ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ನೈಜೀರಿಯಾದಲ್ಲಿ ನಡೆದ ಫೈಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೂಸಾ ತಿಂದಿದ್ದಾರೆ. ಸ್ಥಳೀಯ ಫೈಟರ್‌ಗಳೊಂದಿಗೆ ಮುಷ್ಠಿ ಕಾಳಗದಲ್ಲಿ ಸೆಣಸಾಡಿ, ಗೆಲುವಿನ ಬಿಲ್ಡಪ್ ತೆಗೆದುಕೊಂಡರೂ, ಕೆಲವು ಹೊಡೆತಗಳನ್ನು ತಿಂದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಶ್ವ ಪರ್ಯಟನೆ ಮಾಡುತ್ತಾ ಅತ್ಯಂತ ಭಯಾನಕ ದೇಶಗಳಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂಬುದನ್ನು ತೋರಿಸುವ ಕನ್ನಡದ ಸ್ಟಾರ್ ಯೂಟೂಬರ್ ಡಾ.ಬ್ರೋ ಪಾಕಿಸ್ತಾನ ಹಾಗೂ ತಾಲಿಬಾನಿಗಳೇ ಆಳುವ ಅಫ್ಘಾನಿಸ್ತಾನಕ್ಕೂ ಹೋಗಿ ಬಂದಿದ್ದಾರೆ. ಆದರೆ, ಇತ್ತೀಚೆಗೆ ನೈಜೀರಿಯಾ ದೇಶಕ್ಕೆ ತೆರಳಿದ್ದ ಡಾ.ಬ್ರೋ ಅಲ್ಲಿನ ಜನರಿಗೆ ತೊಡೆ ತಟ್ಟಿ ಭರ್ಜರಿ ಗೂಸಾ ತಿಂದು ಬಂದಿದ್ದಾರೆ..

ಹೌದು.. ನಾವು ಹೇಳುತ್ತಿರುವುದು ನಿಜವಾದರೂ ಈ ಘಟನೆ ನಡೆದಿರುವುದು ಸ್ಪರ್ಧೆಯಲ್ಲಿ ಎನ್ನುವುದು ಮತ್ತೊಂದು ರೋಚಕ ವಿಚಾರವಾಗಿದೆ. ಭಾರತದ ಪ್ರಜೆಗಳಂತೆ ತೀಕ್ಷ್ಣ ಬುದ್ಧಿ ಹೊಂದಿರುವ ಡಾ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಅವರು ಅಜಾನುಬಾಹು ಏನಲ್ಲ. ಸುಮಾರು 5 ಅಡಿಗಿಂತ ಕಡಿಮೆ ಎತ್ತರವನ್ನು ಹೊಂದಿದ್ದು, ಆರೋಗ್ಯಕರ ಮೈಕಟ್ಟು ಹೊಂದಿದ್ದಾರೆ. ಯುವಕನಾಗಿರುವ ಗಗನ್ ಶ್ರೀನಿವಾಸ್ ಎಲ್ಲ ಯುವಕರಿಗೆ ಇರುವಂತಹ ಚೇಷ್ಠೆ ಬುದ್ಧಿ, ಸವಾಲು ಸ್ವೀಕರಿಸುವ ಗುಣ, ಪ್ರಾಪಂಚಿಕ ಜ್ಞಾನ ತಿಳಿದುಕೊಳ್ಳುವ ಕುತೂಹಲ ಹೊಂದಿದ್ದಾರೆ. ಆದರೆ, ಬುದ್ಧಿವಂತಿಕೆಯನ್ನು ಸಾಮಾನ್ಯರಿಗಿಂತ ಸ್ವಲ್ಪ ಮುಂದಿದ್ದಾರೆ. ಹಣಕಾಸಿನಲ್ಲಿಯೂ ಭಾರೀ ಮುಂದಿದ್ದಾರೆ ಬಿಡಿ..

ಇತ್ತೀಚೆಗೆ ನೈಜೀರಿಯಾ ದೇಶಕ್ಕೆ ತೆರಳಿದ್ದ ಡಾ.ಬ್ರೋ ಅಲ್ಲಿನ ಶಾಲಾ ಮಕ್ಕಳಿಗೆ ಕನ್ನಡ ಪಾಠವನ್ನು ಹೇಳಿಕೊಟ್ಟು ಬಂದಿದ್ದರು. ಈ ಮೂಲಕ ಕನ್ನಡಿಗರಿಂದ ಭಾರೀ ಚೆಪ್ಪಾಳಿ ಗಿಟ್ಟಿಸಿಕೊಂಡಿದ್ದರು. ಜೊತೆಗೆ ತಾವು ಹೋದಲ್ಲೆಲ್ಲಾ ವಿಡಿಯೋ ಮಾಡಿಕೊಳ್ಳುವ ಡಾ.ಬ್ರೋ ನೈಜೀರಿಯಾ ಜನರ ವಾಸ ಸ್ಥಳ, ಸಂಚಾರ, ಜೀವನ ಶೈಲಿ, ಶೈಕ್ಷಣಿಕ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಹಾಗೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ್ದರು. ಆದರೆ, ಒಂದು ದೃಶ್ಯವನ್ನು ಮಾತ್ರ ತಡವಾಗಿ ಯೂಟೂಬ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ತಾವು ಸ್ಥಳೀಯ ಫೈಟಿಂಗ್ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಹೋಗಿ ಗೂಸಾ ತಿಂದುಬಂದ ಘಟನೆ ನಡೆದಿದೆ.

ಇದನ್ನೂ ಓದಿ: ನೈಜೀರಿಯಾದ ಮಕ್ಕಳಿಗೆ ʼಭಾರತದ ರಾಷ್ಟ್ರಭಾಷೆ ಕನ್ನಡʼ ಕಲಿಸಿದ ಡಾ.ಬ್ರೋ ವಿಡಿಯೋ ಇದೀಗ ವೈರಲ್!

ಮುಷ್ಠಿ ಕಾಳಗದಲ್ಲಿ ಬಿತ್ತು ಹೊಡೆತ: ನೈಜೀರಿಯಾದ ಕಾನೋ ನಗರದಲ್ಲಿ ಫೈಟಿಂಗ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ನಾನೂ ಕೂಡ ಭಾಗವಹಿಸುತ್ತೇನೆ ಎಂದು ಮುಂದೆ ಹೋಗಿದ್ದಾರೆ. ಆಗ ಅಲ್ಲಿನ ಕಾಳಗದ ನಿಯಮದಂತೆ ಬಲಿಷ್ಠವಾಗಿರುವ ಒಂದು ಕೈಗೆ ಹಗ್ಗವನ್ನು ಸುತ್ತಿಕೊಂಡು ಎದುರಾಳಿಗೆ ಮುಷ್ಠಿಯಿಂದ ಹೊಡೆಯಬೇಕು. ನಾನು ಕೂಡ ಏನಾಗುತ್ತದೆ ನೋಡಿಯೇ ಬಿಡುತ್ತೇನೆ ಎಂದು ಅಖಾಡಕ್ಕೆ ಗಗನ್ ನುಗ್ಗಿದ್ದಾರೆ. ಆಗ ಎದುರಾಳಿಯಿಂದ ಭರ್ಜರಿ ಹೊಡೆತಗಳನ್ನು ತಿಂದಿದ್ದಾರೆ. ಇದಾದ ನಂತರ ಬ್ರೇಕ್ ಪಡೆದುಕೊಂಡು ಹೋಗಿ ತರಬೇತುದಾರರ ಬಳಿ ಒಂದಷ್ಟು ಅಟ್ಯಾಕಿಂಗ್ ಟಿಪ್ಸ್‌ಗಳನ್ನು ಪಡೆದುಕೊಂಡು ಬಂದಿದ್ದಾರೆ. ನಂತರ ಎದುರಾಳಿಗೆ ಒಂದಷ್ಟು ಏಟುಗಳನ್ನು ಕೊಟ್ಟಿದ್ದಾರೆ. ನಂತರ, ಅಲ್ಲಿದ್ದವರೊಂದಿಗೆ ನಾನು ಗೆದ್ದಿರುವುದಾಗಿ ಹೇಳಿಕೊಂಡು ತಮ್ಮದೇ ಕೈ ಎತ್ತಿ ತೋರಿಸಿಕೊಂಡು ಫೋಟೋ ತೆಗೆಸಿಕೊಂಡು ಬಂದಿದ್ದಾರೆ. ಇದರ ಬಳಿಕ ತಾನು ಸುಮ್ಮನೆ ಆಟವಾಡಿದ್ದು ಅಷ್ಟೇ.. ಇವರು ಒಳ್ಳೆಯ ವೃತ್ತಿಪರ ತರಬೇತಿ ಪಡೆದ ಆಟಗಾರರು. ಅವರ ಹೊಡೆತಕ್ಕೆ ನಾನು ಸಮನಲ್ಲ. ನಿಜವಾಗಿಯೂ ಅವರೇ ಗೆಲುವು ಸಾಧಿಸಿದ್ದು, ನಾನು ಬಿಲ್ಡಪ್ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಒಂದಷ್ಟು ಹೊಡೆತ ಬಿದ್ದಿದ್ದಂತೂ ನಿಜ ಎಂಬುದು ವಿಡಿಯೋದಲ್ಲಿ ಕಂಡುಬರುತ್ತದೆ.

View post on Instagram

ಕನ್ನಡ ನಾಡಿನಲ್ಲಿದೆ ಮುಷ್ಠಿ ಯುದ್ಧ: ಮೈಸೂರು ರಾಜರ ಆಳ್ವಿಕೆ ಕಾಲದಲ್ಲಿ ಕರ್ನಾಟಕದಲ್ಲಿಯೂ ಮುಷ್ಠಿ ಕಾಳಗವನ್ನು ನಡೆಸಲಾಗುತ್ತಿತ್ತು. ಇದೊಂದು ಸ್ಪರ್ಧೆ ಆಗಿದ್ದು, ಅಪಾಯಕಾರಿ ಮುಷ್ಠಿ ಕಾಳಗವನ್ನು ಈಗಲೂ ಮೈಸೂರು ದಸರಾದಲ್ಲಿ ಆಯೋಜನೆ ಮಾಡಲಾಗುತ್ತದೆ. ಆದರೆ, ಪ್ರಾಣಕ್ಕೆ ಹಾನಿಯಾಗುವವರೆಗೆ ಇದನ್ನು ನಡೆಸದೇ ಒಬ್ಬರು ಎದುರಾಳಿ ಸ್ಪರ್ಧೆಯ ತಲೆಯಲ್ಲಿ ರಕ್ತ ಬರುವಂತೆ ಮಾಡಿದಾಕ್ಷಣ ಪಂದ್ಯ ಮುಕ್ತಾಯಗೊಳಿಸಲಾಗುತ್ತದೆ.