Kodagu summer rain report ಕೊಡಗಿನಲ್ಲಿ ಸುರಿದ ಭಾರಿ ಮಳೆಯು ಬಿಸಿಲಿನಿಂದ ಬಳಲಿದ್ದ ಜನರಿಗೆ ತಂಪೆರೆದಿದೆ. ಆದರೆ, ಪೊನ್ನಂಪೇಟೆ ತಾಲೂಕಿನಲ್ಲಿ ಸಿಡಿಲು ಬಡಿದು ವಿದ್ಯುತ್ ಟ್ರಾನ್ಸ್‌ಫರ್ ಹೊತ್ತಿ ಉರಿದಿದ್ದು, ಆತಂಕ ಸೃಷ್ಟಿಸಿದೆ. ಈ ಮಳೆಯು ಕಾಫಿ ಮತ್ತು ಕರಿಮೆಣಸು ಬೆಳೆಗಾರರಿಗೆ ವರದಾನವಾಗುವ ನಿರೀಕ್ಷೆ

ಕೊಡಗು (ಮಾ.17): ವಿಪರೀತ ಸೆಕೆಯಿಂದಾಗಿ ತತ್ತರಿಸಿ ಹೋಗಿದ್ದ ಜಿಲ್ಲೆಯ ಜನತೆಗೆ ನಿನ್ನೆ ಸಂಜೆ ಸುರಿದ ಮಳೆ ತಂಪೆರಿದೆ. ಇನ್ನೊಂದೆಡೆ ಗುಡುಗು ಸಿಡಿಲಿನರ್ಭಟಕ್ಕೆ ಸಾವು ನೋವು ಹಾನಿ ಸಂಭವಿಸಿದೆ.

ನಿನ್ನೆ ರಾತ್ರಿ ಸುರಿದ ಗುಡುಗು ಮಿಂಚಿನ ಮಳೆಗೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ಮುಗಟಗೇರಿಯ ಅಂಬಲ ಬಳಿ ಸಿಡಿಲು ಬಡಿದು ವಿದ್ಯುತ್ ಟ್ರಾನ್ಸ್‌ಫರ್ ಹೊತ್ತಿ ಉರಿದ ಘಟನೆ ನಡೆದಿದೆ. ಅದೃಷ್ಟವಶಾತ್ ಸಮೀಪದಲ್ಲಿ ಯಾವುದೇ ಮನೆಗಳು ಇಲ್ಲದ್ದರಿಂದ ಅನಾಹುತ ತಪ್ಪಿದಂತಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಮುಂದೆ ಅನಾಹುತವಾಗದಂತೆ ಎಚ್ಚರಿಕೆವಹಿಸಿದರು.

ಹಲವೆಡೆ ಆಲಿಕಲ್ಲು ಮಳೆ

ಸಂಜೆ ವೇಳೆಗೆ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿತ್ತು. ಆದರೂ ಜನ ಖುಷಿಯಿಂದಲೆ ಮಳೆಯೊಂದಿಗೆ ಹೆಜ್ಜೆ ಹಾಕಿ ಮನೆ ಸೇರಿದ್ದಾರೆ.

ಜಿಲ್ಲೆಯ ಶಿರಂಗಾಲ, ಹೆಬ್ಬಾಲೆ, ಬೇತ್ರಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಹೊಲ ಮತ್ತು ಗದ್ದೆಗಳಿಗೆ ನೀರು ನುಗ್ಗುವಂತೆ ಮಳೆ ಸುರಿದಿದ್ದು, ಬಿಸಿಲಿನಿಂದ ಬಸವಳಿದಿದ್ದ ಇಳೆಗೆ ಚೈತನ್ಯ ನೀಡಿದೆ.

ಕಾಫಿ ಮತ್ತು ಕರಿಮೆಣಸು ಬೆಳೆಗಾರರಿಗೆ ಈ ಮಳೆ ವರದಾನವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿದೆ.