‘ನಾತಿಚರಾಮಿ’ ಸಿನಿಮಾ ನೋಡಿದ್ರೆ ಅದರಲ್ಲಿ ಶ್ರುತಿ ಹರಿಹರನ್‌ ಉಟ್ಟಿರೋ ಸೀರೆಯನ್ನೂ ಕಣ್ತುಂಬಿಕೊಂಡಿರ್ತೀರಿ. ಹೆಣ್ಮಕ್ಕಳಾಗಿದ್ರೆ ನೆಕ್ಸ್ಟ್‌ಶಾಪಿಂಗ್‌ನಲ್ಲೂ ನಾನೂ ಆ ಥರದ್ದೇ ಒಂದು ಸೀರೆ ತಗೊಳ್ಬೇಕು ಅಂತ ಪ್ಲಾನ್‌ ಮಾಡಿರ್ತೀರ.ಈ ಸರಳ, ಸುಂದರ ಲಿನಿನ್ ಸೀರೆಗಳ ಡಿಸೈನರ್ ಮಾನಸ ಲಿಂಗಯ್ಯ.

‘ರೀಸೆಂಟಾಗಿ ಚಿಕ್ಕಪೇಟೆಗೆ ಹೋಗಿದ್ದೆ. ಅಲ್ಲೊಂದು ಹನ್ನೊಂದು ಸೀರೆಗಳ ಒಳಗೆ ಬೇರೆ ಬೇರೆ ಬ್ಲೌಸ್‌ಪೀಸ್‌ ಕಟ್‌ ಮಾಡಿ ಇಟ್ಟಿದ್ರು. ಅದು ಬಾಕ್ಸ್‌ ಬಾಕ್ಸ್‌ ಡಿಸೈನ್‌ ಇರುವ ಬ್ಲೌಸ್‌ ಪೀಸ್‌. ಜನ ಇದೇನು ಅಂತ ಕೇಳಿದ್ರೆ, ಅದು ಈಗಿನ ಟ್ರೆಂಡ್‌, ಶ್ರುತಿ ಹರಿಹರನ್‌ ಉಟ್ಟಿರೋ ಸೀರೆ ನೋಡಿಲ್ವಾ ಅಂತಿದ್ರು. ನನ್ನ ಕಣ್ಣಲ್ಲಿ ನೀರೇ ಬಂದುಬಿಡ್ತು..’ ಹೀಗಂದು ಒಂದು ಕ್ಷಣ ಮೌನವಾದರು ಮಾನಸ ಲಿಂಗಯ್ಯ.

Add Asianetnews Kannada as a Preferred SourcegooglePreferred

ವ್ಯಕ್ತಿತ್ವವನ್ನೇ ರಿವೀಲ್‌ ಮಾಡುತ್ತೆ

ಈ ಸರಳ, ಸುಂದರ ಲಿನಿನ್‌ ಸೀರೆಗಳ ಡಿಸೈನರ್‌ ಮಾನಸ ಲಿಂಗಯ್ಯ. ‘ನಾತಿಚರಾಮಿ’ ಸಿನಿಮಾದಲ್ಲಿ ಶ್ರುತಿಗೆ ಅಂತಲ್ಲ, ಎಲ್ಲ ಪಾತ್ರಗಳಿಗೂ ಇವರದೇ ಕಾಸ್ಟೂ್ಯಮ್‌ ಡಿಸೈನಿಂಗ್‌. ‘ಒಂದು ಪಾತ್ರಕ್ಕೆ ಒಂದು ಬಣ್ಣ ಇರುತ್ತೆ, ಅದಕ್ಕೆ ತಕ್ಕಂಥ ಉಡುಗೆಗಳಿರಬೇಕು. ಈ ಸಿನಿಮಾದ ಹೀರೋ ಮಹತ್ವಾಕಾಂಕ್ಷೆಯ ಸಿವಿಲ್‌ ಇಂಜಿನಿಯರ್‌. ಆತನ ವೃತ್ತಿ, ಮನಸ್ಥಿತಿಗೆ ತಕ್ಕ ಹಾಗೆ ಆತನ ಉಡುಪಿದ್ದರೆ ಚೆಂದ. ಆತ ಏನು ಅನ್ನೋದನ್ನು ಪ್ರೇಕ್ಷಕನಿಗೆ ಮೊದಲು ತಿಳಿಸಿಕೊಡುವುದು ಆತನ ಉಡುಗೆ’ ಅಂತಾರೆ ಮಾನಸ.

