ಕೇವಲ 15 ವರ್ಷಗಳಲ್ಲಿ 41.5 ಕೋಟಿ ಭಾರತೀಯರು ಬಡತನದಿಂದ ಹೊರಕ್ಕೆ
ಕೇವಲ 15 ವರ್ಷಗಳಲ್ಲಿ ಭಾರತದಲ್ಲಿ 41.5 ಕೋಟಿ ಮಂದಿ ಬಡತನದಿಂದ ಹೊರಗೆ ಬಂದಿದ್ದಾರೆ. ಬಡತನ ನಿರ್ಮೂಲನೆ ವಿಚಾರದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿರುವ ವರದಿ ಮೆಚ್ಚುಗೆ ವ್ಯಕ್ತಪಡಿಸಿದೆ.
ನ್ಯೂಯಾರ್ಕ್: ಕೇವಲ 15 ವರ್ಷಗಳಲ್ಲಿ ಭಾರತದಲ್ಲಿ 41.5 ಕೋಟಿ ಮಂದಿ ಬಡತನದಿಂದ ಹೊರಗೆ ಬಂದಿದ್ದಾರೆ. ಬಡತನ ನಿರ್ಮೂಲನೆ ವಿಚಾರದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿರುವ ವರದಿ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಆಕ್ಸ್ಫರ್ಡ್ ಬಡತನ ಮತ್ತು ಮಾನವ ಸಂಪನ್ಮೂಲ ಕಾರ್ಯಕ್ರಮ ಸಂಸ್ಥೆಗಳು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ‘ಜಾಗತಿಕ ಬಹುಕೋನದ ಬಡತನ ಸೂಚ್ಯಂಕ’ (ಎಂಪಿಐ)ವನ್ನು ಬಿಡುಗಡೆ ಮಾಡಿವೆ.
ಕ್ಷಿಪ್ರ ಪ್ರಗತಿ ಸಾಧಿಸಿ, 15 ವರ್ಷದೊಳಗೆ ಜಾಗತಿಕ ಎಂಪಿಐ ಮೌಲ್ಯಗಳನ್ನು ಅರ್ಧಕ್ಕೆ ಇಳಿಸಿದ 25 ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. 25 ದೇಶಗಳ ಪಟ್ಟಿಯಲ್ಲಿ ಚೀನಾ, ಕಾಂಬೋಡಿಯಾ, ಕಾಂಗೋ, ಹೊಂಡುರಸ್, ಇಂಡೋನೇಷ್ಯಾ, ಮೊರೊಕ್ಕೋ, ಸರ್ಬಿಯಾ ಹಾಗೂ ವಿಯೆಟ್ನಾಂ ಕೂಡ ಇವೆ.
ಬಡತನ ಎಷ್ಟುಕಡಿಮೆಯಾಗಿದೆ?:
2005-2006ರಲ್ಲಿ 64.5 ಕೋಟಿ ಮಂದಿ ಭಾರತದಲ್ಲಿ ಬಡತನದಲ್ಲಿದ್ದರು. ಇದು 2015-2016ರ ವೇಳೆಗೆ 37 ಕೋಟಿಗೆ ಇಳಿಕೆಯಾಗಿತ್ತು. ಅದು ಮತ್ತಷ್ಟುತಗ್ಗಿದ್ದು, 2019-2021ರ ವೇಳೆಗೆ 23 ಕೋಟಿಗೆ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಸೌಲಭ್ಯ ವಂಚಿತವಾಗಿರುವುದಕ್ಕೆ ಸಂಬಂಧಿಸಿದ ಎಲ್ಲ ಸೂಚ್ಯಂಕಗಳಲ್ಲೂ ಇಳಿಕೆ ಕಂಡು ಬಂದಿದೆ. ಮಕ್ಕಳು ಹಾಗೂ ಅವಕಾಶ ವಂಚಿತ ಜಾತಿಗಳ ಜನರು ಸೇರಿದಂತೆ ಬಡ ರಾಜ್ಯಗಳು ಹಾಗೂ ಗುಂಪುಗಳು ವೇಗದ ಪರಿಪೂರ್ಣ ಪ್ರಗತಿ ಕಂಡಿವೆ ಎಂದು ವಿವರಿಸಿದೆ.
ಕಾಲಿಗೆ ಚಿನ್ನ ಧರಿಸಿದರೆ ಎದುರಾಗುತ್ತೆ ಕಂಟಕ; ಬಡತನ ನಿಮ್ಮ ಬಾಗಿಲು ತಟ್ಟಲಿದೆ ಹುಷಾರ್..!
ಪೌಷ್ಟಿಕಾಂಶದಿಂದ ವಂಚಿತರಾಗಿರುವ ಬಡವರ ಸೂಚ್ಯಂಕ 15 ವರ್ಷಗಳ ಅವಧಿಯಲ್ಲಿ ಶೇ.44.3ರಿಂದ ಶೇ.11.8ಕ್ಕೆ ಇಳಿಕೆಯಾಗಿದೆ. ಶಿಶು ಮರಣ ಪ್ರಮಾಣ ಶೇ.4.5ರಿಂದ ಶೇ.1.5ಕ್ಕೆ ಕುಸಿದಿದೆ. ಅಡುಗೆ ಇಂಧನ ವಂಚಿತರ ಪ್ರಮಾಣ ಶೇ.52.9ರಿಂದ ಶೇ.13.9ಕ್ಕೆ, ನೈರ್ಮಲ್ಯ ವಂಚಿತರ ಪ್ರಮಾಣ ಶೇ.50.4ರಿಂದ ಶೇ.11.3ಕ್ಕೆ ಇಳಿದಿದೆ. ಕುಡಿವ ನೀರು ವಂಚಿತರ ಪ್ರಮಾಣ ಶೇ.16.4ರಿಂದ ಶೇ.2.7ಕ್ಕೆ, ವಿದ್ಯುತ್ ವಂಚಿತರ ಪ್ರಮಾಣ ಶೇ.29ರಿಂದ ಶೇ.2.1ಕ್ಕೆ, ವಸತಿ ವಂಚಿತರ ಸಂಖ್ಯೆ ಶೇ.44.9ರಿಂದ ಶೇ.13.6ಕ್ಕೆ ಕುಸಿದಿದೆ ಎಂದು ತಿಳಿಸಿದೆ.
ಹೊಂದಿದ್ರೆ ಸಿರಿತನ; ನಿಯಮ ಮೀರಿದ್ರೆ ಬಡತನ ತರುವ ಆಮೆ ಉಂಗುರ