ಗಣೇಶ್, ರುಕ್ಮಿಣಿ ವಸಂತ್‌, ರಂಗಾಯಣ ರಘು, ರೀಷ್ಮಾ ನಾಣಯ್ಯ ನಟನೆಯ ಬಾನದಾರಿಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ.

ಆರ್‌. ಕೇಶವಮೂರ್ತಿ

ಪ್ರೇಮಿಗಳು ಸತ್ತ ಮೇಲೂ ಪ್ರೀತಿಯನ್ನು ಹೇಗೆ ಮುಂದುವರಿಸುವುದು ಎನ್ನುವುದನ್ನು ತೋರಿಸುವ ಸು‘ದೀರ್ಘ’ ಪ್ರಯಾಣ ‘ಬಾನದಾರಿಯಲ್ಲಿ’ ಸಾಗುತ್ತದೆ. ಗಣೇಶ್‌ ಹಾಗೂ ಪ್ರೀತಮ್‌ ಗುಬ್ಬಿ ಕಾಂಬಿನೇಶನ್‌ ಸಿನಿಮಾ ಎಂದರೆ ಅಲ್ಲಿ ಮಳೆ, ಹಸಿರು, ಪ್ರೀತಿಯ ತ್ಯಾಗ, ಗಾಢ ವಿರಹ ಇದ್ದೇ ಇರುತ್ತವೆ. ಈ ಚಿತ್ರವೂ ಅದಕ್ಕೆ ಹೊರತಲ್ಲ. ಹಳೆಯದರ ನೆರಳಿನಲ್ಲೂ ನಾಯಕ ಕ್ರಿಕೆಟರ್, ಇಬ್ಬರು ನಾಯಕಿಯರ ಪೈಕಿ ಒಬ್ಬರು ಸ್ವಿಮ್‌ ಕೋಚ್‌, ಮತ್ತೊಬ್ಬರನ್ನು ಟ್ರಾವೆಲ್‌ ಬ್ಲಾಗರ್‌ ಪಾತ್ರಧಾರಿಯನ್ನಾಗಿಸುವ ಮೂಲಕ ಟ್ರೆಂಡ್‌ಗೆ ಹೊಂದಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಪ್ರೀತಮ್‌ ಗುಬ್ಬಿ.

ನಾಯಕಿಯನ್ನು ನೋಡಿದ ಕೂಡಲೇ ನಾಯಕನಿಗೆ ಪ್ರೀತಿ ಹುಟ್ಟುತ್ತದೆ. ‘ನಾನು ನಿನ್ನ ಅಪ್ಪಿಕೊಳ್ಳುವುದು ಮುಖ್ಯವಲ್ಲ. ನನ್ನ ಅಪ್ಪ ನಿನ್ನ ಒಪ್ಪಿಕೊಳ್ಳಬೇಕು. ನಾನು ಅದನ್ನು ನೋಡಬೇಕು’ ಎನ್ನುತ್ತಾಳೆ ನಾಯಕಿ. ಕೊನೆಗೂ ನಾಯಕಿಯ ತಂದೆ ನಾಯಕನನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಅಲ್ಲಿ ಮತ್ತೇನೋ ನಡೆಯುತ್ತದೆ.

TOTAPURI 2 REVIEW: ತೋತಾಪುರಿಯಲ್ಲಿ ಸಿಹಿ ಜಾಸ್ತಿ, ರುಚಿಗೆ ತಕ್ಕಷ್ಟು ಹುಳಿ

ತಾರಾಗಣ: ಗಣೇಶ್, ರುಕ್ಮಿಣಿ ವಸಂತ್‌, ರಂಗಾಯಣ ರಘು, ರೀಷ್ಮಾ ನಾಣಯ್ಯ

ನಿರ್ದೇಶನ: ಪ್ರೀತಮ್‌ ಗುಬ್ಬಿ

ಮೊದಲ ಭಾಗ ಪ್ರೇಮ ಗುಂಗಿನಲ್ಲಿ ಮುಗಿದರೆ, ದ್ವಿತಿಯಾರ್ಧದ ಕತೆ ಆಫ್ರಿಕಾದ ಕಾಡುಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಅಪರೂಪಕ್ಕೊಮ್ಮೆಉತ್ಸಾಹ, ಕೊನೆವರೆಗೂ ಕಾಡುವ ಆಯಾಸ ಈ ಎರಡರ ಮೇಲೆ ‘ಬಾನದಾರಿಯಲ್ಲಿ’ ಚಿತ್ರ ಸಾಗುತ್ತದೆ. ಇಂಥ ಚಿತ್ರಕ್ಕೆ ಅಗತ್ಯವಾಗಿ ಬೇಕಾದ ಹಾಡುಗಳು, ಹಿನ್ನೆಲೆ ಸಂಗೀತವೂ ಇಲ್ಲದೆ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಕೆಲಸ ಕಣ್ಮರೆಯಾಗಿದೆ.

Sapta Sagaradaache Ello Review: ಪ್ರತಿಯೊಬ್ಬ ಪ್ರೇಮಿಯೂ ವಿಚಾರಣಾಧೀನ ಕೈದಿ!

ತಂಬಾ ಮಾತನಾಡುವ ನಾಯಕನ ಪಾತ್ರ, ವಿರಾಮದ ನಂತರ ಮೌನ ವ್ರತಕ್ಕೆ ಜಾರುತ್ತದೆ. ಆದರೂ ಈ ಪಾತ್ರದಲ್ಲಿ ಗಣೇಶ್ ಇಷ್ಟ ಆಗುತ್ತಾರೆ. ನಾಯಕಿ ಅಪ್ಪನಾಗಿ ರಂಗಾಯಣ ರಘು ನೋಡುಗರಿಗೆ ಹತ್ತಿರವಾಗುತ್ತಾರೆ. ರುಕ್ಮಿಣಿ ವಸಂತ್‌ ತೆರೆ ಮೇಲೆ ಮುದ್ದು ಮುದ್ದು. ರೀಷ್ಮಾ ನಾಣಯ್ಯ ಅವರ ಪಾತ್ರ ಡಾಬ್ರೋ ಸಿಸ್ಟರ್ ಅಂದುಕೊಳ್ಳಬಹುದು. ಒಳ್ಳೆಯ ತಾರಾಗಣ, ಅದ್ದೂರಿ ಮೇಕಿಂಗ್‌ ಇದ್ದಾಗಲೂ ಮಹಲು ಕಟ್ಟುವ ಬದಲು ಗುಬ್ಬಿಗೂಡು ಕಟ್ಟಿರುವುದು ಪ್ರೀತಮ್ ಅಭಿರುಚಿಗೆ ಸಾಕ್ಷಿ.