ಶ್ರುತಿ ಹರಿಹರನ್‌ಗೆ ವಸ್ತ್ರ ವಿನ್ಯಾಸ

ಶ್ರುತಿ ಹರಿಹರನ್‌ಗೆ ಉಡುಗೆ ಸಿದ್ಧಪಡಿಸುವುದರ ಹಿಂದೆ ಇವರ ಅಬ್ಸರ್ವೇಶನ್‌ಗಳು ಸಾಕಷ್ಟಿದ್ದವು. ಆಕೆ ಡಿಗ್ನಿಫೈಡ್‌ ಹೆಣ್ಣು, ಹೈ ಫೆä್ರಫೈಲ್‌ ಕೆಲಸ. ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಈ ಜನರೇಶನ್‌ಅನ್ನು ಪ್ರತಿನಿಧಿಸುತ್ತಿದ್ದಾಳೆ. ಆಕೆಯನ್ನು ನೋಡಿದಾಗ ಅವಳು ನಮ್ಮ ಮನೆ ಮಗಳು ಅನ್ನುವ ಭಾವನೆ ಬರಬೇಕು. ‘ನಾಯಕಿಯ ಇರುವ ಮನೆಗೆ ನಾನು ಹೋಗಿದ್ದೆ. ಹಾಗಾಗಿ ಆ ಮನೆಯ ಒಳಾಂಗಣ ವಿನ್ಯಾಸ, ಬಣ್ಣಕ್ಕೆ ಈಕೆಗೆ ಉಡುಗೆ ಸಿಂಕ್‌ ಮಾಡೋದು ಸಾಧ್ಯವಾಯಿತು. ಆಗಷ್ಟೇ ಲಿನಿನ್‌ ಸೀರೆ ಟ್ರೆಂಡ್‌ ಬಂದಿತ್ತು. ಅದು ನಮ್ಮ ನಾಯಕಿಯ ವ್ಯಕ್ತಿತ್ವಕ್ಕೆ ಸರಿಯಾಗಿ ಮ್ಯಾಚ್‌ ಆಗ್ತಿದೆ ಅನಿಸ್ತು. ಇಲ್ಲಿ ನನ್ನ ಕ್ರಿಯೇಟಿವಿಟಿಗೂ ಅವಕಾಶವಿತ್ತು. ಸೀರೆಯಲ್ಲಿರುವ ಬ್ಲೌಸ್‌ ಬಿಟ್ಟು ಬೇರೆಯದೇ ಬಾಕ್ಸ್‌ ಇರುವ ಬ್ಲೌಸ್‌ ಡಿಸೈನ್‌ ಮಾಡಿದೆ. ಈ ಡಿಸೈನ್‌ ಎಲ್ಲರಿಗೂ ಬಹಳ ಪ್ರಿಯವಾಯ್ತು. ಚಿಕ್ಕ ಪೇಟೆಯಲ್ಲೂ ನೋಡಿದ್ದು. ಸಿನಿಮಾ ಆರಂಭದಲ್ಲಿ ನಾಯಕಿ ಕಂಪ್ಲೀಟ್‌ ಮಾಡ್‌ ಡ್ರೆಸ್‌ನಲ್ಲಿರುತ್ತಾಳೆ. ಅದನ್ನು ಡಿಸೈನ್‌ ಮಾಡುವಾಗ ಬೇರೆಯದೇ ಥಾಟ್‌ ಇತ್ತು.’ ಅನ್ನುವ ಮಾನಸ ತನ್ನ ಶ್ರದ್ಧೆಯ ಕೆಲಸಕ್ಕೆ ಸಿಕ್ಕ ಸ್ಪಂದನೆ ಬಗ್ಗೆ ಭಾವುಕರಾಗುತ್ತಾರೆ.

