ತ್ರಿವಿಧ ದಾಸೋಹ ಅಂದರೆ ನೆನಪಾಗುವುದೇ ಸಿದ್ಧಗಂಗೆ ಮತ್ತು ಶಿವಕುಮಾರ ಸ್ವಾಮೀಜಿ. ಹಿಂದೆ ಇಳಕಲ್ಲಿನ ಮಹಾಂತ ಸ್ವಾಮೀಜಿಯವರು ಸಿದ್ಧಗಂಗೆಯ ಪ್ರಸಾದದಲ್ಲಿ ಬಸವಾದಿ ಶರಣರು ವಾಸವಾಗಿದ್ದಾರೆ ಎಂದಿದ್ದರು. ಅದು ಅಕ್ಷರಶಃ ನಿಜವಾಗಿದೆ. 

ನೂರಾರು ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಹತ್ತಿದ ಒಲೆ ಆರದಿರಲಿ ಎಂದು ಅಟವಿ ಸ್ವಾಮಿಗಳು ಸಿದ್ಧಲಿಂಗೇಶ್ವರರಲ್ಲಿ ಮಾಡಿದ ಪ್ರಾರ್ಥನೆಯು ಸದಾ ಕಾರ್ಯರೂಪದಲ್ಲಿರುವುದರನ್ನು ಪ್ರತಿಯೊಬ್ಬರು ಕಂಡಿದ್ದಾರೆ. ಶ್ರೀಮಠವು ವೀರಶೈವ ಪರಂಪರೆಯ ವಿರಕ್ತಮಠವಾಗಿದ್ದು ಗಣನೀಯ ಸ್ಥಿರಾಸ್ತಿ ಹೊಂದಿಲ್ಲ. ಇರುವ ಅಲ್ಪಸ್ವಲ್ಪ ಜಮೀನಿನಿಂದ ಬರುವ ಉತ್ಪತ್ತಿಯು ಶ್ರೀ ಕ್ಷೇತ್ರದಿಂದ ನಡೆಯುವ ಕಾರ್ಯಕಲಾಪಗಳಿಗೆ ಹೋಲಿಸಿದರೆ ಒಂದೆರೆಡು ತಿಂಗಳ ಮಟ್ಟಿಗೆ ಸಾಕಾದೀತು. ಹೀಗಾಗಿ ಭಕ್ತರ ಉದಾರ ಕೊಡುಗೆ, ಸಹಾಯ-ಸಹಕಾರಗಳೇ ಶ್ರೀ ಮಠದ ಸಂಪನ್ಮೂಲ.

Add Asianetnews Kannada as a Preferred SourcegooglePreferred

ಶ್ರೀ ಮಠದಲ್ಲಿ ಯಾವುದರಲ್ಲೂ ದುಂದು ವೆಚ್ಚವಿಲ್ಲ. ದೀನದಲಿತರ ಸೇವೆಗೆ ತಮ್ಮ ಜೀವನ ಮುಡುಪಾಗಿ ಇಟ್ಟಿರುವ ಪೂಜ್ಯಪಾದರ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಖರ್ಚಾದ ಪ್ರತಿ ಪೈಸೆಯೂ ಉದ್ದೇಶಿತ ಫಲವನ್ನು ತರುತ್ತಿದೆ. ಹಾಗಾಗಿ ಭಕ್ತರು ಶ್ರೀಮಠಕ್ಕೆ ಸಹಾಯ ಮಾಡಲು ಮಂದೆ ಬರುತ್ತಾರೆ.

ಬುದ್ಧನ ಕಾರುಣ್ಯ, ಬಸವಣ್ಣನ ಕಾಳಜಿಯೇ ಮೈವೆತ್ತ ರೂಪ!

ಹಳೆ ವಿದ್ಯಾರ್ಥಿ ಸಂಘ: ಶ್ರೀಮಠದ ಆಶ್ರಯ ಪಡೆದು ವಿದ್ಯಾವಂತರಾಗಿ ದೇಶ-ವಿದೇಶಗಳ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹಸ್ರಾರು ಮಂದಿ ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ಮಾತೃ ಸಂಸ್ಥೆಗೆ ತಮ್ಮ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ 1954ನೇ ಅಕ್ಟೋಬರ್ 4 ರಂದು ಸಂಘ ನಿರ್ಮಿಸಿದ್ದಾರೆ. ಅಂದಿನಿಂದ ಈ ಸಂಘ ಪ್ರಗತಿಪಥದಲ್ಲಿ ಮುನ್ನಡೆದು ಗಣನೀಯ ಚಟುವಟಿಕೆ ಹಮ್ಮಿಕೊಂಡು ಬಂದಿದೆ. ಜಾತ್ರೆ ಕಾಲದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ವ್ಯವಸ್ಥೆಗೊಳಿಸುವುದು, ಸಿದ್ಧಗಂಗಾ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿರುವುದು ಸಂಘದ ಅಮೂಲ್ಯ ಸೇವಾ ಕ್ಷೇತ್ರಗಳಾಗಿದೆ.