ರಾಜ್ಯ ಸರ್ಕಾರ ಜನರ ಸಮಸ್ಯೆ ಬಗ್ಗೆ ಕಾಳಜಿ ತೋರುತ್ತಿಲ್ಲ. ಸುಮ್ಮನೆ ನಮ್ಮ ಪಕ್ಷದ ಬಗ್ಗೆ ಮಾತಾಡ್ತಾರೆ. ಅದು ಬಿಟ್ಟು ಜನರ ಬಗ್ಗೆ ಕಾಳಜಿ ತೋರಲಿ. ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸದ ಮಾನವೀಯತೆ ಇಲ್ಲದ ಸರ್ಕಾರ ಬಿಜೆಪಿ. ಅಧಿಕಾರ ವಹಿಸಿಕೊಂಡ ನಂತರ ನೂರು ದಿವಸ ಕಳೆದರೂ ಸರ್ಕಾರ ಟೇಕ್‌ ಅಫ್‌ ಆಗಿಲ್ಲ ಇನ್ನೂ ಕೋಮಾದಲ್ಲೇ ಇದೆ ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್‌ ಕಿಡಿಕಾರಿದ್ದಾರೆ.

ಮಡಿಕೇರಿ(ನ.13): ರಾಜ್ಯ ಸರ್ಕಾರ ಜನರ ಸಮಸ್ಯೆ ಬಗ್ಗೆ ಕಾಳಜಿ ತೋರುತ್ತಿಲ್ಲ. ಸುಮ್ಮನೆ ನಮ್ಮ ಪಕ್ಷದ ಬಗ್ಗೆ ಮಾತಾಡ್ತಾರೆ. ಅದು ಬಿಟ್ಟು ಜನರ ಬಗ್ಗೆ ಕಾಳಜಿ ತೋರಲಿ. ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸದ ಮಾನವೀಯತೆ ಇಲ್ಲದ ಸರ್ಕಾರ ಬಿಜೆಪಿ. ಅಧಿಕಾರ ವಹಿಸಿಕೊಂಡ ನಂತರ ನೂರು ದಿವಸ ಕಳೆದರೂ ಸರ್ಕಾರ ಟೇಕ್‌ ಅಫ್‌ ಆಗಿಲ್ಲ ಇನ್ನೂ ಕೋಮಾದಲ್ಲೇ ಇದೆ ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್‌ ಕಿಡಿಕಾರಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಯೋಜನೆಯನ್ನು ಮುಂದುವರಿಸುವ ಮನೋಭಾವ ಈ ಸರ್ಕಾರಕ್ಕೆ ಇಲ್ಲ. ರೇಷನ್‌ ಕಾರ್ಡ್‌ಗೆ ಸತಾಯಿಸುವ ಪರಿಸ್ಥಿತಿ ಇತ್ತು. ಆದರೆ ನಮ್ಮ ಸರ್ಕಾರದಲ್ಲಿ 40 ಲಕ್ಷ ಕುಟುಂಬಗಳಿಗೆ ರೇಷನ್‌ ಕಾರ್ಡ್‌ ವಿತರಣೆ ಮಾಡಿದ್ದೇವೆ. ಉಚಿತ ಅಕ್ಕಿ, ಪೌಷ್ಟಿಕಾಂಶಯುಕ್ತ ಆಹಾರ ನೀಡಿದ್ದೇವೆ. ಆದರೆ ಈ ಸರ್ಕಾರ ತೊಗರಿಬೇಳೆ ನಿಲ್ಲಿಸಿದ್ದಾರೆ. ರೇಷನ್‌ ಕಾರ್ಡ್‌ ರದ್ದು ಪಡಿಸುವ ಮೂಲಕ ಸತಾಯಿಸುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಜನತೆಯನ್ನು ವೈರಿಗಳಂತೆ ನೋಡುತ್ತಿದೆ. ಜನಪರ ಸರ್ಕಾರದ ಮನಸ್ಥಿತಿ ಹೀಗಿರಬಾರದೆಂದು ಖಾದರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಉಡುಪಿ ಟೌನ್ ಎಸ್‌ಐ ಅಮಾನತು: ತೀವ್ರ ವಿರೋಧ

ಅನ್ನಕ್ಕೆ ದಂಡ ಹಾಕುವಂತಹ ಸರ್ಕಾರ ವಿಶ್ವದಲ್ಲಿ ಕಾರ್ನಾಟಕದಲ್ಲಿ ಮಾತ್ರ ಇದೆ. ಸಿದ್ದರಾಮಯ್ಯ ಅವರು ಜಾರಿಗೆತಂದಿದ್ದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿತ್ತು. ಈ ಬಗ್ಗೆ ಸರ್ಕಾರ ಪುನರ್‌ ಪರಿಶೀಲನೆ ಮಾಡಬೇಕು. ಈ ಸರ್ಕಾರ ಹಿಂದಿನ ಯೋಜನೆಗಳನ್ನು ರದ್ದುಪಡಿಸುವಲ್ಲಿ ಮಾತ್ರ ಆಸಕ್ತಿ ತೋರುತ್ತಿದೆ ಎಂದು ಆರೋಪಿಸಿದ್ದಾರೆ.

ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮನೆ ಕಳೆದುಕೊಂಡವರಿಗೆ ಸರ್ಕಾರ ಚೆಕ್‌ ನೀಡಿಲ್ಲ. ನೂರಾರು ಕೋಟಿ ಜಾಹೀರಾತು ನೀಡಲು ಹಣವಿದೆ. ಆದರೆ ಪರಿಹಾರ ನೀಡಲು ಹಣ ಇಲ್ವಾ? ಎಂದು ಪ್ರಶ್ನಿಸಿದ ಅವರು 25 ಲೋಕಸಭಾ ಸದಸ್ಯರಿದ್ದಾರೆ. ಒಬ್ಬರಾದರೂ ಕೇಂದ್ರದ ಬಳಿ ರಾಜ್ಯದ ಸಮಸ್ಯೆ ಹೇಳಿದ್ದಾರಾ? ರಾಜ್ಯದ ಮುಖ್ಯಮಂತ್ರಿ ಸರ್ವ ಕನ್ನಡಿಗರ ಮುಖ್ಯಮಂತ್ರಿ. ದೆಹಲಿಯಲ್ಲಿ ಸಿಎಂಗೆ ಮಾಡಿದ ಅವಮಾನ ಕನ್ನಡಿಗರಿಗೆ ಮಾಡಿದ ಅವಮಾನ. ಬಿಜೆಪಿಯ ಸಂಸದರು ಜನರಿಂದ ಗೆದ್ದಿಲ್ಲ. ಮೋದಿಯಿಂದ ಗೆದ್ದಿದ್ದಾರೆ ಎಂಬ ಭಾವನೆಯಿದೆ. ಇದಕ್ಕೆ ಮುಂದೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ.

ಉಡುಪಿ SI ಅಮಾನತು ವಿರೋಧ: ಬಿಜೆಪಿ, ಕಾಂಗ್ರೆಸ್ ಒಮ್ಮತ

ಕುಮಾರಸ್ವಾಮಿ ಅವರಿಗೂ ಅಭಿನಂದನೆ ಹೇಳಬೇಕು:

ನೆರೆ ಸಂತ್ರಸ್ತರಿಗೆ ದೇಶದಲ್ಲಿ ಮೊದಲ ಬಾರಿ ಬಾಡಿಗೆ ಹಣ 10 ಸಾವಿರ ರು. ಕೊಟ್ಟಿದ್ದೇವೆ. ಈಗ ಮನೆ ನಿರ್ಮಾಣ ಆಗೋಕೆ ಹಿಂದಿನ ಸರ್ಕಾರವೇ ಕಾರಣ. ಅಂದಿನ ಸಿಎಂ ಕುಮಾರಸ್ವಾಮಿ ಅವರಿಗೂ ಅಭಿನಂದನೆ ಹೇಳಬೇಕು. ಸ್ಥಳೀಯ ಶಾಸಕರು ಮನೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಮನೆ ಕಾಮಗಾರಿ ನಿಧಾನಗತಿ ಹಾಗೂ ಪರಿಹಾರ ಸಿಗದಿದ್ದರೆ ಅದಕ್ಕೆ ಸ್ಥಳೀಯ ಶಾಸಕರೇ ಕಾರಣ ಎಂದ ಖಾದರ್‌, ಭಾವನಾತ್ಮಕ ವಿಚಾರಗಳು ಜನರ ಹೊಟ್ಟೆತುಂಬಿಸುವುದಿಲ್ಲ. ಸರ್ಕಾರ ಕಟ್ಟಕಡೆಯ ವ್ಯಕ್ತಿಯ ಹೊಟ್ಟೆತುಂಬುವಂತೆ ಕೆಲಸ ಮಾಡಬೇಕು. ಈ ಬಗ್ಗೆ ಕಾಂಗ್ರೆಸ್‌ ಜನ ಜಾಗೃತಿ ಮಾಡುತ್ತಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುತೇಕ ಸೀಟುಗಳಿಸುತ್ತಿದೆ. ನಮ್ಮ ಪಕ್ಷದಲ್ಲಿ ಗೊಂದಲ ಇಲ್ಲ. ರಾಜ್ಯದ ಜನತೆ ಮತ್ತೆ ಬಿಜೆಪಿಯನ್ನು ಗೆಲ್ಲಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಡಗು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಮಂಜುನಾಥ್‌ ಕುಮಾರ್‌, ನಗರಾಧ್ಯಕ್ಷ ರಜಾಕ್‌, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹನೀಫ್‌, ಎಂ.ಎ. ಉಸ್ಮಾನ್‌, ಸುರೇಶ್‌ ಭಾಗವಹಿಸಿದ್ದರು.

ಸೋತು ಬೀಗಿದ ಅನರ್ಹರು: ಚುನಾವಣೇಲಿ ಗೆದ್ದರೆ ಸಚಿವ ಪದವಿ ಖಚಿತ