ನಾತಿಚರಾಮಿಗೂ ಮೊದಲೆ ಒಂದಿಷ್ಟು ಸಿನಿಮಾಗಳಿಗೆ ವಸ್ತ್ರವಿನ್ಯಾಸ ಮಾಡಿದ್ದೆ. ಆದರೆ ಅಲ್ಲೆಲ್ಲೂ ಕ್ರಿಯೇಟಿವಿಟಿಗೆ ಅವಕಾಶ ಇರಲಿಲ್ಲ. ನಾತಿಚರಾಮಿಯಲ್ಲಿ ನನ್ನ ಪ್ರಯೋಗಶೀಲತೆಗೆ ಕನ್ನಡಯಾದ ಸಿನಿಮಾ. ಇಲ್ಲಿಯ ಪ್ರತಿಯೊಂದು, ಪಾತ್ರವನ್ನೂ ಮನಸ್ಸಿಗೆ ತಂದುಕೊಂಡು, ಆ ಕಲ್ಪನೆಯಲ್ಲಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದೇನೆ. ಬಹಳ ಖುಷಿ ಇದೆ - ಮಾನಸ ಮುಸ್ತಾಫ 

ಓದಿದ್ದೇ ಬೇರೆ, ಉದ್ಯೋಗವೇ ಬೇರೆ

ಮಾನಸ ಓದಿದ್ದು ಬಿಕಾಂ. ಆದರೆ ಆಗಿಂದಲೂ ವಸ್ತ್ರದ ಬಗ್ಗೆ, ಡಿಸೈನ್‌ ಬಗ್ಗೆಯೇ ಆಸಕ್ತಿ. ಗೆಳೆಯರಿಗೆ, ಮನೆಯವರಿಗೆ ಇವರ ಆಯ್ಕೆಯ ಬಟ್ಟೆಗಳೇ ಇಷ್ಟವಾಗುತ್ತಿದ್ದದ್ದು. ಬಿ.ಕಾಂ ಮುಗಿಸಿ ಕೆಲಸಕ್ಕೆ ಸೇರಿದ ಮೇಲೂ ಮನಸ್ಸು ವಸ್ತ್ರ ವಿನ್ಯಾಸದ ಸುತ್ತಲೇ ತಿರುತ್ತಿತ್ತು. ಇವರ ಆಸಕ್ತಿಗೆ ನೀರೆರೆದದ್ದು ಮನೆಯ ಪಕ್ಕ ಇದ್ದ ಬೊಟಿಕ್‌. ಒನ್‌ಫೈನ್‌ಡೇ ಇವರು ತಮ್ಮ ಉದ್ಯೋಗಕ್ಕೆ ಗುಡ್‌ಬೈ ಹೇಳಿ ಆ ಬೊಟಿಕ್‌ನಲ್ಲೇ ಕೆಲಸಕ್ಕೆ ಸೇರಿದ್ದಾಯ್ತು. ಸ್ಟಿಚಿಂಗ್‌ ಮಾಡುವುದು, ವಸ್ತ್ರ ವಿನ್ಯಾಸದ ಎಬಿಸಿಡಿ ಕಲಿತದ್ದು ಇಲ್ಲೇ. ಮುಂದೆ ‘ಅರಿವೆ’ ಎಂಬ ತಮ್ಮದೇ ಬೊಟಿಕ್‌ಅನ್ನು ಆರಂಭಿಸಿದರು.

ಮಂಡ್ಯ ರಮೇಶ್‌ ಶಹಬ್ಬಾಸ್‌ ಅಂದ್ರು!

