ಹಾಕುವ‌ ಬ್ಯಾಂಕ್‌ಗಳನ್ನು, ನಮ್ಮ ಬಡ್ಡಿ ದುಡ್ಡು ಯಾಕೆ ಲೇಟಾಗಿ ಹಾಕ್ದೆ ಅಂತ ಕಾಲರ್ ಹಿಡಿದು ಜಗ್ಗೋದಿಲ್ಲ. ಚೆಕ್‌ ಬೌನ್ಸ್‌, ಸಿಬಿಲ್‌ ಸ್ಕೋರ್‌ ಮೇಲೆ ಪರಿಣಾಮ ಬೀರುತ್ತೆ ಅಂತ ಹೆದರಿಸುವ ಬ್ಯಾಂಕ್ ಗಳನ್ನು, ಷರತ್ತುಗಳ ಬಗ್ಗೆ ಸಣ್ಣ ಚುಕ್ಕಿ ಯಾಕೆ ಹಾಕಿದ್ದೀರಿ,‌ದೊಡ್ಡದಾಗಿ ಪ್ರಿಂಟ್ ಮಾಡಿ ಅಂತ ಗಟ್ಟಿ ದನಿಯಲ್ಲಿ ಕೇಳೋದಿಲ್ಲ. ಅಕೌಂಟ್‌ ನಲ್ಲಿ ಕನಿಷ್ಟ 2 ರಿಂದ 5 ಸಾವಿರ ಬ್ಯಾಲೆನ್ಸ್‌ ಇರಲೇಬೇಕು ಅನ್ನೋ ರೂಲ್ಸ್ ಮಾಡಿ, ಹಣವನ್ನು ‌ಇನ್ನೆಲ್ಲೋ ಬಂಡವಾಳ ಹೂಡಿ‌‌ ಕೋಟಿ ಕೋಟಿ ಲಾಭ ಮಾಡುವ ಬ್ಯಾಂಕ್ ಗಳ‌ ಚಾಲಾಕಿತನ ಅರ್ಥವೇ ಆಗಲ್ಲ.‌ 

ಚೆಕ್‌ ಮರೆತು, ಬ್ಯಾಂಕ್‌ ನಲ್ಲೇ ಹೋಗಿ ಚೆಕ್‌ ಲೀಫ್‌ ತೆಗೆದುಕೊಂಡ್ರೆ 48 ರೂ. ಕೊಡಬೇಕು. ತಿಂಗಳೀಗೆ ಎಟಿಎಂನಿಂದ 5 ಬಾರಿ ಮಾತ್ರ ಹಣ ವಿಥ್‌ ಡ್ರಾ ಅವಕಾಶ, ನಿಗದಿತ ಅವಧಿ ಮೀರಿದ್ರೆ ಪ್ರತಿ ವಿಥ್‌ ಡ್ರಾಗೆ 24 ರೂ. ಕಟ್ಟಬೇಕು. ಬೇರೆ ಬ್ಯಾಂಕ್‌ನಿಂದ ನಿಮ್ಮ ಅಕೌಂಟ್‌ಗೆ ಹಣ ಬಂದ್ರೆ, ಅದರಲ್ಲೂ ಪಾಲು ಕಿತ್ಕೊತಾರೆ. ಇದ್ಯಾವುದೂ ನಮಗೆ ತಿಳಿದಿಲ್ಲ. ತಿಳಿದುಕೊಳ್ಳುವ ವ್ಯವಧಾನವಿಲ್ಲ. ಯಾಕಂದ್ರೆ ನಮಗೆ ಟೈಂ ಇಲ್ಲ. ಗ್ರಾಹಕರಿಗೂ ಚಾಟಿ ಬೀಸುತ್ತಾ, ಬ್ಯಾಂಕ್‌ಗಳ ಮುಖವಾಡ ಬಯಲು ಮಾಡುವ ಅಪರೂಪದ ಸಿನಿಮಾ ZEE 5 ನಲ್ಲಿದೆ. ಮಿಸ್‌ ಮಾಡದೇ ನೋಡಿ. ನಯವಂಚಕರು ಯಾರು ? ಅಂದ್ರೆ ಅದು ಬ್ಯಾಂಕ್ ಗಳು ಅನ್ನಿಸದಿದ್ರೆ ಕೇಳಿ

ಇದನ್ನೂ ಓದಿ:  ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡಿದ ದಕ್ಷಿಣ ಭಾರತದ ಸಿಎಂಗಳು

YouTube video player