ಮಾನಸ ಸಿನಿಮಾಗೆ ಮಾತ್ರವಲ್ಲ, ರಂಗಭೂಮಿಗೂ ವಸ್ತ್ರ ವಿನ್ಯಾಸ ಮಾಡುತ್ತಾರೆ. ನಟ ಮಂಡ್ಯ ರಮೇಶ್‌ ಅವರ ‘ನಟನ’ ರಂಗಸಂಸ್ಥೆಗೆ ಬಿ.ಸುರೇಶ್‌ ನಿರ್ದೇಶನದ ‘ಮೃತ್ಯುಂಜಯ’ ನಾಟಕಕ್ಕೆ ಮಾಡಿದ ವಸ್ತ್ರವಿನ್ಯಾಸಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಯಿತು. ಮಂಡ್ಯ ರಮೇಶ್‌ ಅವರಿಂದ ಶಹಬ್ಬಾಸ್‌ ಅನಿಸಿಕೊಂಡರು ಮಾನಸ. ಮೃತ್ಯುಂಜಯ ಗ್ರೀಕ್‌ ನಾಟಕ. ಪುರಾತನ ಗ್ರೀಸ್‌ಅನ್ನು ಉಡುಗೆಗಳ ಮೂಲಕ ಕಟ್ಟಿಕೊಡಬೇಕಿತ್ತು. ಬಲ್ಲವರ ಜೊತೆಗೆ ಚರ್ಚಿಸಿ, ತಮ್ಮ ಕಲ್ಪನೆಯನ್ನೂ ಬೆರೆಸಿ ನಟನದ ಮಕ್ಕಳಿಗೆ ವಸ್ತ್ರ ವಿನ್ಯಾಸ ಮಾಡಿದರು. ಆ ಮೂಲಕ ರಂಗಭೂಮಿಯಲ್ಲಿ ಭರವಸೆಯ ವಸ್ತ್ರವಿನ್ಯಾಸಕಿ ಎಂಬ ಹೆಸರು ಬಂತು. ಬಳಿಕ ಬೆಂಗಳೂರಿನ ರಂಗಮಂಟಪ ತಂಡದ ‘ಮಲ್ಲಿಗೆ’ ನಾಟಕಕ್ಕೂ ಇವರು ಕಾಸ್ಟೂ್ಯಮ್‌ ಡಿಸೈನ್‌ ಮಾಡಿದರು. ಬಳಿಕ ಸಿನಿಮಾ ಕ್ಷೇತ್ರದಲ್ಲೂ ಅವಕಾಶಗಳು ಬರತೊಡಗಿದವು. ಹೆಸರು ತಂದುಕೊಟ್ಟಿದ್ದು ‘ನಾತಿಚರಾಮಿ’ ಸಿನಿಮಾ.

ಅನ್ನ ನೀಡುವ ಉದ್ಯೋಗ

ಮಾನಸ ಅವರಿಗೆ ಪುಟ್ಟಮಗುವಿದೆ. ಪತಿ ಮುಸ್ತಫಾ ಅವರ ಆಕಸ್ಮಿಕ ನಿಧನದ ಬಳಿಕ ವಸ್ತ್ರ ವಿನ್ಯಾಸವೇ ಇವರಿಗೆ ತುತ್ತು ನೀಡುವ ಕಾಯಕ. ಜೆ.ಪಿ ನಗರದಲ್ಲಿರುವ ಇವರ ‘ಅರಿವು’ ಬೊಟಿಕ್‌ನಲ್ಲಿ ಸದಾ ಹೊಸ ಡಿಸೈನ್‌ಗಳ, ಕ್ರಿಯೇಟಿವ್‌ ಉಡುಪುಗಳ ತಯಾರಿಯಲ್ಲಿ ನಿರತರಾಗಿರುತ್ತಾರೆ. ಸೀರೆ ಇವರ ಮೆಚ್ಚಿನ ಉಡುಗೆ. ವೆಸ್ಟರ್ನ್‌ ಡ್ರೆಸ್‌ ಡಿಸೈನ್‌ ಅಂದರೆ ಇಷ್ಟ. ‘ನಾತಿಚರಾಮಿ’ ಸಿನಿಮಾದ ಶ್ರುತಿ ಪಾತ್ರದ ವಸ್ತ್ರ ವಿನ್ಯಾಸಕ್ಕೆ ಮಲೆಯಾಳಿ ವಸ್ತ್ರವಿನ್ಯಾಸಕಿ ಮೀರಾ ಚೇಚಿಯಿಂದ ಪ್ರೇರಣೆ ಪಡೆದಿದ್ದಾರೆ. ನಾತಿಚರಾಮಿಯಲ್ಲಿ ಇವರ ವಿನ್ಯಾಸ ಗಮನಸೆಳೆದದ್ದೇ ಸ್ಯಾಂಡಲ್‌ವುಡ್‌ನಲ್ಲಿ ಅವಕಾಶಗಳು ಹರಿದುಬರತೊಡಗಿವೆ. ಇನ್ನಷ್ಟುಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಒಂದು ತುಂಡು ಬಟ್ಟೆಸೃಷ್ಟಿಸುವ ಅಗಾಧ ವಿಸ್ಮಯಗಳಿಗೆ ಕಣ್ಣಾಗುವ ಮಾನಸಗೆ ಆಲ್‌ ದಿ ಬೆಸ್ಟ್‌.